ಬ್ರಹ್ಮಕುಂಡದಿಂದ ಗಂಗಾಜಲ ತರಿಸಿ ರಾಮೇಶ್ವರ ದೇವರಿಗೆ ಅಭಿಷೇಕ
ಬೆಂಗಳೂರು, ಫೆ.16: ಸಾಮಾನ್ಯವಾಗಿ ರಾಜಕಾರಣಿಗಳು ರಾಜಕೀಯ ಉನ್ನತಿಗಾಗಿ ದೇವರ ಕಾರ್ಯಕ್ಕೆ ಮೊರೆ ಹೋಗುತ್ತಾರೆ. ಉನ್ನತಿ ಸಿಗದಿದ್ದಾಗ ಬಿಟ್ಟುಬಿಡುತ್ತಾರೆ. ಆದರೆ, ಕೃಷ್ಣಯ್ಯ ಶೆಟ್ಟರು ಮಾತ್ರ ಹಾಗಲ್ಲ. ಪ್ರತಿವರ್ಷದಂತೆ ಈ ವರ್ಷವೂ ಗಂಗಾಜಲವನ್ನು ಟ್ಯಾಂಕರ್ನಲ್ಲಿ ತರಿಸಿ ಹಂಚಿದ್ದಾರೆ.
ಕೃಷ್ಣಯ್ಯ ಶೆಟ್ಟರು ಟ್ಯಾಂಕರ್ನಲ್ಲಿ ತರಿಸಿದ ಗಂಗಜಲದಿಂದ ಸೋಮವಾರ ಚಾಮರಾಜಪೇಟೆಯ ರಾಮೇಶ್ವರ ದೇವಾಲಯದಲ್ಲಿ ರಾಮೇಶ್ವರ ದೇವರಿಗೆ ಅಭಿಷೇಕ ಮಾಡಲಾಗಿದೆ. ನಂತರ ಸಾರ್ವಜನಿಕರಿಗೆ ಗಂಗಾಜಲ ವಿತರಿಸಲಾಯಿತು.
ಪುಣ್ಯಕ್ಷೇತ್ರ ಬ್ರಹ್ಮಕುಂಡದಿಂದ 40 ಸಾವಿರ ಲೀಟರ್ ಗಂಗಾಜಲವನ್ನು ಕೃಷ್ಣಯ್ಯ ಶೆಟ್ಟರು ತರಿಸಿದ್ದಾರೆ. ಈ ಜಲವನ್ನು ರಾಜ್ಯಾದ್ಯಂತ ಇರುವ ಪುರಾತನ ಶಿವದೇವಾಲಯಗಳಿಗೆ ತಲುಪಿಸಲಾಗುವುದು. ಇದಕ್ಕಾಗಿ 28 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕೃಷ್ಣಯ್ಯ ಶೆಟ್ಟರು ಇಂದಿಗೂ ಏಕಾದಶಿಯಂದು ಲಾಡು ಹಂಚುತ್ತಾರೆ.
ತ್ರಿಮೂರ್ತಿಗಳಲ್ಲಿ ಈಶ್ವರ ಹಾಗೂ ವಿಷ್ಣುವಿನ ಭಕ್ತರಾದ ಕೃಷ್ಣಯ್ಯ ಶೆಟ್ಟರು ಲಾಡು ಹಾಗೂ ಗಂಗಾ ಜಲ ವಿತರಣೆಯನ್ನು ವ್ರತದಂತೆ ಮುಂದುವರಿಸಿಕೊಂಡು ಬಂದಿದ್ದಾರೆ.