ಹೊಲದಲ್ಲಿ ಕಳೆದ ಎಮ್ಮೆ ಫೇಸ್ಬುಕ್ ನಲ್ಲಿ ಸಿಕ್ತು
ಹೊಸಕೋಟೆ, ನವೆಂಬರ್ 30 : ಕಳೆದು ಹೋದ ಎಮ್ಮೆಗಳೆರಡು ಫೇಸ್ ಬುಕ್ ಮೂಲಕ ಸಿಕ್ಕಿ ರೈತನ ಮುಖದಲ್ಲಿ ಸಂತೋಷ ಮೂಡಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಈಸ್ತೂರಿನಲ್ಲಿ ನಡೆದಿದೆ.
ಹೊಸಕೋಟೆಯ ಈಸ್ತೂರಿನಲ್ಲಿ ವಾಸವಿರುವ ದಂಪತಿಗಳಾದ ನಾರಾಯಣಸ್ವಾಮಿ ಮತ್ತು ಯಶೋಧಮ್ಮ ಅವರು ಎರಡು ಎಮ್ಮೆಗಳನ್ನು ಸಾಕಿದ್ದರು. ಯಶೋದಮ್ಮ ಅವರು ಸೋಮವಾರ(ನವೆಂಬರ್ 27)ರಂದು ಮಾಮೂಲಿನಂತೆ ಎಮ್ಮೆಯನ್ನು ಮೇಯಿಸಲು ಹೊಲಕ್ಕೆ ಕರೆದೊಯ್ದಿದ್ದಾಗ ಎಮ್ಮೆಗಳೆರಡು ತಪ್ಪಿಸಿಕೊಂಡು ಬಿಟ್ಟವು.

ನಾರಾಯಣಸ್ವಾಮಿ, ಯಶೋಧಮ್ಮ ಮತ್ತು ಅವರ ಪುತ್ರ ನಾಗೇಶ್ ಮೂವರೂ ಸೇರೆ ಸತತ ಎರಡು ದಿನಗಳ ಕಾಲ ಹುಡುಕಿದರೂ ಕಳೆದ ಎಮ್ಮೆಗಳ ಕುರುಹೇ ಸಿಕ್ಕಿಲ್ಲ, ಕೊನೆಗೆ ನಾರಾಯಣಸ್ವಾಮಿ ಕುಟುಂಬ ಎಮ್ಮೆಗಳ ಮೇಲೆ ಆಸೆ ಬಿಟ್ಟು ಕೈಚೆಲ್ಲಿ ತೂಕು ಬಿಟ್ಟರು.
ಇತ್ತ ತಪ್ಪಿಸಿಕೊಂಡ ಎಮ್ಮೆಗಳು ಅಲ್ಲಿಂದ 12 ಕಿ.ಮೀ ದೂರದ ಕೊಂಡರಹಳ್ಳಿಗೆ ಹೋಗಿವೆ. ಆ ಗ್ರಾಮದ ಯುವಕ ಮೋಹನ್ ಎಂಬುವರು ಅಡ್ಡಾದಿಡ್ಡಿ ಅಲೆದಾಡುತ್ತಿದ್ದ ಎಮ್ಮೆಗಳನ್ನು ನೋಡಿ, ಅವುಗಳನ್ನು ತಮ್ಮ ಮನೆಯ ಬಳಿ ಕಟ್ಟಿಹಾಕಿ, ಅವುಗಳ ಪೊಟೊ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ಕಳೆದು ಕೊಂಡವರು ಸಂಪರ್ಕಿಸಿ ಎಂದು ತಮ್ಮ ಮೊಬೈಲ್ ಸಂಖ್ಯೆ ಸಹ ಪೊಟೊ ಜೊತೆಗೆ ಹಾಕಿದ್ದಾರೆ.
ಅಂದೇ ದಿನ ರಾತ್ರಿ ಎಮ್ಮೆ ಮಾಲಿಕ ನಾರಾಯಣಸ್ವಾಮಿ ಅವರ ಮಗ ನಾಗೇಶ್ ಫೇಸ್ ಬುಕ್ ನೋಡುವಾಗ ಅದರಲ್ಲಿ ಅವರ ಎಮ್ಮೆಗಳ ಪೊಟೊ ಕಾಣಿಸಿದೆ. ಕೂಡಲೇ ನಾಗೇಶ್ ಎಮ್ಮೆಗಳ ಚಿತ್ರ ಹಾಕಿದವರಿಗೆ ಕರೆ ಮಾಡಿ ಪೂರ್ಣ ಮಾಹಿತಿ ಪಡೆದು, ಬೆಳಿಗ್ಗೆಯೇ ಕುಟುಂಬ ಸಮೇತ ಹೋಗಿ ಎಮ್ಮೆಗಳನ್ನು ಕರೆದುಕೊಂಡು ಬಂದಿದ್ದಾರೆ.
ಎಮ್ಮೆಗಳನ್ನು ಕಳೆದುಕೊಂಡು ಕೈಚೆಲ್ಲಿ ಕೂತಿದ್ದವರಿಗೆ ಫೇಸ್ ಬುಕ್ ವರವಾಗಿ ಬಂದು ಕಳೆದ ಎಮ್ಮೆಗಳು ದೊರಕುವಲ್ಲಿ ಸಹಾಯ ಮಾಡಿದೆ. ಮಗ ನಾಗೇಶ್ ಫೇಸ್ ಬುಕ್ ಬಳಸುತ್ತಿದ್ದಕ್ಕೆ ಬಯ್ಯುತ್ತಿದ್ದ ನಾರಾಯಣಸ್ವಾಮಿ ಈಗ ಬಯ್ಯುತ್ತಿಲ್ಲವಂತೆ.!












Click it and Unblock the Notifications