ಮೋದಿ ಬೆಂಬಲಿಸಿ ಅಡ್ವಾಣಿಗೆ ಪತ್ರ ಬರೆದ ಯಡಿಯೂರಪ್ಪ
ಬೆಂಗಳೂರು, ಅ.19 : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಎನ್ ಡಿಎ ಮೈತ್ರಿ ಕೂಟದ ಅಂಗಪಕ್ಷವಾಗಿ ಕೆಜೆಪಿಯನ್ನು ಪರಿಗಣಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದು, ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಶನಿವಾರ ಯಡಿಯೂರಪ್ಪ ಅವರು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಈ ಪತ್ರವನ್ನು ಕಳಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಕೂಟಕ್ಕೆ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಬೆಂಬಲ ನೀಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎನ್ ಡಿಎ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಆಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ನಮ್ಮ ಬೆಂಬಲವಿದೆ. ಎನ್ ಡಿಎ ಅಂಗಪಕ್ಷವಾಗಿ ಕೆಜೆಪಿಯನ್ನು ಪರಿಗಣಿಸಬೇಕು ಎಂದು ಯಡಿಯೂರಪ್ಪ ಪತ್ರದಲ್ಲಿ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಎನ್ ಡಿಎ ಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.
ಎನ್ ಡಿಎ ಮೈತ್ರಿ ಕೂಟದ ಅಂಗಪಕ್ಷವಾಗಿ ಕೆಲಸ ಮಾಡಲು ಕೆಜೆಪಿ ಸಿದ್ಧವಿದೆ. ಮುಂದಿನ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೆಜೆಪಿಯನ್ನು ಎನ್ ಡಿಎ ಅಂಗಪಕ್ಷವಾಗಿ ಪರಿಗಣಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಪತ್ರದಲ್ಲಿ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.
2013r ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೆಜೆಪಿ ಪಕ್ಷ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಶೇ 10ರಷ್ಟು ಮತಗಳನ್ನು ಪಡೆದು ಚುನಾವಣಾ ಆಯೋಗದಿಂದ ಪ್ರಾದೇಶಿ ಪಕ್ಷ ಎಂಬ ಮಾನ್ಯತೆ ಪಡೆದಿದೆ. ಆದ್ದರಿಂದ ತಮ್ಮ ಪಕ್ಷವನ್ನು ಎನ್ ಡಿಎ ಮೈತ್ರಿಕೂಟದ ಅಂಗ ಪಕ್ಷ ಎಂದು ಪರಿಗಣಿಸಬೇಕು ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ಎನ್ ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಘೋಷಿಸಿದಾಗಲೇ ಬಿ.ಎಸ್.ಯಡಿಯೂರಪ್ಪ ತಾವು ನರೇಂದ್ರ ಮೋದಿ ಬೆಂಬಲಿಸಿ ಎನ್ ಡಿಎ ಮೈತ್ರಿ ಕೂಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಸದ್ಯ ತಮ್ಮ ಮಾತಿನಂತೆ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿ ಪತ್ರ ಬರೆದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ಅಡ್ವಾಣಿ ಅವರಿಗೆ ಕೋಪವಿದೆ. ಕೇಂದ್ರದ ಭ್ರಷ್ಟಾಚಾರದ ಕುರಿತು ಪ್ರಚಾರ ನಡೆಸಿ ಲೋಕಸಭೆ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಎನ್ ಡಿಎ ಅಂಗಪಕ್ಷವಾಗಿ ಕೆಜೆಪಿಯನ್ನು ಪರಿಗಣಿಸುತ್ತದೆಯೇ? ಇದಕ್ಕೆ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಒಪ್ಪಿಗೆ ನೀಡುತ್ತಾರೆಯೇ ಎಂಬುದು ಸದ್ಯ ಉದ್ಭವವಾಗಿರುವ ಪ್ರಶ್ನೆ.












Click it and Unblock the Notifications