ಬಿಬಿಎಂಪಿ ಮೇಯರ್ ಹುದ್ದೆಗೇರಲು ಪೈಪೋಟಿ ಆರಂಭ
ಬೆಂಗಳೂರು, ಸೆಪ್ಟೆಂಬರ್ 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟಿರುವ ಜೆಡಿಎಸ್ ಇನ್ನೂ ತನ್ನ ಪಟ್ಟು ಸಡಿಲಿಸಿಲ್ಲ. ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.
ಈ ಬಾರಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಯವರಿಗೆ, ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. 266 ಮತದಾರರು ಸೆ.28ರಂದು ಬೆಂಗಳೂರಿನ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡಲಿದ್ದಾರೆ.

ಮೇಯರ್ ಸ್ಥಾನವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿತ್ತು. ಸಚಿವರಾದ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
'ಮೇಯರ್ ಹುದ್ದೆಯ ಜೊತೆ ಸ್ಥಾಯಿ ಸಮಿತಿಗಳಲ್ಲಿಯೂ ಬದಲಾವಣೆ ಕೇಳಿದ್ದೇವೆ. ಕಾಂಗ್ರೆಸ್ ನಾಯಕರು ಒಪ್ಪಬಹುದು ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ ಬಳಿಕ ತೀರ್ಮಾನ ತಿಳಿಸುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ' ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ತಿಳಿಸಿದ್ದಾರೆ.
ಮೇಯರ್ ಪಟ್ಟಕ್ಕೆ ಪೈಪೋಟಿ : ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ದೇವರಜೀವನಹಳ್ಳಿ ವಾರ್ಡ್ನ ಆರ್ ಸಂಪತ್ ಹಾಗೂ ಸುಭಾಷ್ ನಗರ ವಾರ್ಡ್ನ ಎಲ್.ಗೋವಿಂದರಾಜು ನಡುವೆ ಪೈಪೋಟಿ ಇದೆ. ಎಚ್.ಬಿ.ಆರ್.ವಾರ್ಡ್ನ ಪಿ.ಆನಂದ್, ಬೇಗೂರು ವಾರ್ಡ್ನ ಎಂ.ಅಂಜಿನಪ್ಪ, ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿನಗರ ವಾರ್ಡ್ನ ಎಂ.ವೇಲು ನಾಯ್ಕರ್ ಮೇಯರ್ ಪಟ್ಟದ ಆಕಾಂಕ್ಷಿಗಳಾಗಿದ್ದಾರೆ.
ಮೇಯರ್ ಹುದ್ದೆಗೇರಲು ಮ್ಯಾಜಿಕ್ ಸಂಖ್ಯೆ 134. ಬಿಜೆಪಿ 126 ಮತಗಳನ್ನು ಹೊಂದಿದೆ. ಕಾಂಗ್ರೆಸ್ 116, ಜೆಡಿಎಸ್ 24 ಮತಗಳನ್ನು ಹೊಂದಿದೆ. ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಜೆಡಿಎಸ್ ಮೇಯರ್ ಪಟ್ಟವನ್ನು ಬಿಟ್ಟುಕೊಡಲಿದೆಯೇ? ಕಾದು ನೋಡಬೇಕು.












Click it and Unblock the Notifications