ಪೊಲೀಸರ ಆಟೋಟಕ್ಕೆ ಇನ್ಫೋಸಿಸ್ ಸಂಸ್ಥೆ ದೇಣಿಗೆ, ಆರಗ ಶ್ಲಾಘನೆ
ಬೆಂಗಳೂರು, ನವೆಂಬರ್ 23: ಇನ್ಫೋಸಿಸ್ ಫೌಂಡೇಶನ್ ಸಂಸ್ಥೆ, ತನ್ನ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ನಿಧಿ ವತಿಯಿಂದ ಆಡುಗೋಡಿಯ ಕಮಾಂಡ್ ಆರ್ಮ್ಡ್ ರಿಸರ್ವ್ (CAR) ಮತ್ತು ಬಿನ್ನಿಮಿಲ್ಲ್ ಪೋಲಿಸ್ ವಸತಿ ಗೃಹಗಳ ಸಮುಚ್ಚಯದಲ್ಲಿ ಆಟದ ಮೈದಾನವನ್ನು ನಿರ್ಮಿಸಲು, ಸುಮಾರು 68 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ, ಇನ್ಫೋಸಿಸ್ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಸಚಿವರು, ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಸಾಮಾಜಿಕ ಕಳಕಳಿ ಅನನ್ಯವಾಗಿದ್ದು, ಇತರ ಕಾರ್ಪೊರೇಟ್ ಸಂಸ್ಥೆಗಳಿಗೆ, ಮಾದರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಸಂಸ್ಥಯು ನೀಡಲಾಗುವ ಆರ್ಥಿಕ ಸಹಾಯವನ್ನು ಬೆಂಗಳೂರು ನಗರದ ಸ್ಥಳೀಯ ನಿವಾಸಿಗಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳ ಮಕ್ಕಳ ಕ್ರೀಡಾ ಚಟುವಟಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಉಪಯೋಗಿಸಿಕೊಳ್ಳಲಾಗುವುದು ಎಂದಿದ್ದಾರೆ.

ಈ ಕುರಿತು ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯಿಂದ ಸಲ್ಲಿಸಲಾದ, ಕ್ರೀಡಾ ಚಟುವಟಿಕೆಯ ಮೂಲ ಸೌಲಭ್ಯಗಳನ್ನು ನಿರ್ಮಿಸಿಕೊಡುವ ಪ್ರಸ್ತಾವನೆಯನ್ನು, ಸರಕಾರವು ಪರಿಶೀಲಿಸಿ ಅನುಮತಿ ನೀಡಿರುವುದನ್ನು,ಗೃಹ ಸಚಿವರು ಉಲ್ಲೇಖಿಸಿದ್ದಾರೆ.
ಸದರಿ ಪ್ರಸ್ತಾವನೆಯಲ್ಲಿ ಬೆಂಗಳೂರು ನಗರದ ಅಡುಗೋಡಿಯ ಸಿ ಎ ಆರ್ (ದಕ್ಷಿಣ) ಮತ್ತು ಬಿನ್ನಿಮಿಲ್ಲ್ ಪೊಲೀಸ್ ವಸತಿಗೃಹಗಳ ಸಮುಚ್ಚಯದಲ್ಲಿ ಆಟದ ಮೈದಾನವನ್ನು ನಿರ್ಮಿಸಿಕೊಳ್ಳಲು, ಸಿ ಎಸ್ ಆರ್ ಅನುದಾನವನ್ನು ಬಳಸಲಾಗುವುದು ಎಂದರು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಇನ್ಫೋಸಿಸ್ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಚಂಡೀಗಢ, ಹುಬ್ಬಳ್ಳಿ ಮತ್ತು ಕಲ್ಬುರ್ಗಿಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಲು ನೆರವು ನೀಡಿದೆ. ಹೆಚ್ಚುವರಿಯಾಗಿ ಈ ಫೌಂಡೇಷನ್ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಕ್ರಿಯಾ ಕೊಠಡಿ ಸಂಕೀರ್ಣ ನಿರ್ಮಾಣಕ್ಕೆ, ಒಡಿಶಾದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮತ್ತು ಮಹಾರಾಷ್ಟ್ರದಲ್ಲಿ ಆಸ್ಪತ್ರೆ ಘಟಕ ನಿರ್ಮಾಣಕ್ಕೆ, ಕರ್ನಾಟಕದಲ್ಲಿ ವೈದ್ಯಕೀಯ ವಾರ್ಡ್ಗಳು ಮತ್ತು ಪೆಥಾಲಜಿ ಪ್ರಯೋಗಾಲಯ ನಿರ್ಮಾಣಕ್ಕೆ, ಕರ್ನಾಟಕ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಪಡೆದುಕೊಳ್ಳಲು ಮತ್ತು ಇತರೆ ಉಪಕ್ರಮಗಳಿಗೆ ನಿಧಿ ನೆರವು ನೀಡಿದೆ.
