112 ಕೇಸಿನ ರೌಡಿ ಎಲೆಕ್ಷನ್ ಗೆ ನಿಲ್ಲುತ್ತಾನಂತೆ
ಬೆಂಗಳೂರು, ಡಿಸೆಂಬರ್ 07: ಆತ ಬೆಂಗಳೂರಿನ ಮೋಸ್ಟ್ ವಾಂಟೆಡ್ ರೌಡಿ ಶೀಟರ್. ಆತನ ವಿರುದ್ಧ ದಾಖಲಾಗಿರುವ ಕೇಸುಗಳ ಸಂಖ್ಯೆ 112. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಅದೃಷ್ಟ ಪರೀಕ್ಷೆಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದ. ಆದರೆ, ಕೊಲೆ ಪ್ರಕರಣವೊಂದರ ಸಂಬಂಧ ಮೋಸ್ಟ್ ವಾಟೆಂಡ್ ರೌಡಿ ಶೀಟರ್ ಮತ್ತು ಸಹಚರರನ್ನು ಬಂಧಿಸಿದ್ದಾರೆ.
ಕುಣಿಗಲ್ ಗಿರಿ, ಸೈಕೋ ವಿಶ್ವನಾಥ್, ಲಕ್ಷ್ಮಣ ಅಲಿಯಾಸ್ ಸುಳಿ ಬಂಧಿತರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ಮಂಜುನಾಥ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ ರೌಡಿ ಶೀಟರ್ ಕುಣಿಗಲ್ ಗಿರಿ, ಆತನ ಸಹಚರರಾದ ಲಕ್ಷ್ಮಣ ಅಲಿಯಾಸ್ ಸುಳಿ, ಸೈಕೋ ವಿಶ್ವನಾಥ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಕುಣಿಗಲ್ ತಾಲೂಕಿನ ತೂದೂರು ನಿವಾಸಿ ಗಿರಿ ಅಲಿಯಾಸ್ ಕುಣಿಗಲ್ ಗಿರಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಯಲ್ಲಿ ರೌಡಿ ಶೀಟರ್ ದಾಖಲಾಗಿದೆ. ದರೋಡೆ, ಕೊಲೆ ಸುಲಿಗೆ ಸೇರಿದಂತೆ 112 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಅಂದಹಾಗೆ 2014 ರಲ್ಲಿದರೋಡೆ ಕೃತ್ಯಕ್ಕೆ ಸಂಬಂಧಿಸಿದಂತೆ ಆಂಧ್ರ ಮತ್ತು ಕರ್ನಾಟಕ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದಿದ್ದ. ಸಿಸಿಬಿಯಲ್ಲಿದ್ದ ಪೊಲೀಸ್ ಅಧಿಕಾರಿ ದಿವಂಗತ ಬಾಳೆಗೌಡ ಕಾಲಿಗೆ ಗುಂಡು ಹಾರಿಸಿದ್ದರು. ಅಂದಿನಿಂದ ಗಿರಿಯ ಹವಾ ಕಡಿಮೆಯಾಗಿತ್ತು. ಇದಕ್ಕೂ ಮೊದಲು ನಾನಾ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ.

ಡಿಸೆಂಬರ್ ನಲ್ಲಿ ನಡೆಯಲಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ. ಈ ನಿಟ್ಟಿನಲ್ಲಿ ಪ್ರಚಾರ ಗಿಟ್ಟಿಸುತ್ತಿದ್ದ ಕುಣಿಗಲ್ ಗಿರಿ ಇಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದ. ಆತನ ಸಹಚರರು ಮಾಡಿರುವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ. ನವೆಂಬರ್ 7 ರಂದು ಸುಮ್ಮನಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಕಾರು ಚಾಲಕ ಮಂಜುನಾಥ್ ಎಂಬಾತನ ಕೊಲೆ ಪ್ರಕರಣದಲ್ಲಿ ಗಿರಿಯನ್ನು ಬಂಧಿಸಲಾಗಿದೆ. ಮಂಜುನಾಥ್ ಕೊಲೆ ಬಳಿಕ ಸೈಕೋ ವಿಶ್ವನಾಥ್ ಮತ್ತು ಇತರರು ತಲೆ ಮರೆಸಿಕೊಂಡಿದ್ದರು. ಕುಣಿಗಲ್ ಗಿರಿ ಜತೆ ಗುರುತಿಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು.
Recommended Video
ಬ್ಯಾಂಕ್ ಸಾಲ ಮಾಡಿದ್ದ ಗಿರಿ ? ಕಾಲಿಗೆ ಗುಂಡೇಟು ತಿಂದ ಬಳಿಕ ಬಳಲಿದ್ದ ಕುಣಿಗಲ್ ಗಿರಿ ಹೆಸರು ದರೋಡೆ ಪ್ರಕರಣಗಳಲ್ಲಿ ಪ್ರಸ್ತಾಪವಾಗಿರಲಿಲ್ಲ. ಗುಂಡೇಟಿನಿಂದ ಬಾರಿ ಬಳಲಿದ್ದ ಎನ್ನಲಾಗಿದೆ. ಅಲ್ಲದೇ ಕುಣಿಗಲ್ ತೂದೂರು ಬಳಿ ಐವತ್ತು ಎಕರೆ ಭೂಮಿಯಿದ್ದು, ಬ್ಯಾಂಕ್ ಸಾಲ ಮಾಡಿ ಲಕ್ಷಾಂತರ ಗಿಡ ನೆಡಿಸಿದ್ದ. ಅಪರಾಧ ಚಟುವಟಿಕೆಯಿಂದ ದೂರ ಉಳಿಯಲು ಪ್ರಯತ್ನಿಸಿದ್ದ. ಆದರೆ ಆತನ ಸಚರರು ಎಸಗಿದ ಕೃತ್ಯದಿಂದ ಬಂಧನಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅಂತೂ ಒಬ್ಬ ರೌಡಿ ಶೀಟರ್ ವಿರುದ್ಧ ಇಷ್ಟು ಪ್ರಕರಣ ದಾಖಲಾಗಿದ್ದರೂ ಜನ ಪ್ರತಿನಿಧಿಯಾಗಲು ಹೊರಟಿದ್ದನಲ್ಲಾ ಎಂಬುದು ವಿಶೇಷ.












Click it and Unblock the Notifications