ಈ ಪುಣ್ಯ ಎಲ್ಲರಿಗೂ ದೊರಕುವಂತಾಗಲಿ: ಯಡಿಯೂರಪ್ಪ ಆಶಯ
ಬೆಂಗಳೂರು, ಜೂನ್ 23: ಆಚಾರ್ಯ ಶ್ರೀ ಮಹಾ ಶ್ರಮಣಜೀ ಅವರ ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಪುಣ್ಯ ಎಲ್ಲರಿಗೂ ದೊರಕುವಂತಾಗಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಮಹಾ ಶ್ರಮಣಜೀ ಅವರ ಆಶೀರ್ವಾದ ಪಡೆದ ನಂತರ ಮಾತನಾಡಿದ ಯಡಿಯೂರಪ್ಪ, ಶ್ರೀ ಮಹಾ ಶ್ರಮಣಜೀ ಅಹಿಂಸಾ ಯಾತ್ರೆಯ ಪ್ರವರ್ತಕರಾಗಿದ್ದು, 9ನೇ ನವೆಂಬರ್ 2014 ರಂದು ದೆಹಲಿಯ ಕೆಂಪುಕೋಟೆಯಲ್ಲಿ ಆರಂಭಿಸಿ ನೂರಾರು ಶಿಷ್ಯರೊಂದಿಗೆ ಕಾಲ್ನಡಿಗೆಯಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಪರಮ ಪೂಜ್ಯರು ಅಹಿಂಸಾ ಯಾತ್ರೆಯಲ್ಲಿ ಸಾರ್ವತ್ರಿಕ ಸದ್ಬಾವನೆ, ನೈತಿಕತೆ, ವ್ಯಸನಮುಕ್ತಿ ಈ ಅಂಶಗಳನ್ನು ಪ್ರಚಾರ ಮಾಡುತ್ತಾ, ಇಲ್ಲಿಯವರೆಗೆ 48,000 ಸಾವಿರ ಮೈಲಿಗಳಷ್ಠು ಕ್ರಮಿಸಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿರುವುದು ಶುಭದ ಸಂಕೇತ ಎಂದು ಯಡಿಯೂರಪ್ಪ ಹೇಳಿದರು.
ಇಂತಹ ಶುಭ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರ ಕೃಪಾಶೀರ್ವದ ದೊರಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ. ಈ ಪುಣ್ಯ ಎಲ್ಲರಿಗೂ ದೊರಕುವಂತಾಗಲಿ ಎಂಬುದೇ ನನ್ನ ಆಶಯವೆಂದು ಯಡಿಯೂರಪ್ಪ ಹೇಳಿದರು.

ಇದಕ್ಕೂ ಮೊದಲು, ಜನಸಂಘದ ಸ್ಥಾಪಕ, ರಾಜಕೀಯ ಆದರ್ಶವಾದಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 66ನೇ ಬಲಿದಾನ ದಿನದ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗವಹಿಸಿದ್ದರು.
ಡಾ. ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದ ನಂತರ ಡಾ.ಮುಖರ್ಜಿ ಅವರ ರಾಜಕೀಯಕ್ಕೆ ಬೆಳೆದು ಬಂದ ಜೀವನ ಚರಿತ್ರೆ ಕುರಿತು ಯಡಿಯೂರಪ್ಪ ಮಾತನಾಡಿದರು.

ವಿಧಾನಸಭೆ ವಿಪಕ್ಷ ಉಪನಾಯಕರಾದ ಗೋವಿಂದ ಕಾರಜೋಳ, ಶಾಸಕರಾದ ರುದ್ರೇಗೌಡ, ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಗಣೇಶ ಯಾಜಿ ಹಾಗೂ ಮಲ್ಲೇಶ್ವರಂ ಮಂಡಲ ಬಿಜೆಪಿ ಅಧ್ಯಕ್ಷ ಕೇಶವ ಐತಾಳ್ ಮತ್ತು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications