ಬಂಜೆತನ ನಿವಾರಕ 'ನಕಲಿ' ವೈದ್ಯ ಗುರುಮೂರ್ತಿ ಸೆರೆ?
ಬೆಂಗಳೂರು, ಜ. 19: ಮಹಿಳೆಯರಲ್ಲಿನ ಬಂಜೆತನ ಶೇ100ರಷ್ಟು ನಿವಾರಿಸುವೆ ಎಂದು ಹೇಳಿ ಹಲವು ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ ನಗರದ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಹಾಗೂ ರಿಸರ್ಚ್ ಫೌಂಡೇಶನ್ ನ ನಕಲಿ ವೈದ್ಯ ಕೆ.ಟಿ.ಗುರುಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ, ಇದುವರೆವಿಗೂ ಪೊಲೀಸರಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ..
ಆರೋಪಿ ಗುರುಮೂರ್ತಿ ನಗರದ ವಿವಿಧೆಡೆಗಳಲ್ಲಿ ಮೆಡಿಕೆರ್ ಸೆಂಟರ್ ತೆರೆದಿದ್ದು, ನಕಲಿ ದಾಖಲೆಗಳನ್ನು ಇಟ್ಟುಕೊಂಡು ಮಹಿಳೆಯರಲ್ಲಿನ ಬಂಜೆತನ ನಿವಾರಿಸುವ ನೆಪದಲ್ಲಿ 2 ರಿಂದ 12 ಲಕ್ಷ ರೂ.ಗಳ ವರೆಗೆ ವಸೂಲಿ ಮಾಡುತ್ತಿದ್ದ. ಅಲ್ಲದೆ, ಹಲವು ಮಹಿಳೆಯರಿಗೆ ವಂಚಿಸಿದ್ದಾನೆ ಎಂದು ಸುಮಾರು 30ಕ್ಕೂ ಅಧಿಕ ಸಂತ್ರಸ್ತ ಮಹಿಳೆಯರು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪದವಿ ಪಡೆಯದೆ ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ಸ್ತ್ರೀ ರೋಗ ತಜ್ಞ ಎಂದು ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ, ನಂದಿನಿ ಲೇಔಟ್, ಬಸವೇಶ್ವರ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿತ್ತು.
ಇನ್ನೂ ಅನೇಕ ಮಹಿಳೆಯರು ಈತನ ಸೃಷ್ಟಿ ಮೆಡಿಕೇರ್ ಸಂಸ್ಥೆಯಿಂದ ವಂಚಿತರಾಗಿದ್ದಾರೆ ಎಲ್ಲರೂ ದೂರು ನೀಡಿದರೆ ಒಟ್ಟಿಗೆ ಸೇರಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪಶ್ಚಿಮ ವಲಯ ಡಿಸಿಪಿ ಲಬೂ ರಾಮ್ ಹೇಳಿದ್ದಾರೆ. ಟಿವಿ 9 ಕನ್ನಡ ವಾಹಿನಿಯಲ್ಲಿ ಗುರುಮೂರ್ತಿ ನಕಲಿ ವೈದ್ಯ ಎಂಬುದನ್ನು ನಿರೂಪಿಸಿದ 'ಬೇಟೆ' ಕಾರ್ಯಕ್ರಮ ಪ್ರಸಾರವಾದ ಮೇಲೆ ಈ ಗುರುಮೂರ್ತಿಗೆ ಕಟಂಕ ಶುರುವಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮೂಲತಃ ಮಂಡ್ಯ ಜಿಲ್ಲೆ ಕಿಲಾರಿ ಗ್ರಾಮದ ಗುರುಮೂರ್ತಿ ಅವರು ಎಸ್ಸೆಸ್ಸೆಲ್ಸಿ ಫೇಲ್ ಆಗಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಒಮ್ಮೆ ಲಾರಿ ಅಪಘಾತಕ್ಕೀಡಾದ ಮೇಲೆ ಗುರುಮೂರ್ತಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಹೊರ ಬಂದ ಮೇಲೆ ಭಾರತೀ ಕಾಲೇಜಿನಿಂದ ಪದವಿ ಪ್ರಮಾಣ ಪತ್ರ ಗಿಟ್ಟಿಸಿಕೊಂಡು ನಕಲಿ ಲ್ಯಾಬ್ ಟೆಕ್ನಿಷನ್ ಎನಿಸಿಕೊಂಡ. ಡಯಾ ಗ್ಲೋಸಿಸ್ ಸೆಂಟರ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮೇಲೆ ಮೀನಾಕ್ಷಿ ಎಂಬ ಮಹಿಳೆಯ ಪರಿಚಯವಾಗಿದೆ. ಇಬ್ಬರು ಸೇರಿ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಫೌಂಡೇಷನ್ ಉಗಮದ ಯೋಜನೆ ಹಾಕಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೈದರಾಬಾದಿನ ಉಸ್ಮಾನಿಯಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದ ಪ್ರಮಾಣ ಪತ್ರ ತೋರಿಸಿ ಬಿಬಿಎಂಪಿ ಕಣ್ಣಿಗೆ ಮಣ್ಣೆರಚಿ ಸೃಷ್ಟಿ ಮೆಡಿಕಲ್ ಸೆಂಟರ್ ಗೆ ನಾಂದಿ ಹಾಡುತ್ತಾನೆ. ಸ್ತ್ರೀರೋಗ ತಜ್ಞ ಎಂದು ಎಲ್ಲೆಡೆ ಹೋರ್ಡಿಂಗ್ ಬರೆಸುತ್ತಾನೆ. ಬಂಜೆತನ ನಿವಾರಿಸುತ್ತೇನೆ. ಅಂಡಾಣು, ವೀರ್ಯಾಣು ಸಂಗ್ರಹ ಮಾಡಲಾಗುತ್ತದೆ ಎಂದು ಜಾಹೀರಾತು ನೀಡುತ್ತಾನೆ.
ಚಿತ್ರ ನಟಿ ಭವ್ಯ, ಶ್ರುತಿ, ಹಿರಿಯ ರಾಜಕಾರಣಿ ದೇವೇಗೌಡರಿಂದ ಹಿಡಿದು ಅನೇಕ ಖ್ಯಾತನಾಮರನ್ನು ಬಳಸಿಕೊಂಡು ಸೃಷ್ಟಿ ಸಂಸ್ಥೆ ಬ್ರಾಂಡ್ ನೇಮ್ ಹೆಚ್ಚಿಸಿಕೊಳ್ಳುತ್ತಾನೆ. ಬಂಜೆತನ ನಿವಾರಣೆಗೆ 2 ಲಕ್ಷ ರು. ನಿಂದ 12 ಲಕ್ಷ ರು ತನಕ ವಸೂಲಿ ಮಾಡುತ್ತಾನೆ. ಇದಲ್ಲದೆ ಪತ್ನಿಯನ್ನು ತೊರೆದು ಮೀನಾಕ್ಷಿ ಜತೆ ರಾಜರಾಜೇಶ್ವರಿ ನಗರದ ಭವ್ಯ ಬಂಗಲೆಯಲ್ಲಿ ವಾಸಿಸತೊಡಗುತ್ತಾನೆ. ಆ ಬಂಗಲೆಗೆ ಅಮಾಯಕ ಯುವತಿಯರನ್ನು ಕರೆಸಿಕೊಂಡು ಗುಪ್ತವಾಗಿ ಅಂಡಾಣು ಸಂಗ್ರಹ ಮಾಡುತ್ತಾನೆ ಹಾಗೂ ಅನೇಕ ಅನೈತಿಕ ಕೃತ್ಯಗಳನ್ನು ಎಸಗುತ್ತಾನೆ ಎಂದು ತಿಳಿದು ಬಂದಿದೆ.