ಸಂಪೂರ್ಣ ಬದಲಾಗಲಿದೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ
ಬೆಂಗಳೂರು, ಜುಲೈ 08: ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ಸಂಪೂರ್ಣ ಬದಲಾಗಲಿದೆ. ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಶೀಘ್ರವೇ ಕಾಮಗಾರಿಗಳು ಆರಂಭವಾಗಲಿವೆ.
ರೈಲು ನಿಲ್ದಾಣದ ಮುಂಭಾಗ ನಮ್ಮ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣ ಸಂಪರ್ಕಿಸಲು ಸ್ಕೈ ವಾಕ್ ಸೇರಿದಂತೆ ವಿವಿಧ ಯೋಜನೆಗಳನ್ನು ಕೆಎಸ್ಆರ್ ನಿಲ್ದಾಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗಕ್ಕೆ ಈ ನಿಲ್ದಾಣ ಸೇರುತ್ತದೆ.

ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರ (ಆರ್ಎಲ್ಡಿಎ) ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಪ್ರತಿದಿನ ಸುಮಾರು 1.75 ಲಕ್ಷ ಪ್ರಯಾಣಿಕರು ಬಂದು ಹೋಗುವ ನಗರದ ಮುಖ್ಯ ರೈಲು ನಿಲ್ದಾಣ ಸಮಗ್ರವಾಗಿ ಅಭಿವೃದ್ಧಿಯಾಗಲಿದೆ. ಈ ಮೂಲಕ ವಿವಿಧ ಸೇವೆಗಳು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿವೆ.
ಯೋಜನೆಯ ವಿವರಗಳು: ಹಂತ-ಹಂತವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಪ್ರತಿನಿತ್ಯ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ತೊಂದರೆ ಉಂಟಾಗದಂತೆ ಮೊದಲು ಕೆಲವು ಭಾಗವನ್ನು ಒಡೆದು ನಿರ್ಮಾಣ ಮಾಡಲಾಗುತ್ತದೆ. ಹೀಗೆ ಹಂತ-ಹಂತವಾಗಿ ನಿರ್ಮಾಣ ಕಾರ್ಯ ನಡೆಯಲಿದೆ.
ಬೆಂಗಳೂರು ರೈಲ್ವೆ ವಿಭಾಗದ ಮ್ಯಾನೇಜರ್ ಯೋಗೇಶ್ ಮೋಹನ್ ಮಾತನಾಡಿ, "ರೈಲು ನಿಲ್ದಾಣದ 2ನೇ ಪ್ರವೇಶ ದ್ವಾರ (ಗೇಟ್ ನಂ 5) ಸಂಪೂರ್ಣ ಬದಲಾವಣೆ ಮಾಡಲಾಗುತ್ತದೆ. ಯೋಜನೆಯಲ್ಲಿ ಬಹುಹಂತದ ಮಾದರಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಸಹ ಸೇರಿದೆ" ಎಂದು ಹೇಳಿದ್ದಾರೆ.
ರೈಲು ನಿಲ್ದಾಣದಲ್ಲಿರುವ ನಿರೀಕ್ಷಣಾ ಕೊಠಡಿಯನ್ನು ವಿಸ್ತರಣೆ ಮಾಡಲಾಗುತ್ತದೆ. ಒಟ್ಟು 3 ನಿರೀಕ್ಷಣಾ ಕೊಠಡಿಗಳು ನಿಲ್ದಾಣದಲ್ಲಿ ಬರಲಿವೆ. ಪಾರ್ಕಿಂಗ್ ಪ್ರದೇಶದಲ್ಲಿ ಪಿಕಪ್ ಮತ್ತು ಡ್ರಾಪಿಂಗ್ ಪಾಯಿಂಟ್ಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಹಲವು ಹೊಸ ಫುಡ್ಕೋರ್ಟ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಸಬ್ ಅರ್ಬನ್ ರೈಲು ನಿಲ್ದಾಣದಿಂದ ಮುಖ್ಯ ನಿಲ್ದಾಣಕ್ಕೆ, ನಮ್ಮ ಮೆಟ್ರೋ ನಿಲ್ದಾಣದ ಮುಂಭಾಗದಿಂದ ರೈಲು ನಿಲ್ದಾಣದ ಸಂಪರ್ಕಿಸಲು ಸ್ಕೈ ವಾಕ್ ನಿರ್ಮಾಣ ಮಾಡುವುದು ಪುನರ್ ಅಭಿವೃದ್ಧಿ ಯೋಜನೆಯ ಭಾಗವಾಗಿದೆ.
ಎಂ. ಜಿ. ರೈಲ್ವೆ ಕಾಲೋನಿ ಮೂಲಕ ಪ್ರಯಾಣಿಕರು 10ನೇ ಪ್ಲಾಟ್ ಫಾರಂಗೆ ತಲುಪಲು ಸುಲಭವಾಗುವ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸಹ ಕಾಮಗಾರಿ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಬಗ್ಗೆ ವಿವರವಾರ ಸಮಗ್ರ ಯೋಜನಾ ವರದಿಯನ್ನು ತಯಾರು ಮಾಡಿ ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ, ಪ್ರತಿಕ್ರಿಯೆ ನೀಡಲು ಆರ್ಎಲ್ಡಿಎ ಸಮಯವನ್ನು ಕೇಳಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆ ಮಾಡಬೇಕು ಎಂದು ಈಗಾಗಲೇ ಬೈಯಪ್ಪನಹಳ್ಳಿಯಲ್ಲಿನ ಸರ್. ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ.
ಯಶವಂತಪುರ ನಿಲ್ದಾಣದಿಂದ ಹಲವಾರು ರೈಲುಗಳನ್ನು ಓಡಿಸಲಾಗುತ್ತಿದೆ. ಕಂಟೋನ್ಮೆಟ್ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಆದರೂ ಸಹ ಕೆಎಸ್ಆರ್ ನಿಲ್ದಾಣ ನಗರದ ಪ್ರಮುಖ ನಿಲ್ದಾಣವಾಗಿದ್ದು, ಬಿಎಂಟಿಸಿ, ನಮ್ಮ ಮೆಟ್ರೋ ಮತ್ತು ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಹತ್ತಿರವಾಗಿದೆ. ಆದ್ದರಿಂದ ಪ್ರತಿದಿನ ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ.












Click it and Unblock the Notifications