ವಿಶ್ವಾಸಮತ ಯಾಚನೆಗೆ ಸೋಮವಾರವೇ ಸಮಯ ನೀಡುವಂತೆ ಮನವಿ
ಬೆಂಗಳೂರು, ಜುಲೈ 12: ಅಚ್ಚರಿಯ ರೀತಿಯಲ್ಲಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿದ್ದಾರೆ. ಪ್ರತಿಪಕ್ಷಗಳ ಒತ್ತಾಯ ಆರಂಭವಾಗುವ ಮುನ್ನವೇ ಕುಮಾರಸ್ವಾಮಿ ಅವರೇ ಈ ನಿರ್ಣಯ ತೆಗೆದುಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಸದನದಲ್ಲಿ ಇಂದು ಮಾತನಾಡಿದ ಕುಮಾರಸ್ವಾಮಿ ಅವರು, ಸದನದ ಬೆಂಬಲ ಇಲ್ಲದೆ ಯಾವ ನಿರ್ಣಯವನ್ನೂ ತೆಗೆದುಕೊಳ್ಳುವುದಿಲ್ಲ, ವಿಶ್ವಾಸ ಮತ ಯಾಚಿಸುತ್ತೇನೆ ಸಮಯ ಕೊಡಿ ಎಂದು ಸ್ಪೀಕರ್ ಅವರನ್ನು ಕೇಳಿದ್ದಾರೆ.
ಸ್ಪೀಕರ್ ಅವರು ಇನ್ನೂ ಸಮಯ ನೀಡಿಲ್ಲ. ಆದರೆ ಕುಮಾರಸ್ವಾಮಿ ಅವರೇ ಸೋಮವಾರವೇ ವಿಶ್ವಾಸಮತ ಯಾಚನೆಗೆ ಸಮಯ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕುಮಾರಸ್ವಾಮಿ ಅವರಿಗೆ ರೇಜಿಗೆ ಹುಟ್ಟಿಸಿದ್ದು, ಎಲ್ಲವನ್ನೂ ಶೀಘ್ರವಾಗಿ ಅಂತ್ಯ ಮಾಡುವ ಉದ್ದೇಶ ಕುಮಾರಸ್ವಾಮಿ ಅವರಿಗೆ ಇದೆ, ಹಾಗಾಗಿಯೇ ಕುಮಾರಸ್ವಾಮಿ ಅವರು ಶೀಘ್ರವಾಗಿ ಸಮಯ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಸದನ ಕಾರ್ಯಕಲಾಪ ಸಲಹಾ ಸಮಿತಿ ಶುಕ್ರವಾರ ನಾಲ್ಕು ಗಂಟೆ ಸುಮಾರಿಗೆ ಸಭೆ ಸೇರಲಿದ್ದು, ವಿಶ್ವಾಸಮತ ಯಾಚನೆಗೆ ಯಾವಾಗ ಕಾಲಾವಕಾಶ ಕೊಡಬೇಕು ಎಂದು ನಿರ್ಣಯ ಮಾಡಲಿದ್ದಾರೆ. ಈ ಕಾರ್ಯಕಲಾಪ ಸಮಿತಿಯ ಸಭೆಗೆ ಬಿಜೆಪಿ ಗೈರಾಗಲಿದೆ ಎನ್ನಲಾಗಿದೆ.












Click it and Unblock the Notifications