ಬೆಂಗಳೂರಿನಲ್ಲಿ 2020 ರ ಬಳಿಕ ಕೋವಿಡ್ ಇಳಿಕೆ, 70 ದಿನದ ನಂತರ 'Zero' ಕೊರೊನಾ ಸಾವು
ಬೆಂಗಳೂರು, ನವೆಂಬರ್ 02: ಬೆಂಗಳೂರಿನಲ್ಲಿ 2020 ರ ಜುಲೈ ಬಳಿಕ ಮೊದಲ ಬಾರಿಗೆ ಮಾಸಿಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯು ಇಳಿಕೆ ಕಂಡಿದೆ. ಅಷ್ಟು ಮಾತ್ರವಲ್ಲದೇ ಸುಮಾರು 70 ದಿನಗಳ ಬಳಿಕ ಮೊದಲ ಬಾರಿಗೆ ಯಾವುದೇ ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿಲ್ಲ.
ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ನಿರಂತರವಾಗಿ ಏರಿಕೆ ಕಾಣುತ್ತಲ್ಲೇ ಬಂದಿದೆ. ಆದರೆ 2020 ರ ಜುಲೈ ಬಳಿಕ ಈಗ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನ ಮಾಸಿಕ ಕೊರೊನಾ ವೈರಸ್ ಸೋಂಕು ಪ್ರಕರಣ ಸಂಖ್ಯೆಯು ಇಳಿಕೆ ಕಂಡಿದೆ. ಹಾಗೆಯೇ ಸುಮಾರು 70 ದಿನಗಳ ಬಳಿಕ ಮೊದಲ ಬಾರಿಗೆ ಜಿರೋ ಕೋವಿಡ್ ಸಾವು ಪ್ರಕರಣಗಳು ದಾಖಲಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಆಗಸ್ಟ್ 23 ರಂದು ಯಾವುದೇ ಕೊರೊನಾ ವೈರಸ್ ಸಾವು ಪ್ರಕರಣಗಳು ವರದಿ ಆಗಿರಲಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡು ಅಂಕಿಗಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ ಹಾಗೂ ಕೊರೊನಾ ವೈರಸ್ ಸೋಂಕಿನಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಯಾರು ಕೂಡಾ ಕೋವಿಡ್ಗೆ ಬಲಿಯಾಗಿಲ್ಲ. ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯು ಈ ಹಿಂದೆ ಮೂರು ಅಂಕಿಗಳಲ್ಲಿ ದಾಖಲಾಗುತ್ತಿದ್ದವು. ಇನ್ನು ಕೊರೊನಾ ಸೋಂಕಿನ ಪಾಸಿಟಿವಿಟಿ ದರವು ಶೇಕಡ 0.25 ಆಗಿದ್ದು, ಕೊರೊನಾ ವೈರಸ್ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ ಸಂಖ್ಯೆಯ ದರವು ಶೇಕಡ 1.06 ಆಗಿದೆ.

ರಾಜ್ಯದಲ್ಲಿ 188 ಮಂದಿಗೆ ಸೋಂಕು
ಇನ್ನು ಕರ್ನಾಟಕದಲ್ಲಿ ಸೋಮವಾರ ಕೊರೊನಾ ವೈರಸ್ ಸೋಂಕು ಪ್ರಕರಣದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಸೋಮವಾರ 188 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸೋಮವಾರ ಇಬ್ಬರು ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು 29,88,521 ಕ್ಕೆ ಏರಿಕೆ ಆಗಿದೆ. ಹಾಗೆಯೇ ಇಬ್ಬರು ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆಯು 38,084 ಕ್ಕೆ ಏರಿದೆ.

318 ಮಂದಿ ಸೋಂಕಿನಿಂದ ಗುಣಮುಖ
ಸೋಮವಾರ ರಾಜ್ಯದಲ್ಲಿ ಒಟ್ಟು 64,418 ಮಂದಿಯ ಕೋವಿಡ್ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆಯು 5.09 ಕೋಟಿಗೆ ಏರಿಕೆ ಕಂಡಿದೆ. ಇನ್ನು ಸೋಮವಾರ 318 ಮಂದಿ ಕೊರೊನಾ ವೈರಸ್ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಕೆ ಹೊಂದಿದವರ ಸಂಖ್ಯೆಯು 29,41,896 ಕ್ಕೆ ಏರಿದೆ.

ಮೈಸೂರಿನಲ್ಲಿ ಮಾತ್ರ ಕೋವಿಡ್ ಸಾವು
ಇನ್ನು ಈ ಸಂದರ್ಭದಲ್ಲೇ ರಾಜ್ಯದಲ್ಲಿ ಸಕ್ರಿಯ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು 8,512 ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್ ಉಲ್ಲೇಖ ಮಾಡಿದೆ. ಬೇರೆ ಜಿಲ್ಲೆಗಳಲ್ಲಿಯೂ ಕೂಡಾ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಮೈಸೂರಿನಲ್ಲಿ 16, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12, ಹಾಸನದಲ್ಲಿ 11 ಹಾಗೂ ಕೊಡಗಿನಲ್ಲಿ 10 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
Recommended Video

ರಾಜ್ಯದಲ್ಲಿ ಸೋಮವಾರ 98,115 ಮಂದಿಗೆ ಕೋವಿಡ್ ಲಸಿಕೆ
ಈ ನಡುವೆ ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲು ಆಗಿಲ್ಲ. ಈ ಸಂದರ್ಭದಲ್ಲೇ 15 ಜಿಲ್ಲೆಗಳಲ್ಲಿ ಏಕ ಅಂಕಿಯ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲು ಆಗಿದೆ. ಎರಡು ಕೊರೊನಾ ವೈರಸ್ ಸೋಂಕು ಸಾವು ಪ್ರಕರಣಗಳು ಮೈಸೂರಿನಲ್ಲಿ ದಾಖಲಾಗಿದ್ದು, ಉಳಿದಂತೆ 30 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ವೈರಸ್ ಸಾವು ಪ್ರಕರಣಗಳು ವರದಿ ಆಗಿಲ್ಲ. ಬಾಗಲಕೋಟೆ, ಬೀದರ್, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ದಾಖಲು ಆಗಿಲ್ಲ. ಹಾಗೆಯೇ ಕೋವಿಡ್ ಸಾವು ಕೂಡಾ ಸಂಭವಿಸಿಲ್ಲ. ರಾಜ್ಯದಲ್ಲಿ ಇದುವರೆಗೆ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 6.54 ಕೋಟಿಗೆ ಏರಿಕೆಯಾಗಿದ್ದು, ಸೋಮವಾರ 98,115 ಜನರಿಗೆ ಲಸಿಕೆ ಹಾಕಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications