ಜೆಡಿಎಸ್, ಸಮಾಜವಾದಿ ಪಾರ್ಟಿ ಮುಖಂಡರು ಎಎಪಿ ಸೇರ್ಪಡೆ: ಮೋಹನ್ ದಾಸರಿ
ಬೆಂಗಳೂರು, ಡಿಸೆಂಬರ್ 15: ಜೆಡಿಎಸ್ ಮತ್ತು ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಮುಖಂಡರು ಗುರುವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದರು.
ಜೆಡಿಎಸ್ ಮಾಜಿ ಹಾಗೂ ರೋಟರಿ ಕ್ಲಬ್ ಮುಖಂಡ ಬಿ. ಕರಿಗೌಡ, ಸಮಾಜವಾದಿ ಪಾರ್ಟಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶಾಂತಾ ಮೋಹನ್, ಕಿರುತೆರೆ ಹಾಗೂ ಹಿರಿತೆರೆ ನಟ ಕಿಶನ್, ಹೊಳಲ್ಕೆರೆ ಮಾಜಿ ಶಾಸಕ ಜಿ.ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪ, ಸಮಾಜವಾದಿ ಪಾರ್ಟಿ ಯುವ ನಾಯಕ ರವಿ (ದೇವೇಂದ್ರ ಚೌಡಿ) ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಜೆಡಿಎಸ್ ರಥಯಾತ್ರೆ ಡಿ.15 ರಿಂದ ಪುನಾರಂಭ: ಸಮಾವೇಶ, ಎಚ್ಡಿಕೆ ಜನ್ಮದಿನ ಕಾರ್ಯಕ್ರಮದ ವಿವಿರ ಇಲ್ಲಿದೆ
ಬೆಂಗಳೂರಿನ ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜ್ಯ ಕಚೇರಿಯಲ್ಲಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಅವರು, ಹೂಗುಚ್ಚ ಮತ್ತು ಪಕ್ಷದ ಭಾವುಟ ನೀಡಿ ಬರಮಾಡಿಕೊಂಡರು. ಬಳಿಕ ಎಎಪಿ ನೂತನ ಮುಖಂಡರು ಸೇವೆ, ಅನುಭವ, ಹಿನ್ನೆಲೆ ಕುರಿತು ಅವರು ವಿವರಿಸಿದರು.
ಸಾಮಾಜಿಕ ಕಾರ್ಯಗಳಲ್ಲಿ ಯಶಸ್ವಿ
ಮೋಹನ್ ದಾಸರಿ ಮಾತನಾಡಿ, ಬಿ. ಕರಿಗೌಡರವರು ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು. ಎಂಕಾಂ, ಎಂಬಿಎ, ಸಿಎ ಶಿಕ್ಷಣ ಪೂರೈಸಿದ್ದಾರೆ. ಕಂಪನಿ ಸೆಕ್ರೆಟರಿ ಶಿಕ್ಷಣದ ಇಂಟರ್ಮೀಡಿಯೇಟ್ ಸಹ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಲೆಕ್ಕ ಪರಿಶೋಧನೆ ಹಾಗೂ ತೆರಿಗೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ʻರೋಟರಿ ಬೆಂಗಳೂರು ಬನಶಂಕರಿʼ ಅಧ್ಯಕ್ಷರಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ, ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಮಹಿಳಾ ಹಕ್ಕುಗಳ ರಕ್ಷಣೆಗೆ ಹೋರಾಟ
ಸಮಾಜವಾದಿ ಪಾರ್ಟಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಾ ಮೋಹನ್ರವರು ಮಹಿಳೆಯರ ಸಂಘಟನೆಯಲ್ಲಿ ನಿಪುಣರಾಗಿದ್ದಾರೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಿದ ಅನುಭವ ಹೊಂದಿದ್ದಾರೆ. ಹೊಳಲ್ಕೆರೆಯಲ್ಲಿ 20 ವರ್ಷಗಳ ಕಾಲ ಶಾಸಕರಾಗಿದ್ದ ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪರವರು ಸಮಾಜವಾದಿ ಪಾರ್ಟಿಯ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಶನ್ರವರು ನಟನೆಯ ಜೊತೆಗೆ ಸಮಾಜವಾದಿ ಪಕ್ಷದ ರಾಜ್ಯ ಯುವಘಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರವಿ (ದೇವೇಂದ್ರ ಚೌಡಿ) ಕೂಡ ಅದೇ ಪಕ್ಷದ ಯುವನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರನ್ನು ಪರಿಚಯಮಾಡಿಕೊಟ್ಟರು.
ನಿರ್ಲಕ್ಷಕ್ಕೆ ಒಳಗಾಗಿದ್ದ ಶಾಲೆಗಳು ಎಎಪಿಯಿಂದ ಮುನ್ನೆಲೆಗೆ
ಪಕ್ಷ ಸೇರಿದ ಬಿ.ಕರಿಗೌಡ ಮಾತನಾಡಿ, ಶಿಕ್ಷಣದ ಮಹತ್ವವನ್ನು ಅರಿತು, ಶೈಕ್ಷಣಿಕ ಕ್ರಾಂತಿ ತರುವುದರಲ್ಲಿ ಆಮ್ ಆದ್ಮಿ ಪಾರ್ಟಿ ನಿರತವಾಗಿದೆ. ದೆಹಲಿ ಹಾಗೂ ಪಂಜಾಬ್ನ ಎಎಪಿ ಸರ್ಕಾರಗಳು ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಆದ್ಯತೆ ನೀಡುತ್ತಿವೆ. ಆಮ್ ಆದ್ಮಿ ಪಾರ್ಟಿಯ ಭಯದಿಂದಾಗಿ ಬೇರೆ ಪಕ್ಷಗಳು ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಲು ಆರಂಭಿಸಿರುವುದನ್ನು ನೋಡುತ್ತಿದ್ದೇವೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕುರಿತ ಚರ್ಚೆಯು ಆಮ್ ಆದ್ಮಿ ಪಾರ್ಟಿಯಿಂದಾಗಿ ಮುನ್ನೆಲೆಗೆ ಬರುತ್ತಿದೆ ಎಂದು ಹೇಳಿದರು.
ಶೇ. 50ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆರಿಗೆ ಟಿಕೆಟ್
ಶಾಂತಾ ಮೋಹನ್ ಮಾತನಾಡಿ, ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಪಕ್ಷವು ಹಲವು ಚುನಾವಣೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ. ಬೇರೆ ಪಕ್ಷಗಳು ದುರ್ಬಲ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿ, ಅವರು ಗೆಲುವು ಸಾಧಿಸಿದರೆ ಅವರ ಹೆಸರಿನಲ್ಲಿ ಬೇರೆ ಪುರುಷರು ಅಧಿಕಾರ ನಡೆಸುವಂತಹ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. ಆದರೆ ಆಮ್ ಆದ್ಮಿ ಪಾರ್ಟಿಯು ಸುಶಿಕ್ಷಿತ ಹಾಗೂ ಸಶಕ್ತ ಮಹಿಳೆಯರಿಗೆ ಆದ್ಯತೆ ನೀಡಿ, ಮಹಿಳಾ ಪ್ರಾತಿನಿಧ್ಯದ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದರು.
ಸೇರ್ಪಡೆ ಸಮಾರಂಭದಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಉಪಸ್ಥಿತರಿದ್ದರು.