ವಿಲೀನ: ಬಿಜೆಪಿಗೆ ಡೆಡ್ ಲೈನ್ ಕೊಟ್ಟ ಯಡಿಯೂರಪ್ಪ

ಯಾವುದೇ ವೇಳೆ ಲೋಕಸಭೆ ಚುನಾವಣೆ ಎದುರಾಗುವ ಸಾಧ್ಯತೆ ಇದ್ದು, ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂಬುದು ಯಡಿಯೂರಪ್ಪ ಚಡಪಡಿಕೆಗೆ ಕಾರಣವಾಗಿದೆ. ಯಡಿಯೂರಪ್ಪ ಮುಂದಿಟ್ಟಿರುವ ಬೇಡಿಕೆಗಳ ಪಟ್ಟಿ ಮತ್ತು ಷರತ್ತುಗಳು ರಾಜನಾಥ್ ಸಿಂಗ್ ಕೈಗೆ ಸೇರಿದ್ದು, ಸದ್ಯದಲ್ಲೇ ಸಂಸದೀಯ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಬಿಎಸ್ವೈ ಆಪ್ತರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನ. 17ರಂದು ಬೆಂಗಳೂರಿಗೆ ಆಗಮಿಸುವ ಮೊದಲೇ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವುದಾಗಲಿ, ಅಥವಾ ಸ್ಥಾನ ಹೊಂದಾಣಿಕೆ ಕುರಿತಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ನನ್ನ ದಾರಿ ನನಗೆ ಎಂದು ಯಡಿಯೂರಪ್ಪ ಗುಡುಗಿದ್ದಾರೆ ಎನ್ನಲಾಗಿದೆ.
ತಮ್ಮ ಪರಮಾಪ್ತರ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಗೆ ಈ ಸಂದೇಶ ರವಾನಿಸಿರುವ ಯಡಿಯೂರಪ್ಪ, ತಾವು ಮುಂದಿಟ್ಟಿರುವ ಷರತ್ತುಗಳನ್ನು ಒಪ್ಪಿ ರಾಷ್ಟ್ರೀಯ ನಾಯಕರೇ ಪಕ್ಷಕ್ಕೆ ಆಹ್ವಾನಿಸಬೇಕು. ಇಲ್ಲದಿದ್ದರೆ ಸ್ಥಾನ ಹೊಂದಾಣಿಕೆಯನ್ನಾದರೂ ಮಾಡಿಕೊಳ್ಳಬೇಕು. ಈ ಎರಡೂ ಸಾಧ್ಯವಾಗದಿದ್ದರೆ ಕೆಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಸಂದೇಶ ರವಾನಿಸಿದ್ದಾರಂತೆ.
ಕೆಲ ದಿನಗಳ ಹಿಂದೆಯೇ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಮೂಲಕ ತಮ್ಮ ಅಭಿಪ್ರಾಯವನ್ನು ರವಾನಿಸಿರುವ ಬಿಎಸ್ ವೈ ಮುಂದಿನ ತಿಂಗಳು 17ರಂದು ನರೇಂದ್ರ ಮೋದಿ ಆಗಮಿಸಲಿದ್ದು, ಅಷ್ಟರೊಳಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ರಾಜನಾಥ್ ಸಿಂಗ್ ಗೆ ಮನವಿ ಮಾಡಿದ್ದಾರೆ.
ಕೆಜೆಪಿಯನ್ನು ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾಗಿ ಪರಿಗಣಿಸುವಂತೆ ಬರೆದ ಪತ್ರಕ್ಕೆ ಸಂಸದೀಯ ಮಂಡಳಿ ಅಧ್ಯಕ್ಷ ಅಡ್ವಾಣಿ ಕೂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ, ನನ್ನನ್ನು ಪಕ್ಷಕ್ಕೆ ಬರಬೇಕೆಂದು ಕರೆಯುವವರು ನಾನು ಹಾಕಿರುವ ಷರತ್ತುಗಳನ್ನು ಮಾತ್ರ ಒಪ್ಪಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಭರವಸೆ ಇಲ್ಲದೆ ಬಿಜೆಪಿಗೆ ಬರುವುದು ಹೇಗೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
ನಾನು ಹಾಕಿರುವ ಷರತ್ತುಗಳು ಈಡೇರಿಸಲು ಸಾಧ್ಯವಿಲ್ಲದಂತಹ ಬೇಡಿಕೆಗಳೇನಲ್ಲ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕೆಂಬ ಇಚ್ಛೆಯನ್ನು ರಾಷ್ಟ್ರೀಯ ನಾಯಕರು ಹೊಂದಿದ್ದರೆ ಮೋದಿ ಆಗಮನಕ್ಕೂ ಮೊದಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಡೆಡ್ ಲೈನ್ ನೀಡಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿಯಿಂದ ಹೊರಬಂದ ಕೆಜೆಪಿ ಆರು ಸ್ಥಾನಗಳನ್ನು ಗೆದ್ದಿರಬಹುದು. ಆದರೆ, ಶೇ. 10ರಷ್ಟು ಮತ ಪಡೆದು ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ವಾಯಿತು. ಇದೀಗ 28 ಲೋಕಸಭೆ ಕ್ಷೇತ್ರಗಳಲ್ಲಿ ಸ್ಥಾನ ಹೊಂದಾಣಿಕೆ ಇಲ್ಲವೆ ಬಿಜೆಪಿಯೊಳಗೆ ಕೆಜೆಪಿಯನ್ನು ವಿಲೀನಗೊಳಿಸುವುದಾದರೆ ಶೀಘ್ರ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಕೆಜೆಪಿ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ಸಿದ್ಧವಿದೆ ಎಂಬ ದೃಢ ನಿರ್ಧಾರ ಹೊರಹಾಕಿದ್ದಾರೆ.












Click it and Unblock the Notifications