ವಸತಿ ಸಚಿವ ಎಂ ಕೃಷ್ಣಪ್ಪಗೆ ಭೂ ಹಗರಣದ ಉರುಳು, ಸಂಪುಟದಲ್ಲಿ ಹೇಗೆ ಉಳಿಸಿದಿರಿ ಎಂದ ರಾಜ್ಯಪಾಲರು
ಬಿಜೆಪಿಯ ರಮೇಶ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವಸತಿ ಸಚಿವ ಎಂ ಕೃಷ್ಣಪ್ಪ ವಿರುದ್ಧ ಭೂ ಹಗರಣದ ಆರೋಪ ಮಾಡಿ, ದೂರು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಹಾಗೆ ಸ್ಪಷ್ಟನೆ ಕೋರಿ ಸಿದ್ದರಾಮಯ್ಯಗೆ ಬುಧವಾರ ಗವರ್ನರ್ ಪತ್ರ ಬರೆದಿದ್ದಾರೆ
ಬೆಂಗಳೂರು, ಮೇ 18:: ವಸತಿ ಸಚಿವರಾಗಿ ಎಂ.ಕೃಷ್ಣಪ್ಪ ಮುಂದುವರಿಕೆಗೆ ರಾಜ್ಯಪಾಲ ವಜುಭಾಯಿ ವಾಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷ್ಣಪ್ಪ ಅವರ ಮೇಲೆ ಭೂ ಹಗರಣದ ಆರೋಪ ಇದ್ದು, ಈ ಬಗ್ಗೆ ಸ್ಪಷ್ಟನೆ ಕೇಳಿ ರಾಜ್ಯಪಾಲರು ಬರೆದಿರುವ ಪತ್ರ ಬುಧವಾರ ಮುಖ್ಯಮಂತ್ರಿ ಸಚಿವಾಲಯವನ್ನು ತಲುಪಿದೆ. ಕೃಷ್ಣಪ್ಪ ಭೂ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ಬಿಬಿಎಂಪಿಯ ಬಿಜೆಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಆರೋಪ ಮಾಡಿದ್ದರು.
ಅವರನ್ನು ಸಂಪುಟದಿಂದ ವಜಾ ಮಾಡಲು ಸರಕಾರಕ್ಕೆ ಸೂಚಿಸಲು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಹೈಕೋರ್ಟ್ ಆದೇಶ ಉಲ್ಲೇಖಿಸಿರುವ ರಾಜ್ಯಪಾಲರು, 'ಕೃಷ್ಣಪ್ಪ ಅವರನ್ನು ಸಚಿವರಾಗಿ ಮುಂದುವರಿಸಿರುವುದು ಎಷ್ಟು ಸರಿ. ಈ ಬಗ್ಗೆ ವಿವರಣೆ ಕೊಡಿ ಎಂದು ಸೂಚಿಸಿದ್ದಾರೆ.[ಸರಕಾರಕ್ಕೆ 39 ಕೋಟಿ ಉಂಡೆನಾಮ ತಿಕ್ಕಿ ಸಿಕ್ಕಿಬಿದ್ದ ಸಪ್ತ ಭ್ರಷ್ಟರು]

ಏನು ಕೋರ್ಟ್ ಆದೇಶ?: ಕನಕಪುರ ರಸ್ತೆಯ ವಾಜರಹಳ್ಳಿ ಹಾಗೂ ರಘುವನಹಳ್ಳಿ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ 189 ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೋರ್ಟ್ ಅನೂರ್ಜಿತಗೊಳಿಸಿತ್ತು. ಸೀತಾರಾಂ ಎಂಬುವರೂ ಸೇರಿ 216 ಕೃಷಿಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿತ್ತು.
ಅರ್ಜಿದಾರರ ಆರೋಪ ಏನು?: ರಾಜೇಂದ್ರ ಎಂಟರ್ ಪ್ರೈಸಸ್ ಸಹಕಾರ ಸಂಘದ ಮೂಲಕ ಕೃಷ್ಣಪ್ಪ ಜಮೀನುಗಳ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು, ಕೃಷಿ ಜಮೀನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇದು ಸಾರ್ವಜನಿಕ ಉದ್ದೇಶಕ್ಕಾಗಿ ನಡೆದ ಸ್ವಾಧೀನ ಪ್ರಕ್ರಿಯೆ ಅಲ್ಲ ಹಾಗೂ ಭೂ ಸ್ವಾಧೀನ ಕಾಯ್ದೆ- 1894ಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು.[ಪರಿಷತ್ ನಾಮ ನಿರ್ದೇಶನ: ಇಬ್ಬರ ಹೆಸರು ಒಕೆ, ಲಿಂಗಪ್ಪ ಹೆಸರು ಯಾಕೆ?]

ದಾಖಲೆಗಳನ್ನು ಸೃಷ್ಟಿಸಿ, ಸರಕಾರದಿಂದ ಸಿಕ್ಕ ಪರಿಹಾರವನ್ನು ಕೃಷ್ಣಪ್ಪ ಸಹಕಾರ ಸಂಘದ ಮೂಲಕ ತಾವೇ ಪಡೆದು, ರೈತರಿಗೆ ಮೋಸ ಮಾಡಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಕೃಷ್ಣಪ್ಪ ಮಧ್ಯವರ್ತಿಯ ರೀತಿಯಲ್ಲಿ ಕೃಷಿ ಜಮೀನನ್ನು ಖರೀದಿಸಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡಿರುವುದೂ ಕಂಡು ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications