ಪ್ರಾಥಮಿಕ ಶಾಲಾ ಶಿಕ್ಷಕನ ಬಳಿ 1 ಕೋಟಿ ಆಸ್ತಿ!
ಬೆಂಗಳೂರು, ಅ, 31 : ಬುಧವಾರ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ರಾಜ್ಯದ ನಾಲ್ಕು ಜಲ್ಲೆಗಳಲ್ಲಿ ದಾಳಿ ನಡೆಸಿ 5.46 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕನ ಬಳಿ 1 ಕೋಟಿ ಆಸ್ತಿ ನೋಡಿ ಲೋಕಾಯುಕ್ತರೇ ಬೆಚ್ಚಿ ಬಿದ್ದಿದ್ದಾರೆ.
ಬುಧವಾರ ದಾವಣಗೆರೆ, ಮೈಸೂರು, ಗುಲ್ಬರ್ಗ ಮತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ದಾಖಲೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಸುಮಾರು 5.46 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕ ಮೋಹನ್ ಬಳಿ ಸುಮಾರು 1 ಕೋಟಿ 10 ಲಕ್ಷ, ಗುಲ್ಬರ್ಗದ ಕೆಪಿಟಿಸಿಎಲ್ ಎಇಇ ವೀರಭದ್ರಪ್ಪ ಸಾಲಿಮನಿ ಬಳಿ 1.80 ಕೋಟಿ, ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶಂಕರಪ್ಪ ಬಳಿ ಸುಮಾರು 73 ಲಕ್ಷ, ದಾವಣಗೆರೆಯ ಜಗಳೂರು ಪಟ್ಟಣ ಪಂಚಾಯತ್ ಇಂಜಿನಿಯರ್ ಶ್ರೀನಿವಾಸ್ ಬಳಿ 40 ಲಕ್ಷ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ಶಾಲಾ ಶಿಕ್ಷಕನ ಬಳಿ 1 ಕೋಟಿ ಆಸ್ತಿ : ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸತ್ಯಾಗಾಲ ಎ.ಜಿ.ಕಾವಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿರುವ ಮೋಹನ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಅವರ ಬಳಿ ಆದಾಯಕ್ಕೂ ಮೀರಿ 1 ಕೋಟಿ 9 ಲಕ್ಷದ 93 ಸಾವಿರಕ್ಕೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ.
ಶಿಕ್ಷಕರ ಹೆಸರಿನಲ್ಲಿ ಎರಡು ಅಂತಸ್ತಿನ 2 ಮನೆ, ಒಟ್ಟು 360 ಗ್ರಾಂ ಚಿನ್ನ, 1 ಕೆ.ಜಿ. ಬೆಳ್ಳಿ, 20 ಎಕರೆ ಜಮೀನು, ಬೇನಾಮಿ ಹೆಸರಿನಲ್ಲಿ ಜೀಪ್, 2 ಐಷಾರಾಮಿ ಕಾರುಗಳು, 4 ದ್ವಿಚಕ್ರ ವಾಹನಗಳು. 93,000 ರೂ. ನಗದು ದೊರಕಿವೆ. ಇವರಿಗೆ ಸೇರಿದ ಅನೇಕ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆಸ್ತಿ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ.
ಆರು ಜೆಸಿಬಿ ಒಡೆಯ : ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯತ್ ಇಂಜಿನಿಯರ್ ಶ್ರೀನಿವಾಸ್ ಬಳಿ 40 ಲಕ್ಷ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರ ಮನೆಯಲ್ಲಿ ಬರೋಬ್ಬರಿ ಆರು ಜೆಸಿಬಿ, ಒಂದು ಹಿಟಾಚಿ ಯಂತ್ರಗಳನ್ನು ಕಂಡು ಲೋಕಾಯುಕ್ತ ಅಧಿಕಾರಗಳೇ ಬೆಚ್ಚಿ ಬಿದ್ದಿದ್ದಾರೆ.












Click it and Unblock the Notifications