ಇನ್ನೊಂದು ಸುದ್ದಿ:
ಐಪಿಎಸ್ ಅಧಿಕಾರಿಗಳ ಜೊತೆ ಡಿಜಿಐಜಿಪಿ ಪ್ರವೀಣ್ ಸೂದ್ ಸಭೆ
ಬೆಂಗಳೂರು ಕಮಿಷನರೇಟ್ ಐಪಿಎಸ್ ಅಧಿಕಾರಿಗಳ ಜೊತೆ ಡಿಜಿಐಜಿಪಿ ಪ್ರವೀಣ್ ಸೂದ್ ಸಭೆ ನಡೆಸಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಆಯುಕ್ತರು, ಡಿಸಿಪಿಗಳು ಭಾಗಿಯಾಗಿದ್ದಾರೆ
ಪ್ರಧಾನಿ ಮೋದಿ ಜೊತೆ ಮೀಟಿಂಗ್ ನಂತರ ಡಿಜಿಐಜಿಪಿ ಸಭೆ ಆಯೋಜಿಸಲಾಗಿದೆ. 56ನೇ ಡಿಜಿ & ಐಜಿಪಿಗಳ ಸಭೆಯಲ್ಲಿ ಪ್ರಸ್ತಾಪವಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಎರಡು ದಿನಗಳ ಹಿಂದೆ ಲಕ್ನೋದಲ್ಲಿ ಪಿಎಂ ಮೋದಿ ಜೊತೆ ಎಲ್ಲಾ ರಾಜ್ಯಗಳ ಡಿಜಿ/ಐಜಿಪಿಗಳ ಸಭೆ ನಡೆದಿತ್ತು.
ಮೋದಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ರಾಜ್ಯ ಡಿಜಿ & ಐಜಿಪಿ ಪ್ರವೀಣ್ ಸೂದ್ ಭಾಗಿಯಾಗಿದ್ದರು. ಈ ಸಭೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮೋದಿ ಸೂಚಿಸಿದ್ದರು.
ಸಾರ್ವಜನಿಕ ವಲಯದಲ್ಲಿ ಸ್ಮಾರ್ಟ್ ತಂತ್ರಜ್ಞಾನ ಬಳಸಬೇಕು, ದೈನಂದಿನ ಸವಾಲುಗಳನ್ನ ಎದುರಿಸಲು ಖಾಸಗಿ ಏಜೆನ್ಸಿಗಳ ಸಹಾಯ ಪಡೆಯಬೇಕು, ಸೈಬರ್ ಪ್ರಕರಣಗಳ ತಡೆ ಹಾಗೂ ತ್ವರಿತ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಿ, ಸೈಬರ್ ಕ್ರೈಂ ತಡೆಗಟ್ಟಲು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದು ಮೋದಿ ಸೂಚಿಸಿದ್ದರು.
ತಾಂತ್ರಿಕ ಯಶಸ್ಸಿನ ಮೂಲಕ ಸ್ಮಾರ್ಟ್ ಪೊಲೀಸಿಂಗ್ ಅಳವಡಿಕೆ ಬಗ್ಗೆ ಹೆಚ್ಚಿನ ಒತ್ತು ನೀಡಲು ಸೂಚನೆ ಸಿಕ್ಕಿದ್ದು, ಪ್ರಧಾನಿಯೊಂದಿಗಿನ ಸಭೆಯಲ್ಲಿ ಪ್ರಸ್ತಾಪವಾದ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಉನ್ನತ ತಂತ್ರಜ್ಞಾನ ಬಳಕೆ ಹಾಗೂ ಅಪರಾಧಗಳ ಪತ್ತೆ ಬಗ್ಗೆ ಪ್ರವೀಣ್ ಸೂದ್ ಪರಿಶೀಲನೆ ಮಾಡಲಿದ್ದಾರೆ.












Click it and Unblock the Notifications