ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂದೆ ಲಂಬಾಣಿ ನಾಯಕರ ಆಕ್ರೋಶ, ಕಾರಣವೇನು?
ಬೆಂಗಳೂರು, ಏಪ್ರಿಲ್.06: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಲಂಬಾಣಿ/ ಬಂಜಾರ ಸಮುದಾಯ ತಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಈಗ ಲೋಕಸಭಾ ಚುನಾವಣೆ ವೇಳೆಯಲ್ಲಿಯೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಆಂತರಿಕ ಚುನಾವಣಾ ತಯಾರಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಎದುರಿಗೆ ಕಾಂಗ್ರೆಸ್ ಲಂಬಾಣಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಿಗೆ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಸಭೆಯನ್ನು ಕರೆದಿತ್ತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಲಂಬಾಣಿ ಸಮುದಾಯದ ಮುಖಂಡರು ಅಳಲು ತೋಡಿಕೊಂಡಿದ್ದಾರೆ. ಕಳೆದ ಬಾರಿ ಕೂಡ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದರಿ. ಸಮುದಾಯದ ನಾಯಕರ ಬೇಸರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪೇಚಿಗೆ ಸಿಲುಕಿದ್ದಾರೆ.
1972 ರಿಂದ ಮೊದಲ ಬಾರಿಗೆ ಸಂಪುಟದಲ್ಲಿ ಲಂಬಾಣಿ ಸಚಿವರಿಲ್ಲ ಎಂದು ಮಾಹಿತಿ ನೀಡಿದ್ದು, ಯಾವುದೇ ಲಂಬಾಣಿ ಸಮುದಾಯದ ಸದಸ್ಯರನ್ನು ಪಕ್ಷದ ಪದಾಧಿಕಾರಿಯನ್ನಾಗಿ ಮಾಡಲಾಗಿಲ್ಲ. ನಾವು ಯಾವ ಮುಖ ಇಟ್ಟುಕೊಂಡು ಸಮುದಾಯದ ಮತಗಳನ್ನು ಕೇಳಬೇಕು? ಎಂದು ಲಂಬಾಣಿ ಮುಖಂಡರು ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆಂತರಿಕ ಸಭೆಯಲ್ಲಿ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮತ್ತು ಸೂಕ್ಷ್ಮ ಗುಂಪುಗಳನ್ನು ಒಳಗೊಂಡಂತೆ ಯಾವುದೇ ಸಮುದಾಯವನ್ನು ನಿರ್ಲಕ್ಷಿಸಬಾರದು ಎಂದು ಹೇಳಿದಾಗ ಲಂಬಾಣಿ ಸಮುದಾಯದ ನಾಯಕರು ರೊಚ್ಚಿಗೆದ್ದಿದ್ದಾರೆ. ಎಂಎಲ್ಸಿ ಪ್ರಕಾಶ್ ರಾಥೋಡ್ ತಮ್ಮ ಸಮುದಾಯದ ಅಸಮಾಧಾನವನ್ನು ಕಾಂಗ್ರೆಸ್ ಹಿರಿಯ ನಾಯಕರ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಲಂಬಾಣಿಗರನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ, ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಶಿಫಾರಸು ಮಾಡಿದ ನಂತರ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ 90 ಪ್ರತಿಶತ ಲಂಬಾಣಿಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಂಬಾಣಿ ಸಮುದಾಯಕ್ಕೆ ಲೋಕಸಭೆ ಟಿಕೆಟ್ ಸಿಕ್ಕಿಲ್ಲ ಎಂದು ಪ್ರಕಾಶ್ ರಾಥೋಡ್ ದೂರಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ನ ಕಾರ್ಯಾಧ್ಯಕ್ಷರನ್ನಾಗಿ ಲಂಬಾಣಿ ಸಮುದಾಯದ ನಾಯಕರನ್ನು ನೇಮಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ ಎಂದು ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ. ತಕ್ಷಣ ಮಧ್ಯೆ ಮಾತನಾಡಿರುವ ಡಿಕೆ ಶಿವಕುಮಾರ್, ಈ ವಿಷಯದ ಚರ್ಚೆಗೆ ಇದು ಸೂಕ್ತ ವೇದಿಕೆ ಅಲ್ಲ ಎಂದು ಪ್ರಕಾಶ್ ರಾಥೋಡ್ ಅವರನ್ನು ಕೂರಿಸಲು ಯತ್ನಿಸಿದ್ದಾರೆ.
ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಕೂಡ ಪ್ರಕಾರ್ ರಾಠೋಡ್ ಮಾತಿಗೆ ಜೊತೆಯಾಗಿದ್ದಾರೆ. ಮನೋಹರ್ ಐನಾಪುರ ಕೂಡ ಮಾತನಾಡಲು ಪ್ರಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಅವರು, ಭೀಮಾ ನಾಯ್ಕ್ (ಕೆಎಂಎಫ್ ಅಧ್ಯಕ್ಷ) ಮತ್ತು ರುದ್ರಪ್ಪ ಲಮಾಣಿ (ಉಪ ಸ್ಪೀಕರ್) ಅವರಂತಹವರಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಗುಲ್ಬರ್ಗ, ಬೀದರ್, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಕೊಪ್ಪಳ ಮತ್ತು ಇತರ ಪ್ರದೇಶಗಳಲ್ಲಿ ಲಂಬಾಣಿ ಸಮುದಾಯದ ಹೆಚ್ಚಾಗಿದ್ದು, ಮತದಾರರು ಜಾಸ್ತಿಯಿದ್ದಾರೆ..












Click it and Unblock the Notifications