ಕೆಪಿಎಸ್ಸಿ ಹಗರಣದ ಚಾರ್ಚ್ ಶೀಟ್ ಸಲ್ಲಿಕೆ
ಬೆಂಗಳೂರು, ಮೇ 14 : ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸಿಐಡಿ ಮಂಗಳವಾರ ನ್ಯಾಯಾಲಯಕ್ಕೆ 10,521 ಪುಟಗಳ ಚಾರ್ಚ್ ಶೀಟ್ ಅನ್ನು ಸಲ್ಲಿಸಿದೆ. ಎಫ್ಐಆರ್ ದಾಖಲಾದ ಎಂಟು ಆರೋಪಿಗಳ ಪೈಕಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿದಂತೆ 6 ಮಂದಿಯ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಲಾಗಿದೆ.
ಮಂಗಳವಾರ ಸಿಐಡಿ ಅಧಿಕಾರಿಗಳು 6 ಮಂದಿಯ ವಿರುದ್ಧದ 10,521 ಪುಟಗಳ ಚಾರ್ಜ್ಶೀಟ್ ಅನ್ನು 23ನೇ ಅಪರ ನಗರ ಸಿವಿಲ್ ಮತ್ತು ಸತ್ರ (ವಿಶೇಷ) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಕೆಪಿಎಸ್ಸಿ ಸದಸ್ಯೆ ಡಾ.ಮಂಗಳಾ ಶ್ರೀಧರ್ ಹಾಗೂ ಕೆಪಿಎಸ್ಸಿ ಮಾಜಿ ಕಾರ್ಯದರ್ಶಿ ಸುಂದರ್ ಅವರ ವಿಚಾರಣೆ ಬಾಕಿ ಇದೆ. [ಕೆಪಿಎಸ್ಸಿ ಅಕ್ರಮದ ವಿರುದ್ಧ ಲೋಕಸತ್ತಾ ಹೋರಾಟ]

2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಸಿಐಡಿ ಪೊಲೀಸರು ಆರು ಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. [ಕೆಪಿಎಸ್ಸಿ ಅಕ್ರಮ ಇಬ್ಬರ ಬಂಧನ]
ಒಟ್ಟು 10,521 ಪುಟಗಳ ಸಮಗ್ರ ಆರೋಪಟ್ಟಿಯಲ್ಲಿ, ಪೂರಕ ದಾಖಲೆಗಳು, 216 ಸಾಕ್ಷಿಗಳ ಹೇಳಿಕೆಗಳಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡಾ.ಮಂಗಳಾ ಶ್ರೀಧರ್ ಹಾಗೂ ಮಾಜಿ ಕಾರ್ಯದರ್ಶಿ ಸುಂದರ್ ಅವರ ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. [ಕೆಪಿಎಸ್ಸಿ ಅಕ್ರಮದ ತನಿಖೆ ಸಿಐಡಿ ಹೆಗಲಿಗೆ]
ಯಾರ ವಿರುದ್ಧ ಆರೋಪ ಪಟ್ಟಿ : ಕೆಪಿಎಸ್ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ವಿಶೇಷಾಧಿಕಾರಿ ಎಸ್. ಅರುಣಾಚಲಂ, ಸದಸ್ಯೆ ಡಾ. ಮಂಗಳಾ ಶ್ರೀಧರ್ ಆಪ್ತ ಸಹಾಯಕ ಅಶೋಕ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳಾದ ಸುಧೀರ್, ಸೋಮನಾಥ್ ಎಂ. ಚಿಕ್ಕಮಠ್ ಹಾಗೂ ವಿಧಾನಸೌಧ ಸಚಿವಾಲಯ ನೌಕರ ಕೆ.ಅರ್. ರಾಜಶೇಖರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಪ್ರಕರಣವೇನು : 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿ ಅವ್ಯವಹಾರ ನಡೆದಿದೆ ಎಂದು ಡಾ. ಮೈತ್ರಿ ಸೇರಿದಂತೆ ಹಲವು ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಸರ್ಕಾರ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿತ್ತು.
ಕೆಪಿಎಸ್ಸಿ ಹಗರಣದ ವಿರುದ್ಧ ಲೋಕಸತ್ತಾ ಪಕ್ಷ ಸರಣಿ ಪ್ರತಿಭಟನೆಯನ್ನು ನಡೆಸಿತು. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಮನೆ ಮುಂದೆ ಧರಣಿ ನಡೆಸಿ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications