ದಸರಾಗಾಗಿ ಕೆಎಸ್ಆರ್ಟಿಸಿಯಿಂದ 1,500 ವಿಶೇಷ ಬಸ್
ಬೆಂಗಳೂರು, ಅಕ್ಟೋಬರ್ 19 : ದಸರಾ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಬೆಂಗಳೂರಿನಿಂದ ಅಕ್ಟೋಬರ್ 21ರಿಂದ 23ರ ತನಕ ವಿಶೇಷ ಬಸ್ಸುಗಳು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಬೇರೆ ರಾಜ್ಯಗಳಿಗೆ ಸಂಚಾರ ನಡೆಸಲಿವೆ.
ಕೆಎಸ್ಆರ್ಟಿಸಿ 1,500 ವಿಶೇಷ ಬಸ್ಸುಗಳನ್ನು ಓಡಿಸಲಿದೆ. ಅಕ್ಟೋಬರ್ 21ರ ಬುಧವಾರದಿಂದ 23ರ ಶುಕ್ರವಾರದ ತನಕ ಈ ಬಸ್ಸುಗಳು ಬೆಂಗಳೂರಿನಿಂದ ಸಂಚಾರ ನಡೆಸಲಿವೆ. ಅಕ್ಟೋಬರ್ 24ರ ಶನಿವಾರದಿಂದ 27ರ ಮಂಗಳವಾರದ ತನಕ ಬೇರೆ-ಬೇರೆ ಸ್ಥಳಗಳಿಂದ ಬೆಂಗಳೂರಿಗೆ ವಾಪಸ್ ಆಗಲಿವೆ. [ksrtc ವೆಬ್ ಸೈಟ್]

ಈ ವಿಶೇಷ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಹೊರಡಲಿವೆ. 140 ಬಸ್ಸುಗಳು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. [ksrtc ಬಯೋ ಬಸ್ ಉಪಯೋಗಗಳು]
ಬೆಂಗಳೂರಿನಿಂದ ವಿಶೇಷ ಬಸ್ಸುಗಳು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶೃಂಗೇರಿ, ಹೊರನಾಡು ಸೇರಿದಂತೆ ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಿಗೂ ಸಂಚಾರ ನಡೆಸಲಿವೆ. ಹೈದರಾಬಾದ್, ಚೆನ್ನೈ, ಊಟಿ, ಸೇಲಂ, ಕೇರಳ, ತಮಿಳುನಾಡಿಗೂ ಸಂಚಾರ ನಡೆಸಲಿವೆ. [ವೈಭವದ ಮೈಸೂರು ದಸರಾ 2015 : ಚಿತ್ರಸಂಪುಟ]
ಕೆಎಸ್ಆರ್ಟಿಸಿ ದಸರಾ ಪ್ಯಾಕೇಜ್
ದಸರಾ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಮೂರು ಟೂರ್ ಪ್ಯಾಕೇಜ್ ವ್ಯವಸ್ಥೆಯನ್ನು ಮಾಡಿದೆ. ಪ್ಯಾಕೇಜ್ ವಿವರಗಳು ಇಲ್ಲಿವೆ....
* ಗಿರಿ ದರ್ಶಿನಿ ಪ್ಯಾಕೇಜ್ : ಬೆಳಗ್ಗೆ 6.30ಕ್ಕೆ ಹೊರಡುವ ಬಸ್ಸಿನ 'ಗಿರಿ ದರ್ಶಿನಿ' ಪ್ಯಾಕೇಜ್ ಮೂಲಕ 325 ಕಿ.ಮೀ. ಸಂಚಾರ ನಡೆಸಬಹುದು. ಈ ಪ್ಯಾಕೇಜ್ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಹಾಗೂ ಚಾಮುಂಡಿ ಬೆಟ್ಟವನ್ನು ವೀಕ್ಷಿಸಬಹುದು. ಈ ಬಸ್ಸಿನಲ್ಲಿ ವಯಸ್ಕರಿಗೆ ರೂ. 350 ಮತ್ತು ಮಕ್ಕಳಿಗೆ 175 ರೂ. ಪ್ರಯಾಣ ದರವಿದೆ.
* ಜಲದರ್ಶಿನಿ ಪ್ಯಾಕೇಜ್ : 'ಜಲ ದರ್ಶಿನಿ' ಪ್ಯಾಕೇಜ್ ಮೂಲಕ 350 ಕಿ.ಮೀ. ಸಂಚಾರ ನಡೆಸಬಹುದು. ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ. ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯವನ್ನು ಈ ಪ್ಯಾಕೇಜ್ನಲ್ಲಿ ವೀಕ್ಷಿಸಬಹುದು. ಬೆಳಗ್ಗೆ 6.30ಕ್ಕೆ ಬಸ್ ಹೊರಡಲಿದ್ದು, ವಯಸ್ಕರಿಗೆ ರೂ. 375 ಮತ್ತು ಮಕ್ಕಳಿಗೆ 190 ರೂ. ಪ್ರಯಾಣ ದರವಿರುತ್ತದೆ.
* ದೇವ ದರ್ಶಿನಿ : 250 ಕಿ.ಮೀ. ಸಂಚಾರ ನಡೆಸುವ 'ದೇವ ದರ್ಶಿನಿ' ಪ್ಯಾಕೇಜ್ ಟೂರ್ ಮೂಲಕ ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣವನ್ನು ವೀಕ್ಷಿಸಬಹುದು. ಈ ಬಸ್ ಬೆಳಗ್ಗೆ 6.30ಕ್ಕೆ ಹೊರಡಲಿದ್ದು, ಪ್ರಯಾಣ ದರ ವಯಸ್ಕರಿಗೆ ರೂ.275 ಮತ್ತು ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ.












Click it and Unblock the Notifications