ನನಗೆ ಇದು ಬಲವಾದ ಕಪಾಳಮೋಕ್ಷ: ಸೋಲಿನ ಬಳಿಕ ಪ್ರಕಾಶ್ ರೈ ಹೇಳಿಕೆ
ಬೆಂಗಳೂರು, ಮೇ 23: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಕಾಶ್ ರೈ ಹತ್ತು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಅವರು ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಯಾವುದೇ ಹಂತದಲ್ಲಿ ಪೈಪೋಟಿ ನೀಡಲು ಸಾಧ್ಯವಾಗದೆ ಹೀನಾಯ ಸೋಲೊಪ್ಪಿಕೊಂಡಿದ್ದಾರೆ.
ಈ ಸೋಲು ತಮಗೆ ಮಾಡಿದ ಬಲವಾದ ಕಪಾಳಮೋಕ್ಷ ಎಂದು ಅವರು ಹೇಳಿದ್ದಾರೆ. ಸೋತರೂ ತಮ್ಮ ನಿಲುವಿನಲ್ಲಿ, ಹೋರಾಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಜಾತ್ಯತೀತ ಭಾರತಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇಲ್ಲಿ ಬಿಜೆಪಿ ಸಂಸದ ಪಿ.ಸಿ. ಮೋಹನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಡುವೆ ನೇರ ಪೈಪೋಟಿ ನಡೆದಿತ್ತು. ಮೊದಲು ತಮಗೆ ಕಾಂಗ್ರೆಸ್ ಬೆಂಬಲ ನೀಡಬಹುದು ಎಂದು ನಿರೀಕ್ಷಿಸಿದ್ದ ಅವರಿಗೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮುಖಭಂಗವನ್ನುಂಟು ಮಾಡಿತ್ತು.
ಸುಮಲತಾ ಅವರು ಅಂಬರೀಷ್ ಜೊತೆ ಇದ್ದವರು. ಅವರು ಮಂಡ್ಯದ ಸೊಸೆ. ಅವರು ರಾಜಕೀಯದ ಕುರಿತು ಅನುಭವಿಯಂತೆ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಎಂದು ಹೇಳಲಾಗದು. ನಾನು ಅವರಿಗೆ ಬೆಂಬಲವಾಗಿದ್ದೇನೆ ಎಂದು ಪ್ರಕಾಶ್ ರೈ ಹೇಳಿದ್ದರು. ಆದರೆ, ಪ್ರಕಾಶ್ ರೈ ಹೀನಾಯ ಸೋಲು ಅನುಭವಿಸಿದ್ದರೆ, ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
|
ನನಗೆ ಕಪಾಳಮೋಕ್ಷ
'ನನ್ನ ಮುಖಕ್ಕೆ ಇದು ಬಲವಾದ ಗುದ್ದು. ಹೆಚ್ಚು ನಿಂದನೆಗಳು, ಟ್ರಾಲ್, ಅಪಮಾನಗಳು ನನಗೆ ಎದುರಾಗಲಿವೆ. ಆದರೆ, ನನ್ನ ನಿಲುವಿಗೆ ನಾನು ಬದ್ಧನಾಗಿರುತ್ತೇನೆ. ಜಾತ್ಯತೀತ ಭಾರತಕ್ಕಾಗಿ ನನ್ನ ಹೋರಾಟವು ಮುಂದುವರಿಯಲಿದೆ. ಕಠಿಣವಾದ ಪ್ರಯಾಣ ಈಗಷ್ಟೇ ಆರಂಭವಾಗಿದೆ. ನನ್ನ ಈ ಪ್ರಯಾಣದಲ್ಲಿ ಜತೆಗಿದ್ದ ಎಲ್ಲರಿಗೂ ಧನ್ಯವಾದಗಳು. ಜೈ ಹಿಂದ್' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
|
ರಘುಪತಿ ರಾಘವ ರಾಜಾರಾಂ!
"ಚುನಾವಣೋತ್ತರ ಸಮೀಕ್ಷೆ ಫಲಿತಾಂಶದ ಮೂಲಕ ಕೆಲವರು ಕೆಲದಿನ ಹಗಲುಗನಸು ಕಾಣಲು ಬಿಡಿ. ಆದರೆ ಮೇ 23 ರಂದು ನಿಮ್ಮ ಹಗಲುಗನಸು ಸುಳ್ಳು ಎಂಬುದನ್ನು ಜನರು ಸಾಬೀತುಪಡಿಸುತ್ತಾರೆ. ಅಲ್ಲಿಯವರೆಗೂ ಮಹಾತ್ಮಾ ಗಾಂಧಿಯವರ ಈ ಹಾಡನ್ನು ಹಾಡುತ್ತ, ಸಂಭ್ರಮಿಸೋಣ" ಎಂದು ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸುತ್ತವೆ ಎಂಬ ಭವಿಷ್ಯ ನುಡಿದ ಬಳಿಕ 'ರಘುಪತಿ ರಾಘವ ರಾಜಾರಾಂ' ಹಾಡಿನೊಂದಿಗಿನ ವಿಡಿಯೋವನ್ನು ಪ್ರಕಾಶ್ ರೈ ಟ್ವೀಟ್ ಮಾಡಿದ್ದರು.
ಬೆಂಗಳೂರು ಕೇಂದ್ರ: ಕಾಂಗ್ರೆಸ್-ಬಿಜೆಪಿ ನಡುವೆ ನಿಕಟ ಸ್ಪರ್ಧೆ
ರಿಜ್ವಾನ್ ವಿರುದ್ಧ ಹರಿಹಾಯ್ದಿದ್ದ ರೈ
'ರಿಜ್ವಾನ್ ಅರ್ಷದ್ ಅವರು ತುಂಬಾ ನಾಚಿಕೆಗೇಡಿ. ಅವರು ಸ್ವಂತ ಹೆಸರಿನಿಂದ ಮತಗಳನ್ನು ಸಂಪಾದಿಸಿಕೊಳ್ಳಲಾರರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ಎಂಬುದು ಸಾಬೀತಾಗಿದೆ' ಎಂದು ಪ್ರಕಾಶ್ ರೈ ಫೇಸ್ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕಾಶ್ ರೈ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ರಿಜ್ವಾನ್ ಜತೆಗಿದ್ದ ಚಿತ್ರವನ್ನು ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಪ್ರಕಾಶ್ ರೈ ಅವರು ರಿಜ್ವಾನ್ಗೆ ಬೆಂಬಲ ನೀಡಿದ್ದಾರೆ ಎಂದು ಪ್ರಚಾರ ಮಾಡಿದ್ದರು.
ಕಾಂಗ್ರೆಸ್-ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದರು
ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಕೇವಲ ರಾಜಕೀಯ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿವೆ. ಆದರೆ ಕಾರ್ಯಕರ್ತರಿಗೆ ಮರ್ಯಾದೆ ಇದೆ ಅವರು ಮೈತ್ರಿಗೆ ಒಪ್ಪುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು 'ನಾವು ಜಾತ್ಯಾತೀತರು' ಎಂದ ತಕ್ಷಣ ನಾವದನ್ನು ನಂಬಿಬಿಡಬೇಕಾ. ಬಿಜೆಪಿಯನ್ನು ಮಾತ್ರವೇ ಏಕೆ ಬೈಯಬೇಕು? ಅವರು ಮಾತ್ರವೇ ಕೋಮುವಾದಿಗಳಾ? ಎಂದು ಪ್ರಕಾಶ್ ರೈ ಹರಿಹಾಯ್ದಿದ್ದರು.