ಶಾಲೆಗೆ ಮತ್ತೆ ಬಂದ ಚಿರತೆ, ಮೂವರ ಮೇಲೆ ದಾಳಿ
ಬೆಂಗಳೂರು, ಫೆಬ್ರವರಿ 7 : ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡಲಾಗಿದೆ. ಶಾಲೆಯ ಶೌಚಾಲಯದಲ್ಲಿ ಚಿರತೆ ಕುಸಿದು ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಭಾನುವಾರ ಮುಂಜಾನೆ 4.15ರ ಸುಮಾರಿಗೆ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಹಿಡಿಯಲು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. [ಚಿರತೆ ಹಿಡಿಯುವ ಕಾರ್ಯಾಚರಣೆ ಚಿತ್ರಗಳು]
ಹಿಂದಿನ ಸುದ್ದಿ : ವಿಬ್ ಗಯಾರ್ ಶಾಲೆಯ ಆವರಣಕ್ಕೆ ಪುನಃ ಚಿರತೆ ಬಂದಿದ್ದು, ಶಾಲೆಯ ಕೊಠಡಿಯಲ್ಲಿ ಅಡಗಿ ಕುಳಿತಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಚಿರತೆಗೆ ಅರವಳಿಕೆ ಮದ್ದು ನೀಡಲು ಹೋದ ಮೂವರ ಮೇಲೆ ಚಿರತೆ ದಾಳಿ ಮಾಡಿದೆ.
ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೂ 15ಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆ ಮುಂದುವರೆಸಿದ್ದರು. ಈ ಸಮಯದಲ್ಲಿಯೇ ಚಿರತೆ ಶಾಲೆಯ ಕಾಪೌಂಡ್ ಮೇಲಿನಿಂದ ಹಾರಿ ಕೊಠಡಿಗೆ ನುಗ್ಗಿದೆ. [ಶಾಲೆಗೆ ನುಗ್ಗಿದ ಚಿರತೆ]

ಬೆಂಗಳೂರು ಉತ್ತರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಕರಿಯಪ್ಪ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಶಾಲೆಯ ಕಾಪೌಂಡ್ ಸಮೀಪ ನೂರಾರು ಜನರನ್ನು ನೋಡಿ ಗಾಬರಿಗೊಂಡ ಚಿರತೆ ಶಾಲೆಯ ಕೊಠಡಿಗೆ ನುಗ್ಗಿದ್ದು, ಅಲ್ಲಿ ಅವಿತು ಕುಳಿತಿದೆ. [ಚಿರತೆ ಶಾಲೆಯಲ್ಲಿ ಇಲ್ಲ ಎಂದ ಅಧಿಕಾರಿಗಳು]
ಮೂವರ ಮೇಲೆ ದಾಳಿ : ಕೊಠಡಿಯಿಂದ ಶೌಚಾಲಯಕ್ಕೆ ನುಗ್ಗಿದ್ದ ಚಿರತೆಯನ್ನು ಹಿಡಿಯಲು ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಈ ಸಮಯದಲ್ಲಿ ಅರವಳಿಕೆ ಮದ್ದು ನೀಡಲು ಬಂದ ಪಶುವೈದ್ಯರ ಮೇಲೆ ದಾಳಿ ಮಾಡಿ ಚಿರತೆ ಅಲ್ಲಿಂದ ತಪ್ಪಿಸಿಕೊಂಡಿದೆ. ಇಬ್ಬರು ಅಧಿಕಾರಿಗಳು, ಒಬ್ಬರು ಕ್ಯಾಮರಾಮನ್ ಸೇರಿ ಮೂವರ ಮೇಲೆ ಚಿರತೆ ದಾಳಿ ನಡೆಸಿದೆ.












Click it and Unblock the Notifications