ರೌಡಿ ಲಕ್ಷ್ಮಣ ಹತ್ಯೆಗೆ ನವೆಂಬರ್ನಲ್ಲಿಯೇ ಪ್ಲಾನ್ ಮಾಡಲಾಗಿತ್ತು!
ಬೆಂಗಳೂರು, ಮಾರ್ಚ್ 22 : ಶ್ರೀಮಂತ ರೌಡಿ ಲಕ್ಷ್ಮಣ ಹತ್ಯೆ ಪ್ರಕರಣಕ್ಕೆ 5 ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬುದು ಸಿಸಿಬಿ ತನಿಖೆಯಿಂದ ಬಯಲಾಗಿದೆ. ಪೊಲೀಸರು 3 ಜಿಬಿ ವಾಯ್ಸ್ ಮತ್ತು ವಾಟ್ಸಪ್ ಸಂಭಾಷಣೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರೌಡಿ ಲಕ್ಷ್ಮಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಮುಂದುವರೆದಿದೆ. 2018ರ ನವೆಂಬರ್ನಲ್ಲಿ ಲಕ್ಷ್ಮಣನನ್ನು ಹತ್ಯೆ ಮಾಡುವ ಸಂಚನ್ನು ರೂಪಿಸಲು ಆರೋಪಿ ರೂಪೇಶ್ ಮತ್ತು ವರ್ಷಿಣಿ ಆರಂಭಿಸಿದ್ದರು.
ರೌಡಿ ಲಕ್ಷ್ಮಣ ಹತ್ಯೆಯಾಗಿದ್ದು ತನ್ನ ಹುಡುಗ ರೂಪೇಶ್ನಿಂದಲೇ!
ರೂಪೇಶ್ ಮತ್ತು ವರ್ಷಿಣಿಯನ್ನು ಬೇರೆ ಮಾಡಲು ನವೆಂಬರ್ನಲ್ಲಿ ಆಕೆಯನ್ನು ವಿದೇಶಕ್ಕೆ ಕಳಿಸಲು ಆಕೆಯ ತಂದೆ ಯೋಜನೆ ರೂಪಿಸಿದ್ದರು. ಇದಕ್ಕೆ ಲಕ್ಷ್ಮಣ ಕೊಟ್ಟ ಸಲಹೆಯೇ ಕಾರಣ ಎಂದು ಇಬ್ಬರು ಆತನ ಹತ್ಯೆಗೆ ಸಂಚು ರೂಪಿಸಲು ತೀರ್ಮಾನಿಸಿದ್ದರು.
ರೌಡಿ ಲಕ್ಷ್ಮಣ ಹತ್ಯೆ ರಹಸ್ಯ ಬಯಲು, ಕೊಲೆ ಹಿಂದೆ ಸುಂದರಿ ಕೈವಾಡ!
ರೂಪೇಶ್ ಮತ್ತು ವರ್ಷಿಣಿ ನಡುವಿನ ವಾಯ್ಸ್ ಕಾಲ್ ಮತ್ತು ವಾಟ್ಸಪ್ ಸಂದೇಶಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 3 ಜಿಬಿಯಷ್ಟು ಡಾಟಾಗಳಿದ್ದು, ಇದರಲ್ಲಿ ಹತ್ಯೆ ಪ್ರಕರಣದ ಸಂಚಿನ ಕುರಿತು ಹಲವು ಮಾಹಿತಿ ಇದೆ.
ಕುಣಿಗಲ್ನ ಲಕ್ಷ್ಮಣ ಬೆಂಗಳೂರಿನ ಶ್ರೀಮಂತ ರೌಡಿಯಾದ ಕಥೆ!
ಲಕ್ಷ್ಮಣ ಹತ್ಯೆ ಪ್ರಕರಣಕ್ಕೂ ಮೊದಲು ಮತ್ತತ್ತಿಯಲ್ಲಿ ಎಲ್ಲಾ ಆರೋಪಿಗಳು ಪಾರ್ಟಿ ಮಾಡಿದ್ದರು. ಅಲ್ಲಿಯೇ ರೂಂ ಮಾಡಿಕೊಂಡು ಹತ್ಯೆ ಪ್ರಕರಣದ ಸಂಚನ್ನು ಅಂತಿಮಗೊಳಿಸಿದ್ದರು. ಸಿಸಿಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿದ್ದಾರೆ.
ರೂಪೇಶ್ ಮತ್ತು ವರ್ಷಿಣಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು. ಪೊಲೀಸರ ವಶದಲ್ಲಿರುವ ಎಲ್ಲಾ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಕೊಲೆಯಲ್ಲಿ ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ.