ವಿವಾದಾತ್ಮಕ ಬಿಡದಿ ಯೋಜನೆ ಟೆಂಡರ್ ರದ್ದು

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅಲ್ಸ್ತೋಮ್ ಕಂಪೆನಿಗೆ 2,184 ಕೋಟಿ ರೂ. ಮೊತ್ತದ ಬಿಡದಿಯ ಅನಿಲ ಆಧಾರಿತ ವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡಿತ್ತು. ರಾಜ್ಯ ಸರ್ಕಾರದ ಸೂಚನೆಯಂತೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಗುತ್ತಿಗೆ ರದ್ದುಪಡಿಸಿ, ಹೊಸದಾಗಿ ಟೆಂಡರ್ ಕರೆದಿದೆ.
700 ಮೆಗಾವಾಟ್ ಸಾಮರ್ಥ್ಯದ ಈ ಯೋಜನೆಯ ಗುತ್ತಿಗೆಯನ್ನು ಅಲ್ಸ್ ತೋಮ್ ಕಂಪೆನಿಗೆ ನೀಡಿದ್ದ ಬಿಜೆಪಿ ಸರ್ಕಾರದ ಕ್ರಮ ವಿವಾದಕ್ಕೆ ಕಾರಣವಾಗಿತ್ತು. 2012ರಲ್ಲಿ ಕಂಪನಿಯನ್ನು ವಿಶ್ವಬ್ಯಾಂಕ್ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೆ, ಆ ಕಂಪನಿಗೆ ಯೋಜನೆಯ ಟೆಂಡರ್ ಅನ್ನು ಸರ್ಕಾರ ನೀಡಿತ್ತು.
ಬಿಜೆಪಿ ಸರ್ಕಾರ ಈ ಕ್ರಮಕ್ಕೆ ಗುತ್ತಿಗೆಯಲ್ಲಿ ಭಾಗವಹಿಸಿದ್ದ ಇತರ ಕಂಪನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಟೆಂಡರ್ ಷರತ್ತುಗಳನ್ನು ಸಡಿಲಿಸಿ, ಅಲ್ಸ್ ತೋಮ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪವಿತ್ತು.
ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಟೆಂಡರ್ ರದ್ದು ಪಡಿಸಿ, ಹೊಸ ಗುತ್ತಿಗೆ ಕರೆಯದಿದ್ದರೆ, ನ್ಯಾಯಾಲಯದ ಮೊರೆ ಹೋಗುವುದಾಗಿ ವಿವಿಧ ಕಂಪನಿಗಳು ಎಚ್ಚರಿಕೆ ನೀಡಿದ್ದವು. ಆದ್ದರಿಂದ ಸರ್ಕಾರ ಟೆಂಡರ್ ರದ್ದುಗೊಳಿಸಿದೆ.
ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಕಾಂಬಳೆ ಕಂಪನಿಯ ಗುತ್ತಿಗೆ ರದ್ದಾಗಿರುವುದನ್ನು ಖಚಿತಪಡಿಸಿದ್ದಾರೆ. ವಿವಾದ ನ್ಯಾಯಾಲಯದ ಮೆಟ್ಟಿಲೇರಿದರೆ, ಕಾಮಾರಿ ತಡವಾಗಲಿದೆ ಎಂದು ಹಳೆಯ ಟೆಂಡರ್ ರದ್ದುಗೊಳಿಸಿ, ನೂತನ ಟೆಂಡರ್ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆಗೆ ಅಡ್ಡಿಯಿಲ್ಲ : ಹೊಸ ಟೆಂಡರ್ ಕರೆದರೂ ಕಾಮಗಾರಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಕೆಪಿಸಿಎಲ್ ಸ್ಪಷ್ಟಪಡಿಸಿದೆ. ಈಗಾಗಲೇ ದಾಬೋಲ್ನಿಂದ ಬಿಡದಿವರೆಗೆ ಪೈಪ್ಲೈನ್ ಅಳವಡಿಕೆ ಪೂರ್ಣಗೊಂಡಿದ್ದು, 30 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ಹೇಳಿದೆ. (ಕೊಳವೆ ಮೂಲಕ ಬರಲಿದೆ ಅಡುಗೆ ಅನಿಲ !)
2011ರ ಜುಲೈ 5ರಂದು 1,400 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿತ್ತು. ಅನಿಲವಿದ್ಯುತ್ ಯೋಜನೆಗೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಮೊದಲ ಹಂತದಲ್ಲಿ 700 ಮೆಗಾವಾಟ್ ಸಾಮರ್ಥ್ಯದ ಯೋಜನೆ ಪ್ರಾರಂಭಿಸಲಾಗಿತ್ತು.












Click it and Unblock the Notifications