ಬನ್ನೇರುಘಟ್ಟದಲ್ಲಿ ಸಿಬ್ಬಂದಿ ಮೇಲೆ ಸಿಂಹದ ದಾಳಿ
ಬೆಂಗಳೂರು, ಮಾ.9 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹವೊಂದು ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಸಿಂಹದ ದಾಳಿಯಿಂದ ಗಾಯಗೊಂಡ ಸಿಬ್ಬಂದಿಯನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ 4 ವರ್ಷದ ನಕುಲ್ ಎಂಬ ಸಿಂಹಕ್ಕೆ ಚಿಕಿತ್ಸೆ ನೀಡಬೇಕಾಗಿತ್ತು. ಆದ್ದರಿಂದ ಸಿಬ್ಬಂದಿ, ವೈದ್ಯರು ಸಿಂಹದ ಬೋನಿನ ಬಳಿ ಹೋಗಿದ್ದರು. ಕೃಷ್ಣ (35) ಎಂಬ ಸಿಬ್ಬಂದಿ ಬೋನು ಸ್ವಚ್ಛಗೊಳಿಸುವಾಗ, ನಕುಲ್ ಕೃಷ್ಣ ಅವರ ಮೇಲೆ ದಾಳಿ ಮಾಡಿದೆ.

ಸಿಂಹದ ದಾಳಿಗೆ ಒಳಗಾದ ಕೃಷ್ಣ ಅವರ ಕುತ್ತಿಗೆ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಹೊಟ್ಟೆಗೆ ಸಿಂಹ ಕಚ್ಚಿರುವುದರಿಂದ ಕರುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. 48 ಗಂಟೆಗಳ ಕಾಲ ಕೃಷ್ಣ ಅವರ ಆರೋಗ್ಯದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೋನನ್ನು ಸ್ವಚ್ಛಗೊಳಿಸುವಾಗ ಬೋನಿನ ಗೇಟನ್ನು ಮುರಿದ ನಕುಲ್ ಕೃಷ್ಣ ಅವರ ಮೇಲೆ ದಾಳಿ ಮಾಡಿದೆ. ತಕ್ಷಣ ಅವರ ಜೊತೆಯಲ್ಲಿದ್ದ ಸಿಬ್ಬಂದಿಗಳು ಸಿಂಹಕ್ಕೆ ದೊಣ್ಣೆಯಿಂದ ಹೊಡೆದು ಕೃಷ್ಣ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. [ದೆಹಲಿ ಝೂನಲ್ಲಿ ಬಾಲಕನನ್ನು ಕೊಂದ ಬಿಳಿಹುಲಿ]
ಕಳೆದ ವರ್ಷದ ಸೆ.23ರಂದು ದೆಹಲಿ ಮೃಗಾಲಯದಲ್ಲಿ ಬಿಳಿಹುಲಿ ಶಾಲಾಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ನಂತರ, ಮೃಗಾಲಯಗಳಲ್ಲಿ ಸಿಬ್ಬಂದಿ ಹಾಗೂ ಪ್ರವಾಸಿಗರ ರಕ್ಷಣಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಕರ್ನಾಟಕದ ಮೈಸೂರು, ಬಳ್ಳಾರಿ, ಬನ್ನೇರುಘಟ್ಟದಲ್ಲಿ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿತ್ತು. [ಬನ್ನೇರುಘಟ್ಟ ಪ್ರವೇಶ ಇನ್ನು ದುಬಾರಿ]












Click it and Unblock the Notifications