ಕಟ್ಟಡ ಕುಸಿತ ತನಿಖೆಗೆ ತಂಡ, ಮೃತರ ಕುಟುಂಬಕ್ಕೆ ರು.5 ಲಕ್ಷ: ಕೆ.ಜೆ.ಜಾರ್ಜ್
Recommended Video
ಬೆಂಗಳೂರು, ಫೆಬ್ರವರಿ 15: ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸುವುದಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದು, ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ಕುಸಿತ, 2 ಕಾರ್ಮಿಕ ಸಾವು, 20 ಜನ ಅವಶೇಷಗಳಡಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಅಗ್ನಿ ಶಾಮಕ ದಳ, ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಪಡೆದ ಅವರು, ರಕ್ಷಣಾ ಕಾರ್ಯಗಳ ಪ್ರಗತಿ ಬಗ್ಗೆ ಅಗ್ನಿ ಶಾಮಕ ದಳದಿಂದ ಮಾಹಿತಿ ಪಡೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಟ್ಟಡ ಕುಸಿತದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ. ಕಳಪೆ ಕಾಮಗಾರಿ, ನಿಯಮವಾಳಿಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದೆಯೆ ಎಂಬುದನ್ನೆಲ್ಲಾ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಬಿಬಿಎಂಪಿ ಮೇಯರ್ ಸಂಪತ್ರಾಜ್ ಅವರು, ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ಬಿಬಿಎಂಪಿ ಭರಿಸುವುದಾಗಿ ಹೇಳಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿಯೂ ಹೇಳಿದ್ದಾರೆ.
ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವಶೇಷಗಳಡಿ ಸಿಲುಕಿ ಮೂವರು ಕಾರ್ಮಿಕರು ಅಸುನೀಗಿದ್ದಾರೆ ಎ೦ದು ತಿಳಿದು ತೀವ್ರ ಆಘಾತವಾಗಿದೆ. ಸರ್ಕಾರ ಕಿ೦ಚಿತ್ತೂ ವಿಳ೦ಬ ಮಾಡದೆ ಸಮರೋಪಾದಿಯಲ್ಲಿ ರಕ್ಷಣಾಕಾರ್ಯದಲ್ಲಿ ತೊಡಗಬೇಕು. ಕಾರ್ಮಿಕರ ಪ್ರಾಣರಕ್ಷಣೆಯೇ ಮೊದಲ ಆದ್ಯತೆ ಎಂದಿದ್ದಾರೆ.
ಬೆ೦ಗಳೂರಿನ೦ತಹ ಮಹಾನಗರದಲ್ಲೆ ಇ೦ತಹ ದುರ್ಘಟನೆಗಳು ಪದೇಪದೇ ನಡೆಯುತ್ತಿರುವುದು ನಗರಾಡಳಿತ ಇಲಾಖೆಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವ೦ತಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎ೦ದು ಅವರು ಆಗ್ರಹಿಸಿದ್ದಾರೆ.