ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಜ್ಞಾನದ ಹರಿವು
ಬೆಂಗಳೂರು, ಆಗಸ್ಟ್, 10: ಬೆಂಗಳೂರಿನ ಪ್ರತಿಷ್ಠಿತ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಬುಧವಾರ ಆಗಸ್ಟ್ 10 ರಿಂದ ಎರಡು ದಿನಗಳ 'ಜ್ಞಾನ ದರ್ಶನ' ಪುಸ್ತಕ ಪ್ರದರ್ಶನ ಮೇಳ ಆರಂಭವಾಯಿತು.
ಹಿರಿಯ ಪತ್ರಕರ್ತ, ಒನ್ ಇಂಡಿಯಾ ಕನ್ನಡ ಪ್ರಧಾನ ಸಂಪಾದಕ ಎಸ್ ಕೆ ಶಾಮ ಸುಂದರ್ ದೀಪ ಬೆಳಗುವುದರ ಮೂಲಕ ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಮಸುಂದರ್ 'ನೀವು ಯಾರು ಎಂಬುದನ್ನು ಅರಿತುಕೊಳ್ಳಲು ಪುಸ್ತಕಗಳು ನೆರವಾಗುತ್ತವೆ' ಎಂದು ಹೇಳಿದರು.[ನಿಮ್ಮ ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ]
'ನೀವು ಏನನ್ನು ತಿನ್ನುತ್ತೀರಿ ಎಂಬುದು ದೇಹದ ಆರೋಗ್ಯವನ್ನು ನಿರ್ಧಾರ ಮಾಡಿದರೆ, ನೀವು ಏನನ್ನು ಓದುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು ನಿರ್ಧಾರಮಾಡುತ್ತದೆ. ಇದೇ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ' ಎಂದು ಶಾಮ ಸುಂದರ್ ಹೇಳಿದರು.
ಪುಸ್ತಕ ಓದುವ ಗೀಳು ಕಡಿಮೆಯಾಗಿದೆ. ಅದಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವೂ ಕಾರಣ ಇರಬಹುದು. ಕೆಲಸವಿಲ್ಲದಾಗ ಮಾತ್ರ ಪುಸ್ತಕ ಓದುತ್ತೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ಕೆಲವರು ಇಂದು ಸಾಮಾಜಿಕ ತಾಣ ಟ್ವಿಟರ್ನಲ್ಲಿ 140 ಚಿನ್ಹೆಗಳನ್ನು ಬಳಕೆ ಮಾಡಿಕೊಂಡು ಆತ್ಮ ಚರಿತ್ರೆಯನ್ನೇ ಬರೆಯುವ ಸಾಹಸ ಮಾಡುತ್ತಿದ್ದಾರೆ! ಕೆಲವೊಮ್ಮೆ ವಾಟ್ಸಪ್ ನ ಕೆಲ ಐಕಾನ್ ಗಳೇ ಆತ್ಮ ಚರಿತ್ರೆಯಂತೆ ಭಾಸವಾಗುತ್ತಿದೆ ಎಂದು ತಮಾಷೆಯ ಮೂಲಕವೇ ವಾಸ್ತವ ತೆರೆದಿಟ್ಟರು. ಪುಸ್ತಕಗಳು ನಿಜವಾದ ಅಸ್ತ್ರಗಳಿದ್ದಂತೆ, ಅವುಗಳ ಅಧ್ಯಯನದಿಂದ ಸಿಗುವ ಜ್ಞಾನವೆಂಬ ಶಕ್ತಿಗೆ ಮಿಗಿಲಾದುದು ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಜ್ಞಾನ
ದರ್ಶನದಲ್ಲಿ
ವಿದ್ಯಾರ್ಥಿಗಳಿಗೆ
ಸಿಕ್ಕ
ಮಾರ್ಗದರ್ಶನ
ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಜೋಸ್ ಕುಟ್ಟಿ ಮಾತನಾಡಿ, ಓದನ್ನು ಮೂರು ವಿಭಾಗವಾಗಿ ಮಾಡಬಹುದು, ನೆನಪಿಗೆ ಓದು, ಸ್ಫೂರ್ತಿಗೆ ಓದು, ಮರೆವಿಗೆ ಓದು. ಒಂದೆಲ್ಲಾ ಒಂದು ಸಮಯದಲ್ಲಿ ಎಲ್ಲವೂ ಪ್ರಮುಖವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಆತ ಯಾರೊಂದಿಗೆ ಒಡನಾಡುತ್ತಿದ್ದಾನೆ ಎಂಬುದರಿಂದ ಹೇಗೆ ತಿಳಿದುಕೊಳ್ಳಲು ಸಾಧ್ಯವಿದೆಯೋ, ಆತ ಯಾವ ಪುಸ್ತಕ ಓದಿದ್ದಾನೆ ಎಂಬ ಆಧಾರದಲ್ಲಿಯೂ ತಿಳಿದುಕೊಳ್ಳಬಹುದು ಎಂದರು.[ಭೈರಪ್ಪ ಹೊಗಳಿದ 'ಕರ್ಮ' ಕೃತಿ ಬಗ್ಗೆ ಒಂದಿಷ್ಟು]
ಕಾಲೇಜಿನ ಗ್ರಂಥಾಲಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಸಾಮ್ ಜಚಾರಿಯಾ, ಗ್ರಂಥಾಲಯ ಮುಖ್ಯಸ್ಥ ಹರೀಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಸೆಂಟ್ ಮ್ಯಾಥ್ಯೂ, ಪ್ರೊಫೆಸರ್ ಗೋಪಿಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾಲೇಜಿನ ಬಗ್ಗೆ: ಬೋಧಿ ನಿಕೇತನ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಕಾಲೇಜು 1999ರಲ್ಲಿ ಆರಂಭವಾಯಿತು. ಕಾಲೇಜಿಗೆ ಈಗ 17 ರ ಹರೆಯ. ನ್ಯಾಕ್(ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಪಟ್ಟಿ) ನಿಂದ 'ಎ' ಗ್ರೇಡ್ ಪಡೆದುಕೊಂಡಿರುವ ಕಾಲೇಜು ದೇಶದ ಟಾಪ್ 25 ಕಾಲೇಜುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಪೂರ್ವದ ಬಾಣಸವಾಡಿ ಸಮೀಪ ಕೆ ನಾರಾಯಣಪುರದಲ್ಲಿ ಕಾಲೇಜಿದ್ದು ಎರಡು ಗ್ರಂಥಾಲಯಗಳನ್ನು ಹೊಂದಿರುವುದು ವಿಶೇಷ. ಪಿಜಿ ಮತ್ತು ಯುಜಿ ಕೋರ್ಸಿಗೆ ಪ್ರತ್ಯೇಕ ಗ್ರಂಥಾಲಯಗಳಿದ್ದು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.