ಮೇಯರ್ ವಿದೇಶ ಪ್ರವಾಸಕ್ಕೆ ಲೋಕಸತ್ತಾ ವಿರೋಧ
ಬೆಂಗಳೂರು, ಜೂ. 12 : ಕಸದ ಸಮಸ್ಯೆ ನಿವಾರಣೆ ಬಗ್ಗೆ ಅಧ್ಯಯನ ನಡೆಸಲು ದುಬೈ ಪ್ರವಾಸ ಕೈಗೊಳ್ಳಲು ನಿರ್ಧರಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಕಟ್ಟೆ ಸತ್ಯನಾರಾಯಣ ಅವರ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಮೇಯರ್ ತಮ್ಮ ಉದ್ದೇಶಿತ ಪ್ರವಾಸವನ್ನು ಕೈಬಿಡಬೇಕು ಎಂದು ಲೋಕಸತ್ತಾ ಪಕ್ಷ ಆಗ್ರಹಿಸಿದೆ.
ಮೇಯರ್ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಿರುವ ಲೋಕಸತ್ತಾ ಪಕ್ಷ, ಮೇಯರ್ ಅವರ ಉದ್ದೇಶಿತ ದುಬೈ ಪ್ರವಾಸ ಈ ಹಿಂದಿನ ವಿದೇಶಿ ಪ್ರವಾಸಗಳಂತೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಅನವಶ್ಯಕ ಖರ್ಚು ಮತ್ತು ಕಾಲಹರಣಕ್ಕೆ ಕಾರಣವಾಗುತ್ತದೆ ಎಂದು ಪಕ್ಷ ಆರೋಪಿಸಿದೆ. [ಕಸದ ಸಮಸ್ಯೆಗೆ ದುಬೈ, ಸ್ಯಾನ್ ಫ್ರಾನ್ಸಿಸ್ಕೋ ನೆರವು]

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರ್ಥಿಕ ಸಂಕಷ್ಟದಲ್ಲಿದೆ ಮತ್ತು ಇದರಿಂದ ಪಾರಾಗಲು ಸಾರ್ವಜನಿಕ ಕಟ್ಟಡಗಳನ್ನು ಆಡವಿಟ್ಟಿರುವುದು ಮೇಯರ್ ಅವರಿಗೆ ಸಹ ತಿಳಿದಿದೆ. ಆದರೂ ಸಹ ವಿದೇಶ ಪ್ರವಾಸ ಕೈಗೊಂಡು ದುಂದುವೆಚ್ಚ ಮಾಡಲು ಹೊರಟಿರುವುದು ಖಂಡನೀಯ. ಆದ್ದರಿಂದ ಲೋಕಸತ್ತಾ ಪಕ್ಷವು ಈ ವಿದೇಶಿ ಪ್ರವಾಸವನ್ನು ಈ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. [ಕಸ ಗಲಾಟೆ: ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ]
ಹಿಂದಿನ ಪ್ರವಾಸಗಳ ಕಥೆ ಏನು : ಬಿಬಿಎಂಪಿ ಮೇಯರ್ ಗಳು ಹಿಂದೆಯೂ ವಿದೇಶ ಪ್ರವಾಸ ಕೈಗೊಂಡು ಅನೇಕ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಸದ್ಯ ಮೇಯರ್ ಪ್ರವಾಸ ಕೈಗೊಳ್ಳುವ ಮೊದಲು ಈ ಹಿಂದಿನ ಪ್ರವಾಸಗಳಿಂದ ಆಗಿರುವ ಪ್ರಯೋಜನಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ. [ಸಚಿವರ ಮನೆ ಸುತ್ತ ಕಸ ಎತ್ತಿ ಲೋಕಸತ್ತಾ ಪ್ರತಿಭಟನೆ]
ಮೇಯರ್ ಕೈಗೊಳ್ಳಲು ಉದ್ದೇಶಿಸಿರುವ ಪ್ರವಾಸ ಮತ್ತೊಂದು ಮೋಜು ಮಸ್ತಿಯ ಪ್ರವಾಸವಾಗಲಿದೆಯೆ ಹೊರತು ಮಂಡೂರಿನ ಅಥವಾ ಬೆಂಗಳೂರಿನ ಜನರಿಗೆ ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಬೆಂಗಳೂರಿನಲ್ಲಿಯೇ ಅನೇಕರು ತಮ್ಮ ಸ್ವಂತ ಶ್ರಮದಿಂದ ತಮ್ಮ ತಮ್ಮ ಪ್ರದೇಶಗಳಲ್ಲಿ ಪರಿಸರಸ್ನೇಹಿ ಮತ್ತು ಕಡಿಮೆ ಖರ್ಚಿನ ಅನೇಕ ವಿಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಇವುಗಳ ಬಗ್ಗೆ ಮೊದಲು ಅಧ್ಯಯನ ನಡೆಸಲಿ ಎಂದು ಪಕ್ಷ ಸಲಹೆ ನೀಡಿದೆ.
ಮಹಾಪೌರರು ಮತ್ತು ಪಾಲಿಕೆಯ ಅಧಿಕಾರಿಗಳು ಆಸಕ್ತಿ ತೋರಿಸಿದರೆ, ಬೆಂಗಳೂರಿನಲ್ಲೇ ಇರುವ ಅನೇಕ ಯಶಸ್ವಿ ಕಸ ವಿಲೇವಾರಿ ಪದ್ಧತಿಗಳನ್ನು ಲೋಕಸತ್ತಾ ಪಕ್ಷದ ವತಿಯಿಂದ ಅವರಿಗೆ ತೋರಿಸಲಾಗುವುದು, ಅದು ಪಾಲಿಕೆಗೆ ಯಾವುದೇ ಹೊರೆಯಾಗದ ರೀತಿಯಲ್ಲಿ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಪಕ್ಷ ಭರವಸೆ ನೀಡಿದೆ.












Click it and Unblock the Notifications