Kharge Remark on Modi: ಕಾಂಗ್ರೆಸ್ ಶವಪೆಟ್ಟಿಗೆಗೆ ಮೇ 10ಕ್ಕೆ ಕೊನೆ ಮೊಳೆ ಬೀಳಲಿದೆ: ಬಿಜೆಪಿ ಸಂಸದ ತಿರುಗೇಟು
ಬೆಂಗಳೂರು, ಏಪ್ರಿಲ್ 27: ರಾಜ್ಯ ಚುನಾವಣಾ ಕಣವು ಕಳೆದೊಂದು ವಾರದಿಂದ ಘಟಾನುಗಟಿ ನಾಯಕರಿಂದ ಇನ್ನಷ್ಟು ಚುರುಕು ಪಡೆದಿದೆ. ಪ್ರಚಾರ, ಮತಯಾಚನೆ ಆರ್ಭಟ ಜೊತೆಗೆ ಪರಸ್ಪರ ಟೀಕೆಗಳು ವ್ಯಕ್ತವಾಗಿವೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕೆ ಚರ್ಚೆಯಾಗುತ್ತಿದ್ದು, ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಷದ ಹಾವಿದ್ದಂತೆ ಎಂದು ಪ್ರಚಾರವೊಂದರಲ್ಲಿ ಹೇಳಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗುರುವಾರ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ''ಈ ಸಲದ ಕರ್ನಾಟಕ ರಾಜ್ಯ ಚುನಾವಣೆ ಅತ್ಯಂತ ಮಹತ್ವದ ತಿರುವು ನೀಡಲಿದೆ. ಮೇ 10ರಂದು ಕಾಂಗ್ರೆಸ್ ಶವಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಹೇಗೆ ಹೊಡೆಯಲಾಗುತ್ತದೆ ಎಂದು ಕಾದು ನೋಡೋಣ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೇಲಿನ ಟೀಕೆಗೆ ಗರಂ ಆದ ಸಂಸದರು ಎಐಸಿಸಿ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಪ್ರಧಾನಿಯನ್ನು ಟೀಕಿಸಿದ್ದ ವಿಡಿಯೋ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಜನರು ಯಾರ ವಿರುದ್ಧವೂ ವೈಯಕ್ತಿಕ ಮತ್ತು ಕ್ರೂರವಾದ ಟೀಕೆಗಳನ್ನು ಸ್ವೀಕರಿಸುವುದಿಲ್ಲ. ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಡಿ, ಮೇ 10ರಂದು ಕಾಂಗ್ರೆಸ್ ಏನಾಗಲಿದೆ ಎಂದು ನೋಡಿ ಎನ್ನುವ ಮೂಲಕ ಸಂಸದರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.
ವಿಷದ ಹಾವು: ನೆಕ್ಕಿ ನೋಡಿದರೆ ನೀವು ಸತ್ತಂತೆ
ಪ್ರಧಾನಿ ಮೋದಿ ವಿಷದ ಹಾವಿದ್ದಂತೆ. ಹೌದೋ ಇಲ್ಲವೋ ಎಂದು ನೀವೇನಾದರೂ ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಗುರುವಾರ ಗದಗ ಜಿಲ್ಲೆಯಲ್ಲಿ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದರು.

ಕರ್ನಾಟಕದ ಈ ನೆಲದಲ್ಲಿ ಗುಜರಾತಿನವರು ಹೇಗೆ ಬಂದು ಮತಯಾಚಿಸುತ್ತಾರೆ. ನಾವು ಇಲ್ಲಿನ ಕನ್ನಡದ ಮಕ್ಕಳು ಯಾವನೋ ಗುಜರಾತ್ನಿಂದ ಬರಲಿ. ನಾವು ಬಗ್ಗಲ್ಲ ಎಂದರು. ಪ್ರಧಾನಿಯಾದರೂ ದೇಶದ ತಾಲೂಕು ಮತ್ತು ಹಳ್ಳಿಗಳನ್ನು ಸಂಚರಿಸುತ್ತಿದ್ದೀರಾ. ಮುಂದೆ ಪಾಲಿಕೆ, ನರಗಸಭೆ, ಪುರಸಭೆಯ ಚುನಾವಣೆಯಲ್ಲೂ ನೀವು ಹೋಗಿ ಮತ ಬೇಡುತ್ತೀರಾ. ಅಧಿಕಾರದ ಆಸೆಬುರಕರಿಗೆ ವ್ಯಾಮೋಹ ಎಂದು ರಾಜ್ಯ ಬಿಜೆಪಿ ನಾಯಕರ ಮೇಲೆಯೂ ಖರ್ಗೆ ಹರಿಹಾಯ್ದರು.
ಭ್ರಷ್ಟರ ಜೊತೆ ಮೋದಿ ನಿಂತಿದ್ದಾರೆ: ಖರ್ಗೆ
ನಂತರ ಟ್ವೀಟ್ ಮಾಡಿದ್ದ ಖರ್ಗೆ ರಾಜ್ಯದಲ್ಲಿ 40ಪರ್ಸೆಂಟ್ ಕಮಿಷನ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧಾರ ಮಾಡಿದ್ದಾರೆ. ಇದನು ನಾವು ಹೇಳುತ್ತಿಲ್ಲ ಗುತ್ತಿಗೆದಾರರ ಸಂಘವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಆದರೂ ಮೋದಿಯವರು ಭ್ರಷ್ಟರ ಜೊತೆ ನಿಂತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿಯೇ ಈ ಸಲ ಬದಲಾವಣೆಗೆ ಎದುರು ನೋಡುತ್ತಿದ್ದಾರೆ ಎಂದರು.












Click it and Unblock the Notifications