ಗ್ರಾಮ ಪಂಚಾಯಿತಿಗಳಿಗೂ ಬರಲಿದೆ ಬಸ್ ಬುಕ್ಕಿಂಗ್, ಬಿಲ್ ಪಾವತಿ ಸೇವೆ
ದೊಡ್ಡಬಳ್ಳಾಪುರ, ಸೆಪ್ಟೆಂಬರ್ 5: ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಿದ್ದು, ದೇಶದಲ್ಲಿ ಈ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಧಾರ್ ತಿದ್ದುಪಡಿ ಕೇಂದ್ರವನ್ನು ಉದ್ಘಾಟಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಳಿಕ ಅವರು, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಡಿಜಿಟಲ್ ಲೈಬ್ರರಿಯನ್ನು ಉದ್ಘಾಟಿಸಿದರು.

ಶೇ 59ರಷ್ಟು ಆಧಾರ್ ನೋಂದಣಿ
ಸರ್ಕಾರಿ ಅಥವಾ ಖಾಸಗಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ವ್ಯಕ್ತಿಯ ಮೂಲ ಗುರುತಿನ ಚೀಟಿಯಾಗಿದೆ. ರಾಜ್ಯದಲ್ಲಿ ಶೇ 59ರಷ್ಟು ಜನರು ಆಧಾರ್ ನೋಂದಣಿ ಮಾಡಿಸಿಕೊಂಡಿದ್ದು, ಇವುಗಳಲ್ಲಿ ಸಾಕಷ್ಟು ತಿದ್ದುಪಡಿಗಳು ದಿನಂಪ್ರತಿ ಬರುತ್ತದೆ. ಗ್ರಾಮೀಣ ಜನರು ಆಧಾರ್ ತಿದ್ದುಪಡಿಗಾಗಿ ಸಾಕಷ್ಟು ದೂರ ಕ್ರಮಿಸಬಾರದೆಂದು ಈ ಸಮಸ್ಯೆಗೆ ಪರಿಹಾರವಾಗಿ ಸಾರ್ವಜನಿಕರಿಗೆ ಕೈಗೆಟುಕುವ ಅಂತರ ಹಾಗೂ ದರದಲ್ಲಿ ಆಧಾರ್ ತಿದ್ದುಪಡಿ ಮಾಡಲು ಸಹಕಾರವಾಗುವಂತೆ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

6022 ಗ್ರಾಮ ಪಂಚಾಯಿತಿಗಳಲ್ಲೂ ಕೇಂದ್ರ
ರಾಜ್ಯದ 6022 ಗ್ರಾಮ ಪಂಚಾಯಿತಿಗಳಲ್ಲೂ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪಿಸಲಾಗಿದ್ದು, ಸಾರ್ವಜನಿಕರ ಮನೆ ವಿಳಾಸ, ಮೊಬೈಲ್ ಸಂಖ್ಯೆ, ಪಿನ್ಕೋಡ್, ಹಾಗೂ ಇ-ಮೇಲ್ ಐಡಿಗಳನ್ನು ಆಧಾರ್ನಲ್ಲಿ ತಿದ್ದುಪಡಿಮಾಡಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.

