ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ಡಿಸೆಂಬರ್ 02: ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಈ ತಿಂಗಳಿನಲ್ಲಿ ಆರಂಭವಾಗಲಿದೆ. ಆದರೆ, ವಾಹನ ಸವಾರರಿಗೆ ಬೇಸರ ಮೂಡಿಸುವ ಸುದ್ದಿಯೊಂದಿದೆ.
ಬಿಎಂಆರ್ಸಿಎಲ್ 6.52 ಕಿ. ಮೀ. ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಸಹ ಮಾರ್ಗವನ್ನು ಪರಿಶೀಲನೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರದ ಒಪ್ಪಿಗೆ ಪಡೆದು ಬಿಎಂಆರ್ಸಿಎಲ್ ರೈಲು ಸಂಚಾರದ ದಿನಾಂಕವನ್ನು ಅಂತಿಮಗೊಳಿಸಲಿದೆ. ನವೆಂಬರ್ನಲ್ಲಿಯೇ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮೊದಲ ವಿಸ್ತರಿತ ಮಾರ್ಗ ರೀಚ್ 4 ಬಿಯಲ್ಲಿ ಮೆಟ್ರೋ ಸಂಚಾರ ಆರಂಭವಾಗಬೇಕಿತ್ತು. ಆದರೆ, ವಿಳಂಬವಾಗಿದೆ.

ಯಲಚೇನಹಳ್ಳಿಯಿಂದ ಹೊರಡುವ ರೈಲು ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮಾರ್ಗವಾಗಿ ಅಂಜನಾಪುರ ನಿಲ್ದಾಣವನ್ನು ತಲುಪಲಿದೆ. ಪೀಣ್ಯ ಬಳಿಯ ನಾಗಸಂದ್ರದಿಂದ ಹಸಿರು ಮೆಟ್ರೋದಲ್ಲಿ ಅಂಜನಾಪುರ ತನಕ ಸಂಚಾರ ನಡೆಸಬಹುದಾಗಿದೆ.
ಪಾರ್ಕಿಂಗ್ ಸಮಸ್ಯೆ; ಯಲಚೇನಹಳ್ಳಿ-ಅಂಜನಾಪುರ ಮಾರ್ಗದ ನಾಲ್ಕು ನಿಲ್ದಾಣಗಳಲ್ಲಿ ಸೀಮಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಮೆಟ್ರೋ ನಿಲ್ದಾಣದಲ್ಲಿ ಬೈಕ್, ಕಾರು ನಿಲ್ಲಿಸಿ ಮೆಟ್ರೋದಲ್ಲಿಸ ಸಂಚಾರ ನಡೆಸುವ ಜನರ ಯೋಚನೆಗೆ ಇದರಿಂದಾಗಿ ಹಿನ್ನಡೆಯಾಗಲಿದೆ.
ಅಂಜನಾಪುರ ಹೊರತುಪಡಿಸಿದರೆ ಉಳಿದ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ಸೀಮಿತ ಅವಕಾಶವಿದೆ. ವಿಸ್ತರಿತ ಮಾರ್ಗದ ಭೂ ಸ್ವಾಧೀನ ವಿಚಾರ ಬಿಎಂಆರ್ಸಿಎಲ್ಗೆ ಸವಾಲಾಗಿತ್ತು. ಆದ್ದರಿಂದ, ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ಗೆ ಹೆಚ್ಚಿನ ಅವಕಾಶಗಳು ಇಲ್ಲವಾಗಿದೆ.
ಮೆಟ್ರೋ ನಿಲ್ದಾಣಗಳ ಸುತ್ತಲೂ ಸರ್ವೀಸ್ ರಸ್ತೆ ಇದೆ. ಜನರು ಅಲ್ಲಿಗೆ ಆಗಮಿಸುವ ಮೂಲಕ ಮೆಟ್ರೋ ನಿಲ್ದಾಣ ತಲುಪಬಹುದು. ಆದರೆ, ಕಾರು, ಬೈಕ್ಗಳ ಪಾರ್ಕಿಂಗ್ಗೆ ಹೆಚ್ಚಿನ ಸ್ಥಳ ದೊರೆಯುವುದಿಲ್ಲ.
ಮೆಟ್ರೋ ನಿಲ್ದಾಣಗಳ ಬಳಿ ಬಹುಹಂತಹ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಈ ಯೋಜನೆ ಜಾರಿಗೊಳ್ಳುವ ತನಕ ಮೆಟ್ರೋ ಪ್ರಯಾಣಿಕರು ಪಾರ್ಕಿಂಗ್ ಸಮಸ್ಯೆ ಎದುರಿಸಬೇಕಿದೆ.












Click it and Unblock the Notifications