ಇನ್ನೂ ನಾಲ್ಕು ದಿನ ರೆಸಾರ್ಟ್ನಲ್ಲಿ ಜೆಡಿಎಸ್ ಶಾಸಕರ ವಾಸ್ತವ್ಯ
ಬೆಂಗಳೂರು, ಜುಲೈ 9: ರಾಜ್ಯ ರಾಜಕೀಯ ವಿದ್ಯಮಾನದ ಬಳಿಕ ಜೆಡಿಎಸ್ ತನ್ನ ಶಾಸಕರು ಅತೃಪ್ತರ ಪಾಳೆಯ ಸೇರದಂತೆ ತಡೆಯಲು ನಾಯಕರು ಅವರನ್ನು ರೆಸಾರ್ಟ್ಗೆ ರವಾನಿಸಿ ಕಾಯ್ದುಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದು, ಇನ್ನೂ ನಾಲ್ಕು ದಿನ ರೆಸಾರ್ಟ್ನಲ್ಲಿಯೇ ಇರುವಂತೆ ತೀರ್ಮಾನಿಸಿದೆ.
37 ಶಾಸಕರ ಬಲ ಹೊಂದಿರುವ ಜೆಡಿಎಸ್ನಲ್ಲಿ ಈಗಾಗಲೇ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿದ್ದಾರೆ. ಹೀಗಾಗಿ ಉಳಿದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್ ರೆಸಾರ್ಟ್ ರಾಜಕಾರಣದ ಮೊರೆ ಹೊಕ್ಕಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೋಡಗುರ್ಕಿ ಗ್ರಾಮ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಶಾಸಕರು ಸೋಮವಾರ ರಾತ್ರಿಯಿಂದ ವಾಸ್ತವ್ಯ ಹೂಡಿದ್ದು, ಜುಲೈ 12ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುವವರೆಗೂ ಅಲ್ಲಿಯೇ ಇರುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರ ಪೈಕಿ ಎಂಟು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸಿಲ್ಲ. ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಇಳಿಯಬಹುದು. ನಾವೆಲ್ಲರೂ ಒಟ್ಟಾಗಿ ಒಂದೇ ಕಡೆ ಇರೋಣ. ಅಧಿವೇಶನ ಆರಂಭವಾಗುವವರೆಗೂ ಬೆಂಗಳೂರಿಗೆ ಅಥವಾ ರೆಸಾರ್ಟ್ನಿಂದ ಹೊರಕ್ಕೆ ಹೋಗುವುದು ಬೇಡ ಎಂದು ಕುಮಾರಸ್ವಾಮಿ ಅವರು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಶಾಸಕರ ಜತೆ ಊಟ ಮಾಡಿದ ಬಳಿಕ ಚರ್ಚೆ ನಡೆಸಿರುವ ಸಿಎಂ, ರಾಜಕೀಯ ವಿದ್ಯಮಾನ ಯಾವ ತಿರುವು ಬೇಕಾದರೂ ಪಡೆದುಕೊಳ್ಳಬಹುದು. ಹೀಗಾಗಿ ಕಾದು ನೋಡುವ ತಂತ್ರ ಅನುಸರಿಸುವುದು ಒಳಿತು. ಮುಂದಿನ ನಡೆ ಬಗ್ಗೆ ಬಳಿಕ ಚರ್ಚಿಸೋಣ ಎಂದು ಕುಮಾರಸ್ವಾಮಿ ಹೇಳಿರುವುದಾಗಿ ವರದಿಯಾಗಿದೆ.












Click it and Unblock the Notifications