ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿದವರಿಗೆ ಸಂಕಷ್ಟ
ಬೆಂಗಳೂರು, ಸೆಪ್ಟೆಂಬರ್ 15 : ಬಿಬಿಎಂಪಿ ಮೇಯರ್ ಚುನಾವಣೆ ಮತದಾರರ ಪಟ್ಟಿಗೆ 8 ವಿಧಾನಪರಿಷತ್ ಸದಸ್ಯರನ್ನು ಸೇರಿಸಿ ಲೋಪವೆಸಗಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಆದರೆ, ವಿಧಾನಪರಿಷತ್ ಸದಸ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಕೇಂದ್ರ ಚುನಾವಣಾ ಆಯೋಗ ಬಿಬಿಎಂಪಿ ಆಯುಕ್ತರಿಗೆ ಈ ಕುರಿತು ಸೂಚನೆ ನೀಡಿದೆ. ವಿಧಾನಪರಿಷತ್ ಸದಸ್ಯರ ವಿಳಾಸವನ್ನು ಪರಿಶೀಲನೆ ನಡೆಸದೇ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿ ಲೋಪವೆಸಗಲಾಗಿದೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಲಾಗಿದೆ.

ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ರಾಘು ಆಚಾರ್, ಎನ್.ಎಸ್.ಬೋಸರಾಜು, ಎಸ್.ರವಿ, ಸಿ.ಆರ್.ಮನೋಹರ್ (ಜೆಡಿಎಸ್), ಅಪ್ಪಾಜಿ ಗೌಡ (ಜೆಡಿಎಸ್), ಎಂ.ಡಿ.ಲಕ್ಷ್ಮೀ ನಾರಾಯಣ (ಪಕ್ಷೇತರ) ಬೆಂಗಳೂರು ಮತದಾರರ ಪಟ್ಟಿಗೆ ಸೇರ್ಪಡೆ ಗೊಂಡಿದ್ದರು.
ಆದರೆ, ಈ ಸದಸ್ಯರು ತಮ್ಮ ಸ್ವ ಕ್ಷೇತ್ರದ ವಿಳಾಸ ನೀಡಿ ವಿಧಾನಪರಿಷತ್ ಭತ್ಯೆಯನ್ನು ಪಡೆಯುತ್ತಿದ್ದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಆಯೋಗ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿತ್ತು.
ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದರು ಮತ್ತು ಇದು ಮುಂದಿನ ಕ್ರಮ ಜರುಗಿಸಬಹುದಾದ ಪ್ರಕರಣ ಎಂದು ಹೇಳಿದ್ದರು. ವರದಿಯ ಅನ್ವಯ ಮೊದಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಸೆಪ್ಟೆಂಬರ್ 28ರಂದು ಬಿಬಿಎಂಪಿ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಅಂದು 8 ವಿಧಾನಪರಿಷತ್ ಸದಸ್ಯರು ಮತದಾನ ಮಾಡಲು ಅವಕಾಶ ನೀಡಲಾಗುತ್ತದೆಯೇ? ಎಂಬುದು ಇನ್ನೂ ಖಚಿತಗೊಂಡಿಲ್ಲ.












Click it and Unblock the Notifications