ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ
ಬೆಂಗಳೂರು, ಜೂನ್ 15: ನಮ್ಮ ಮೆಟ್ರೋ ಕಾಮಗಾರಿಗಾಗಿ ನಾಗವಾರ ಗೊಟ್ಟಿಗೆರೆ ಮಾರ್ಗದ ಎರಡನೇ ಹಂತದ 21 ಕಿ.ಮೀ ಉದ್ದದ ಮಾರ್ಗ ನಿರ್ಮಾಣಕ್ಕಾಗಿ ಬಿಬಿಎಂಪಿ ಎರಡು ರಸ್ತೆಗಳ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸುವುದನ್ನು ಬಿಎಂಆರ್ಸಿಎಲ್ ಕಾಯುವಂತಾಗಿದೆ.
ಬನ್ನೇರುಘಟ್ಟ ರಸ್ತೆ ಹಾಗೂ ಟ್ಯಾನರಿ ರಸ್ತೆಗಳನ್ನು ಅಗಲೀಕರಣ ಮಾಡಬೇಕಾದ ಜವಾಬ್ದಾರಿ ಬಿಬಿಎಂಪಿ ಹೆಗಲಮೇಲಿದ್ದು ಆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಬಿಎಂಆರ್ಸಿಎಲ್ ಎರಡನೇ ಹಂತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎರಡನೇ ಹಂತದ ಮೆಟ್ರೋ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ವಿಳಂಬವಾಗಲಿದೆ.
ಈಗಾಗಲೇ ಎರಡನೇ ಹಂತದ ಕಾಮಗಾರಿಗೆ ಬಿಎಂಆರ್ಸಿಎಲ್ ಟೆಂಡರ್ ಕರೆದಿತ್ತಾದರೂ ಕಾಮಗಾರಿ ವೆಚ್ಚ ವಿಪರೀತವಾದ ಹಿನ್ನೆಲೆಯಲ್ಲಿ ಎರಡು ಪ್ಯಾಕೇಜ್ಗಳನ್ನು ನಾಲ್ಕು ಪ್ಯಾಕೇಜ್ಗಳನ್ನಾಗಿ ವಿಂಗಡಿಸಿ ಮತ್ತೊಮ್ಮೆ ಹೊಸದಾಗಿ ಟೆಂಡರ್ ಆಹ್ವಾನಿಸಿದೆ.

ಈ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದ್ದು, 2019ರ ವೇಳೆಗೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುವಂತಾಗಲು ಬಿಬಿಎಂಪಿ ಟ್ಯಾನರಿ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಗಳ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ಅದಾದ ಬಳಿಕವಷ್ಟೇ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ ಎನ್ನುವುದು ಬಿಎಂಆರ್ಸಿಎಲ್ ಚಿಂತಗೆ ಕಾರಣವಾಗಿದೆ.
ಬಿಬಿಎಂಪಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಬನ್ನೇರುಘಟ್ಟ ರಸ್ತೆಯ ಅಗಲೀಕರಣ ಈಗಾಗಲೇ ಶೇ.20ರಷ್ಟು ಮುಗಿದಿದೆ. ಬಿಬಿಎಂಪಿ ಅಗಲೀಕರಣ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ವಿಳಭವೇ ಕಾರಣವಾಗಿದೆ ಎನ್ನಲಾಗುತ್ತಿದೆ.
ಟ್ರಾನ್ಸಫರೇಬಲ್ ಎನ್ವಿರಾನ್ಮೆಂಟಲ್ ರೈಟ್ಸ್ ಟಿಡಿಆರ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿ, ಖಾಸಗಿ ವ್ಯಕ್ತಿಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ ಆದರೆ ಟಿಡಿಆರ್ ದರಗಳ ಅನ್ವಯ ಜಮೀನನ್ನು ನೀಡಲು ಖಾಸಗಿ ವ್ಯಕ್ತಿಗಳು ಮುಂದೆಬರುತ್ತಿಲ್ಲ. ಸರಿಸುಮಾರು 4.63ಕಿ.ಮೀ ಉದ್ದದಟ್ಯಾನರಿ ರಸ್ತೆ ಅಗಲೀಕರಣ ವೇಳೆ ಸುಮಾರು 600 ಆಸ್ತಿಗಳನ್ನು ವಶಪಡಿಸಿಕೊಂಡು ಅಗಲೀಕರಣವನ್ನು ಮಾಡಬೇಕಿದೆ.
ಎಲಿವೇಟೆಡ್ ಕಾಮಗಾರಿ ಮಾಡುವುದು ಬಿಎಂಆರ್ಸಿಎಲ್ಗೆ ಅನಿವಾರ್ಯವಾಗಿದ್ದು, ಟನೆಲ್ ಮೂಲಕ ಕಾಮಗಾರಿ ಕೈಗೊಂಡರೆ ಭಾರಿ ವೆಚ್ಚ ತಗುಲುತ್ತದೆ. ಸುರಂಗ ಮಾರ್ಗ ಮೂಲಕ ಕೈಗೊಳ್ಳುವ ಕಾಮಗಾರಿಗೆ 450 ಕೋಟಿ ರೂ. ತಗುಲುತ್ತದೆ.
ಎಲೆವೇಟೆಡ್ ಕಾಮಗಾರಿಗೆ 150 ಕೋಟಿ ರೂ.ಗಳ ವೆಚ್ಚ ತಗುಲಲಿದೆ. ಈ ಬಿಎಂಆರ್ಸಿಎಲ್ ಎಲೆವೇಟೆಡ್ ಮೆಟ್ರೋ ರೈಲು ಮಾರ್ಗವನ್ನೇ ನಿರ್ಮಿಸಲು ಮುಂದಾಗಿದ್ದು ಬಿಬಿಎಂಪಿ ಮೇಲೆ ರಸ್ತೆ ಅಗಲೀಕರಣಕ್ಕೆ ಒತ್ತಡ ಹೇರುತ್ತಿದೆ.












Click it and Unblock the Notifications