ಬೆಂಗಳೂರು-ಒನ್ ಮಾದರಿಯಲ್ಲಿ ಸೇವಾ ಕೇಂದ್ರ
ವಿದ್ಯುತ್ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ಕಂದಾಯ ಪಾವತಿ, ಬಸ್, ವಿಮಾನ, ರೈಲು ಪ್ರಮಾಣದ ಮುಂಗಡ ಬುಕ್ಕಿಂಗ್ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಒದಗಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಬೆಂಗಳೂರು-ಒನ್ ಸೇವಾ ಕೇಂದ್ರದ ಮಾದರಿಯಲ್ಲೇ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೆ ಸ್ವಾನ್-2 ನೆಟ್ವರ್ಕ್ ಸೌಲಭ್ಯ
ತಾಲ್ಲೂಕು ಕಚೇರಿ, ನಾಡ ಕಚೇರಿ, ಬಾಪೂಜಿ ಸೇವಾ ಕೇಂದ್ರಗಳ ಮೇಲಿನ ಕೆಲಸದ ಒತ್ತಡವನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿ ಸೇವಾ ಕೇಂದ್ರಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಕೆ-ಸ್ವಾನ್ನಲ್ಲಿ ಸರ್ವರ್ ಸಮಸ್ಯೆ ಇರುವುದಿಂದ ರೂ. 500 ಕೋಟಿ ವೆಚ್ಚದಲ್ಲಿ ಕೆ-ಸ್ವಾನ್-2 ಎಂಬ ನೆಟ್ವರ್ಕ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ನೆಟ್ವರ್ಕ್ ಸಾಮರ್ಥ್ಯದಲ್ಲಿ ಗಣನೀಯ ಏರಿಕೆ ಕಾಣಲಿದೆ. ಕೆಲವು ತಿಂಗಳುಗಳಲ್ಲ್ಲಿ ಕೆ-ಸ್ವಾನ್-2 ಕಾರ್ಯಾರಂಭಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಶಿಕ್ಷಕ ವೃತ್ತಿ ಜವಾಬ್ದಾರಿಯುತ
ಮಕ್ಕಳ ಭವಿಷ್ಯ ರೂಪಿಸುವವರು ಶಿಕ್ಷಕರು, ಸಮಾಜ ಮತ್ತು ದೇಶದ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಇವರ ಕೊಡುಗೆ ಬಹುಪಾಲು ಇರುವುದರಿಂದ, ಹಲವು ವೃತ್ತಿಗಳಿಗೆ ಮೀರಿದ ಗೌರವ ಶಿಕ್ಷಕರಿಗಿದ್ದು, ಜವಾಬ್ದಾರಿಯುತ ವೃತ್ತಿಯಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಮಕ್ಕಳ ದಾಖಲಾತಿ ಇಳಿಕೆ
ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಪ್ರಮಾಣ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯಾದರೆ, ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಏರಿಕೆಯಾಗಲಿದೆ. ಆದ್ದರಿಂದ ಶಿಕ್ಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿವಹಿಸಿ ಬದಲಾವಣೆ ತರುವ ಸಂಕಲ್ಪ ಮಾಡಿದರೆ ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.

ಫಲಿತಾಂಶ ಹೆಚ್ಚಳಕ್ಕೆ ಕಾರ್ಯಾಗಾರ
ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಮೂರು ವರ್ಷ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ, ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿತ್ತು. ಈಗ 14ನೇ ಸ್ಥಾನದಲ್ಲಿದೆ. ಮುಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ 2,400 ಮಕ್ಕಳು ಹಾಜರಾಗಲಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಾರ್ಯಾಗಾರ ನಡೆಸಲಾಗುವುದು ಹಾಗೂ ಪೂರಕ ಪುಸ್ತಕಗಳನ್ನು ನೀಡಲಾಗುವುದು, ಜಿಲ್ಲೆಯ ಶಿಕ್ಷಕರು ಕೂಡ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಪ್ರತಿಭೆ ಹೊರತೆಗೆಯಬೇಕು
ಶಿಕ್ಷಣ ಕೊಡುವಷ್ಟು ಸಾಮರ್ಥ್ಯ ಮನುಷ್ಯನಿಗೆ ಯಾವುದೂ ಕೊಡುವುದಿಲ್ಲ. ಓದು ಬರಹ ತಿಳಿದು ಅಂತರಂಗದ ಅರಿವನ್ನು ತಿಳಿದವರು ಸುಜ್ಞಾನಿಯಾಗಿರುತ್ತಾನೆ. ಶಿಕ್ಷಕರಲ್ಲಿ ಪರಿಶ್ರಮ, ಶ್ರದ್ಧೆ, ಆದರ್ಶ ಇದ್ದರೆ ಅದು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅಂಕಗಳಿಸುವುದೇ ಗುರಿಯಲ್ಲ. ಮಕ್ಕಳಲ್ಲಿ ಅನ್ವೇಷಣಾ ಮನೋಭಾವ, ಉತ್ತಮ ಪ್ರಜ್ಞೆ ಬೆಳೆಸಿ, ಶಿಕ್ಷಕರು ಅವರ ಪ್ರತಿಭೆಯನ್ನು ಹೊರತೆಗೆಯಬೇಕೆಂದು ಹೇಳಿದರು.












Click it and Unblock the Notifications