ಮಾರ್ಚ್ 31ರಂದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ರಣಕಹಳೆ: ಜಂಟಿ ಘೋಷಣೆ
Recommended Video
ಬೆಂಗಳೂರು, ಮಾರ್ಚ್ 19: ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಜೆಡಿಎಸ್ -ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ಮಾಡುತ್ತಿವೆ. ಈ ಹಿಂದಿ ಕೆಲವು ಉಪ ಚುನಾವಣೆ, ಚುನಾವಣೆಯಲ್ಲಿ ನಮ್ಮ ಮೈತ್ರಿ ಕೂಟ ಗೆಲುವು ಕಂಡಿದೆ. ಬಿಜೆಪಿಯನ್ನು ರಾಜ್ಯ ಮಟ್ಟದಲ್ಲಿ- ರಾಷ್ಟ್ರಮಟ್ಟದಲ್ಲಿ ಸೋಲಿಸುವುದು ನಮ್ಮ ಉದ್ದೇಶ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್- ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಾದ್ಯಂತ ಒಟ್ಟಾಗಿ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೇವೆ. ಮಾರ್ಚ್ 31ರಂದು ಬೆಂಗಳೂರು ಹಾಗೂ ಮೈಸೂರಿನ ಆಸುಪಾಸಿನಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಬಲ ಪ್ರದರ್ಶನ ಮಾಡುವಂಥ ಸಾರ್ವಜನಿಕ ಸಭೆಯನ್ನು ನಡೆಸಲಿದ್ದೇವೆ ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆ ದೇವೇಗೌಡರ ಕುಟುಂಬಕ್ಕೆ ಅಗ್ನಿಪರೀಕ್ಷೆ?
ಆ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ನಿಂದ ದೇವೇಗೌಡರು ಸೇರಿದಂತೆ ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಭಾಗವಹಿಸಲಿದ್ದಾರೆ. ಈ ಸಭೆಯು ನಮ್ಮ ಅಧಿಕೃತ ಚುನಾವಣಾ ಪ್ರಚಾರದ ಚಾಲನೆ ಆಗಿರುತ್ತದೆ. ಈ ರಣ ಕಹಳೆಯ ಪರಿಣಾಮ ಕರ್ನಾಟಕವೊಂದೇ ಅಲ್ಲ, ಅಕ್ಕಪಕ್ಕದ ರಾಜ್ಯಗಳಲ್ಲೂ ಆಗಲಿದೆ. ಈ ಹಿಂದೆ ಜಾತ್ಯತೀತ ಶಕ್ತಿಗಳ ಮತ ವಿಭಜನೆ ಆಗುತ್ತಿತ್ತು. ಈಗ ಹಾಗೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಮಾರ್ಚ್ 31ರಿಂದ ಜಂಟಿ ಪ್ರಚಾರ ಸಭೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮತದಾರರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಎರಡೂ ಪಕ್ಷಗಳ ಮುಖಂಡರು ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಿದ್ದೇವೆ. ರಾಜ್ಯದಲ್ಲಿ ಇಪ್ಪತ್ತೆಂಟು ಸ್ಥಾನಗಳ ಪೈಕಿ ಅಷ್ಟೂ ಸ್ಥಾನಗಳನ್ನು ಗೆಲ್ಲುವುದು ನಮ್ಮ ಉದ್ದೇಶ. ನಮ್ಮಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿದ್ದು, ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳು ಇದ್ದಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರ ನೇತೃತ್ವದಲ್ಲಿ ಬಗೆಹರಿಸುತ್ತಾರೆ. ರಾಹುಲ್ ಗಾಂಧಿ ಅವರು ದೇಶದ ವಿವಿಧೆಡೆ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಅವರ ವೇಳಾಪಟ್ಟಿಯನ್ನು ನೋಡಿಕೊಂಡು, ಕರ್ನಾಟಕದಲ್ಲಿ ಚುನಾವಣೆ ಪ್ರಚಾರಕ್ಕೆ ದಿನಾಂಕ ನಿಗದಿ ಪಡಿಸಲಿದ್ದೇವೆ. ಮಾರ್ಚ್ 31ರಿಂದ ಜಂಟಿ ಪ್ರಚಾರ ಸಭೆಗಳು ನಡೆಯಲಿವೆ. ಒಟ್ಟಾರೆ ನಮ್ಮ ಗುರಿ ದೇಶದಲ್ಲಿ ಬದಲಾವಣೆ ತರುವುದು. ಅದು ಕರ್ನಾಟಕದಿಂದಲೇ ಆರಂಭವಾಗಲಿದೆ. ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಆದ ಮೇಲೆ ದೇಶದ ವಿವಿಧೆಡೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ಪಡೆದು, ಜಯ ಗಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೆಗೌಡ ಮಾತನಾಡಿ, ರಾಹುಲ್ ಗಾಂಧಿ ಅವರ ಚುನಾವಣೆ ಪ್ರಚಾರ ಸಭೆಗೆ ವ್ಯವಸ್ಥೆ ಮಾಡುವುದು ಆದ್ಯತೆ. ಪ್ರಚಾರಕ್ಕೆ ಸಮಯ ಬಹಳ ಕಡಿಮೆ ಇದೆ. ಈ ಚುನಾವಣೆಯಲ್ಲಿ ಸಣ್ಣ-ಪುಟ್ಟ ವ್ಯತ್ಯಾಸ ಇದೆಯೋ ಅದನ್ನು ಶಮನ ಮಾಡುವುದು ಪ್ರಮುಖ ಆದ್ಯತೆ. ನಾನು, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಪರಮೇಶ್ವರ್ ಸೇರಿ ಬಿಕ್ಕಟ್ಟು ಶಮನ ಮಾಡಲು ಪ್ರಯತ್ನಿಸುತ್ತೇವೆ. ಎರಡೂ ಪಕ್ಷಗಳ ಮುಖಂಡರು ಯಾವುದೇ ಕಾರಣಕ್ಕೂ ಒಡಕು ಮೂಡಿಸುವ ಮಾತನಾಡಬಾರದು. ಬಿಕ್ಕಟ್ಟು ಇರುವ ಕಡೆಯಲ್ಲಿ ಸರಿಪಡಿಸಿ, ಯಶಸ್ಸು ಪಡೆಯಲಾಗುವುದು. ಕಾಂಗ್ರೆಸ್ ನವರು ಇಪ್ಪತ್ತು ಸ್ಥಾನ ಪಡೆದಿದ್ದಾರೆ. ಜೆಡಿಎಸ್ ಗೆ ಎಂಟು ಕ್ಷೇತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ಗೆ ಎಷ್ಟು ಸೀಟು?, ಮಾ.16ರಂದು ಅಧಿಕೃತ ಘೋಷಣೆ
ಸಂಸತ್ ಗೆ ನನ್ನ ಅಗತ್ಯವಿದೆಯೇ ಎಂದ ದೇವೇಗೌಡರು
ಮೈತ್ರಿ ಸರಕಾರ ಏನು ಕೆಲಸ ಮಾಡಿದೆ, ಸಿದ್ದರಾಮಯ್ಯ ಅವರ ಸರಕಾರ ಏನು ಕೆಲಸ ಮಾಡಿದೆ ಎಂಬುದನ್ನು ಜನರ ಮುಂದೆ ಇಡುತ್ತೇವೆ ಎಂದು ಅವರು ಹೇಳಿದರು. ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದಾಗ, ಸಂಸತ್ತಿಗೆ ನನ್ನ ಅಗತ್ಯ ಇದೆಯೇ ಎಂಬುದನ್ನು ಯೋಚಿಸುತ್ತಿದ್ದೇನೆ ಎಂದು ಹೇಳಿದರು. ಆದರೆ ಯಾವುದೂ ಅಂತಿಮವಾಗಿಲ್ಲ್ ಎಂಬುದನ್ನು ಕೂಡ ಹೇಳಿದ್ದಾರೆ. ಇನ್ನು ಉತ್ತರ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ವಿವಿಧ ಹೆಸರು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಹೌದು ಹಲವರು ಹೆಸರುಗಳು ಇವೆ ಎಂದು ಉತ್ತರಿಸಿದ್ದಾರೆ.
ಕಾಂಗ್ರೆಸ್ ಮತಗಳನ್ನು ಪಡೆಯುವುದು ಜೆಡಿಎಸ್ ಮುಂದಿನ ಸವಾಲು
ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಯಾರನ್ನೂ ಬಂಧಿಸಿಲ್ಲ
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದವರನ್ನು ಬಂಧಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಾರನ್ನೂ ಬಂಧಿಸಿಲ್ಲ. ಹಾಗೆ ಬಂಧಿಸಿದ್ದರೆ ಒಂದೋ ನ್ಯಾಯಾಧೀಶರ ಮುಂದೆ ಕರೆದೊಯ್ಯಬೇಕು ಹಾಗೂ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಆದರೆ ಯಾರನ್ನೂ ಪೊಲೀಸರು ಬಂಧಿಸಿಲ್ಲ ಎಂದು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಮತ್ತೊಂದು ಪಕ್ಷದವರ ಕಾರ್ಯಕ್ರಮ ನಡೆಯುವಾಗ ಅಲ್ಲಿ ಹೋಗಿ ಗಲಾಟೆ ಮಾಡುವುದು ಸಭ್ಯತೆ ಇಲ್ಲ. ಅಮಿತ್ ಶಾ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.