Kiccha Sudeep: ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ ಎಂದ ಸುದೀಪ್
ಬಿಜೆಪಿ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಿದ್ದ ನಟ ಸುದೀಪ್ ಬೆಂಗಳೂರಿನ ಜೆ.ಪಿ.ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮತದಾನ ಮಾಡಿದರು. ಸುದೀಪ್ಗೆ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆಯಾಗಿದ್ದರು. ಸುದೀಪ್ ಮಗಳು ಸಾನ್ವಿ ಇದೇ ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮಿಸಿದರು.
ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ಮತದಾನ ಮಾಡಬೇಕು ಎಂದು ರಾಜ್ಯದ ಜನತೆಗೆ ಮನವಿ ಮಾಡಿದರು. ಮಗಳು ಸಾನ್ವಿಗೆ ಇದೇ ಮೊದಲ ಬಾರಿ ಮತದಾನ ಮಾಡಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಪರವಾಗಿ ಉತ್ತರ ಕರ್ನಾಟಕದಲ್ಲಿ ಹಲವು ಕ್ಷೇತ್ರಗಲ್ಲಿ ಸುದೀಪ್ ಪ್ರಚಾರ ಮಾಡಿದ್ದರು. ಪ್ರಚಾರ ಮಾಡಿದ್ದ ಅನುಭವವನ್ನು ಅವರು ಹಂಚಿಕೊಂಡರು. ಪ್ರಚಾರದ ಸಂದರ್ಭದಲ್ಲಿ ಸಾಕಷ್ಟು ವಿಚಾಗಳನ್ನು ತಿಳಿದುಕೊಂಡಿದ್ದೇನೆ. ಸದ್ಯ ಶೇಕಡ 60ರಷ್ಟು ಮಾತ್ರ ಮತದಾನ ಆಗುತ್ತಿದೆ, ಒಳ್ಳೆಯದಾಗಬೇಕು ಎಂದರೆ ಎಲ್ಲರೂ ಮತದಾನ ಮಾಡಬೇಕು. ಇಂದು ಮತ ಹಾಕದೆ ಮನೆಯಲ್ಲಿ ಕೂತು ಆಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ನಾಯಕರನ್ನು, ಸರ್ಕಾರವನ್ನು ಬೈಯೋದ್ರಲ್ಲಿ ಅರ್ಥ ಇಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಆಗಬೇಕು
"ಪ್ರಚಾರಕ್ಕೆ ಹೋದಾಗ ಸಾಕಷ್ಟು ಸತ್ಯಗಳನ್ನು ಅರ್ಥ ಮಾಡಿಕೊಂಡಿದ್ದೇನೆ, ಅದು ನನ್ನ ಜೊತೆ ಇರುತ್ತದೆ. ತುಂಬಾ ಊರುಗಳಲ್ಲಿ ಹಲವು ಸಮಸ್ಯೆಗಳಿವೆ. ಉತ್ತರ ಕರ್ನಾಟಕದ ಸಾಕಷ್ಟು ಊರುಗಳಲ್ಲಿ ಬರೀ ನೀರು ಕೊಟ್ಟು ಸಮಾಧಾನ ಮಾಡಿಬಿಟ್ಟಿದ್ದಾರೆನೋ ಎನಿಸುತ್ತದೆ. ಹಲವು ಊರುಗಳು ಸಾಕಷ್ಟು ಹಿಂದೆ ಉಳಿದುಕೊಂಡಿವೆ. ಅಲ್ಲಿನ ಜನರಿಗೆ ಉತ್ತಮ ಜೀವನ ಸಿಗಬೇಕು ಎಂದರೆ ಎಲ್ಲರೂ ಉತ್ತಮವಾಗಿ ಕೆಲಸ ಮಾಡಬೇಕು" ಎಂದು ಹೇಳಿದರು.
ನನ್ನ ಸ್ನೇಹಿತರಿಗಾಗಿ ಪ್ರಚಾರ ಮಾಡಿದ್ದೇನೆ, ಅವರಿಗೆ ಒಳ್ಳೆಯದಾಗಬೇಕು, ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಜನತೆಗೆ ಒಳಿತಾಗಬೇಕು. ಜನ ಉತ್ತಮ ಆಯ್ಕೆಗಳನ್ನು ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications