’ಮೋದಿ ಸೋಲಿಸಿ ಭಾರತ ಗೆಲ್ಲಿಸಿ’ ಪ್ರತಿಭಟನೆಗೆ ವೇದಿಕೆ ಸಜ್ಜು
ಬೆಂಗಳೂರು, ನ 14: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೆಂಗಳೂರು ಭೇಟಿ ವಿರೋಧಿಸಿ ಭಾರೀ ಪ್ರತಿಭಟನೆಗೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸಜ್ಜಾಗಿದೆ. ಮೋದಿ ಭೇಟಿ ನೀಡುವ ಭಾನುವಾರದಂದು (ನ 17) ರಾಜ್ಯಾದ್ಯಂತ ಪ್ರತಿಭಟನೆಗೆ ವೇದಿಕೆ ಮುಂದಾಗಿದೆ.
ನವೆಂಬರ್ 17ರಂದು ವೇದಿಕೆ ನಗರದ ಬನ್ನಪ್ಪ ಪಾರ್ಕಿನಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆ ಸಲ್ಲಿಸಲಿದೆ. ಬನ್ನಪ್ಪ ಪಾರ್ಕಿನಿಂದ ಬೆಳಗ್ಗೆ 10.30ಕ್ಕೆ ಆರಂಭವಾಗುವ ಈ ಮೆರವಣಿಗೆಗೆ ರಾಜ್ಯಾದ್ಯಂತ ಸುಮಾರು 130ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಕೋಮುವಾದಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ಅವಶ್ಯಕತೆಯಿಲ್ಲ. ಅವರ ಬೆಂಗಳೂರು ಸಾರ್ವಜನಿಕ ಸಭೆಗೆ 'ಮೋದಿ ಗೆಲ್ಲಿಸಿ ಭಾರತ ಗೆಲ್ಲಿಸಿ' ಎಂದು ಹೆಸರಿಡಲಾಗಿದೆ.

ನಾವು ನಡೆಸುವ ಪ್ರತಿಭಟನೆಗೆ 'ಮೋದಿ ಸೋಲಿಸಿ ಭಾರತ ಗೆಲ್ಲಿಸಿ' ಎಂದು ಹೆಸರಿಟ್ಟಿದ್ದೇವೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಗುಜರಾತಿನಲ್ಲಿ ನಡೆದ ನರಮೇಧವನ್ನು ಜನ ಇನ್ನೂ ಮೆರೆತಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸುಭದ್ರವಾಗಿರುತ್ತೆ ಎನ್ನುವುದು ಎಲ್ಲಾ ಸುಳ್ಳು. ನಾವು ಮೋದಿ ಬೆಂಗಳೂರು ಭೇಟಿಯನ್ನು ವಿರೋಧಿಸುತ್ತೇವೆ. ಅವರು ಬೆಂಗಳೂರಿಗೆ ಬರುವ ಯಾವುದೇ ಅವಶ್ಯಕತೆಯಿಲ್ಲ ಎಂದು ಗೋಷ್ಠಿಯಲ್ಲಿ ಭಾಗವಹಿಸಿದ್ದ ಬಿ ಟಿ ಲಲಿತಾ ನಾಯಕ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎ ಕೆ ಸುಬ್ಬಯ್ಯ, ಗೌರಿ ಲಂಕೇಶ್ ಮುಂತಾದವರು ಹಾಜರಿದ್ದರು.












Click it and Unblock the Notifications