ಕೇಳಿ ಕಥೆಯ ಆಡಿಯೋ ಪುಸ್ತಕದ ವೆಬ್ಸೈಟ್ ಲೋಕಾರ್ಪಣೆ
ಬೆಂಗಳೂರು,ಜು.16: ಕನ್ನಡದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯೋಗವಾದ 'ಕೇಳಿ ಕಥೆಯ' ಆಡಿಯೋ ಪುಸ್ತಕವು ಕನ್ನಡ ಸಣ್ಣ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತನ್ನ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಆರಂಭಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಾಗಾಭರಣ, ಬಿ. ಸುರೇಶ್ ಮತ್ತು ಗಾಯಕಿ ಎಂಡಿ ಪಲ್ಲವಿ ಅರುಣ್ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಚಾಲನೆಗೊಳಿಸಿದರು.
ನಿರ್ದೇಶಕ ಬಿ. ಸುರೇಶ್ ಮಾತನಾಡಿ,"ಇಂದು ಕನ್ನಡ ಮಾಧ್ಯಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ, ಬೇರೆ ವೃತ್ತಿಯಲ್ಲಿ ತೊಡಗಿದವರಿಗೆ ಕನ್ನಡ ಲಿಪಿಯ ಸಂಬಂಧ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ತಂತ್ರಜ್ಞಾನದ ಮೂಲಕ ಕನ್ನಡ ಕಥೆಗಳನ್ನು ಹತ್ತಿರವಾಗಲು ಪ್ರಯತ್ನಿಸಿದ್ದಾರೆ. ಇದೊಂದು ಅಪರೂಪದ ಮತ್ತು ಶ್ಲಾಘನೀಯ ಕೆಲಸ" ಎಂದು ಕೇಳಿ ಕಥೆಯ ತಂಡವನ್ನು ಅಭಿನಂದಿಸಿದರು.
ನಿರ್ದೇಶಕ ನಾಗಾಭರಣ ಮಾತನಾಡಿ,"ಹಿಂದೆ ಅಜ್ಜಿಯಂದಿರು ಮಕ್ಕಳಿಗೆ ಕಥೆ ಹೇಳುತ್ತಿದ್ದರು. ದೇವಸ್ಥಾನಗಳಲ್ಲಿ ಹರಿಕಥೆಗಳು ನಡೆಯುತಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಎಲ್ಲದಕ್ಕೂ ಸಮಯವೇ ಮುಖ್ಯವಾಗಿದೆ. ತಂತ್ರಜ್ಞಾನ ಬಳಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಈ ಪ್ರಯೋಗ ವಿಶೇಷವಾಗಿದೆ. ಈ ಪ್ರಯೋಗ ಯಶಸ್ವಿಯಾಗಲಿ" ಎಂದು ಶುಭಹಾರೈಸಿದರು.
"ವಿದೇಶದಲ್ಲಿ ಸಣ್ಣ ಮಕ್ಕಳು ತಂತ್ರಜ್ಞಾನ ಸಹಾಯ ಪಡೆದುಕೊಂಡು ಅಧ್ಯಯನ ನಡೆಸುತ್ತಾರೆ. ವಿದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ತಂತ್ರಜ್ಞಾನದ ಬಳಕೆ ಕಡಿಮೆಯಿದೆ. ತಂತ್ರಜ್ಞಾನದ ಅಭಿಮಾನಿಯಾಗಿರುವ ನಾನು ಮಕ್ಕಳ ಕಥೆಗೆ ಧ್ವನಿ ನೀಡಿದ್ದೇನೆ. ಈ ರೀತಿಯ ಕೆಲಸಕ್ಕೆ ಯಾವತ್ತೂ ನನ್ನ ಬೆಂಬಲವಿರುತ್ತದೆ" ಎಂದು ಗಾಯಕಿ ಎಂಡಿ ಪಲ್ಲವಿ ಹೇಳಿದರು.
ಕೇಳಿ ಕಥೆಯ ತಂಡದ ನಿರ್ದೇಶಕ ಮುಕುಂದ್ ಸೆಟ್ಲೂರ್ ಮಾತನಾಡಿ "ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕ ಉದ್ಯೋಗಿಗಳ ಕನಸಿನ ಕೂಸು ಇದು. ಈ ಕಾರ್ಯದಿಂದ ಬರುವ ಎಲ್ಲಾ ಹಣವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ" ಎಂದು ತಿಳಿಸಿದರು.[ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳುಗರಾಗಿರಿ!]
ಕೇಳಿ ಕಥೆಯ ಕನ್ನಡದ ಆರು ವಿಶಿಷ್ಠ ಕತೆಗಳನ್ನೊಳಗೊಂಡ ಸಿ.ಡಿ ಸಂಗ್ರಹವಾಗಿದ್ದು ಕನ್ನಡ ಚಿತ್ರ ರಂಗ, ನಾಟಕರಂಗ ಮತ್ತು ಸಂಗೀತ ಲೋಕದ ಪ್ರಖ್ಯಾತರು ಇವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ಸಣ್ಣ ಕಥೆಗಳಿಗೆ ಪ್ರಕಾಶ್ರೈ, ಸುಚೇಂದ್ರ ಪ್ರಸಾದ್, ನಾಗಾಭರಣ, ರಕ್ಷಿತ್ ಶೆಟ್ಟಿ, ಪಲ್ಲವಿ ಅರುಣ್ ಮತ್ತು ಕಿಶೋರ್ ಧ್ವನಿ ನೀಡಿದ್ದಾರೆ.
ಆರು ಕಥೆಗಳು ಯಾವುವು?
ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಆರು ಕಥೆಗಳು ಆಡಿಯೋ ಪುಸ್ತಕದಲ್ಲಿದೆ.
ಡೇರ್ ಡೆವಿಲ್ ಮುಸ್ತಫಾ: ಪೂರ್ಣ ಚಂದ್ರ ತೇಜಸ್ವಿ
ದಗಡೂ ಪರಬನ ಅಶ್ವಮೇಧ: ಜಯಂತ ಕಾಯ್ಕಿಣಿ
ಮಸೀದಿ ಬಿದ್ದ ಮೂರನೇ ದಿನ: ರವಿ ಬೆಳಗೆರೆ
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು: ನಾ ಡಿಸೋಜಾ
ಕೆಂಪು ಗಿಣಿ: ವಸುಧೇಂದ್ರ
ಕಾಯಕವೇ ಕೈಲಾಸ: ವಿಕ್ರಮ್ ಹತ್ವಾರ್
ಇದನ್ನು ಓದುತ್ತಿರುವವರು ಯಾರು..?
ಡೇರ್ ಡೆವಿಲ್ ಮುಸ್ತಫಾ - ಸುಚೇಂದ್ರ ಪ್ರಸಾದ್
ದಗಡೂ ಪರಬನ ಅಶ್ವಮೇಧ - ಪ್ರಕಾಶ್ ರೈ
ಮಸೀದಿ ಬಿದ್ದ ಮೂರನೇ ದಿನ - ಟಿ ಎಸ್ ನಾಗಾಭರಣ
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು - ಎಮ್ ಡಿ ಪಲ್ಲವಿ ಅರುಣ್
ಕೆಂಪು ಗಿಣಿ - ಕಿಶೋರ್
ಕಾಯಕವೇ ಕೈಲಾಸ - ರಕ್ಷಿತ್ ಶೆಟ್ಟಿ
ಬೆಲೆ ಎಷ್ಟು..?
ಭಾರತ : 150 ರೂ.
ಅಮೆರಿಕ: 6 ಡಾಲರ್
ಯುರೋಪ್ ದೇಶಗಳು :7 ಯುರೋ
ಆಸ್ಟ್ರೇಲಿಯಾ :8 ಡಾಲರ್
ಇಂಗ್ಲೆಂಡ್: 5 ಪೌಂಡ್
ಯುಎಇ : 15 ದಿರ್ಹಮ್ (Dirhams)
ಈ ಕಥಾ ಸಿ.ಡಿ ಗಳು ಎಲ್ಲಿ ದೊರೆಯುತ್ತವೆ?
ಸದ್ಯ ಕೆಲಸವಿನ್ನೂ ಪ್ರಗತಿಯಲ್ಲಿದೆ. ಮುಂಗಡ ಬುಕ್ಕಿಂಗ್ ಗಾಗಿ ಗೂಗಲ್ ಫಾರಂ ತುಂಬಿಸಿ, ಈ ಕೇಳ ಕಂಡ ಈ ಕೆಳಕಂಡ ಬ್ಯಾಂಕ್ ಅಕೌಂಟ್ ನಂ ಗೆ ಕಳಿಸಿ ಉಚಿತ ಅಂಚೆಯಲ್ಲಿ ನಿಮಗೆ ತಲುಪಿಸುತ್ತೇವೆ(ಈ ಸೌಲಭ್ಯ ಭಾರತದಲ್ಲಿ) ಮಾತ್ರ.
ವಿದೇಶದಲ್ಲಿ ಇದ್ದರೆ ನಿಮ್ಮ ಹೆಸರು ಮತ್ತು ವಿಳಾಸವನ್ನು ಗೂಗಲ್ ಫಾರಂ ನಲ್ಲಿ ತುಂಬಿ, ಪತ್ರ ಬರೆದು ಅದನ್ನು ಕೇಳಿ ಕಥೆಯ ತಂಡಕ್ಕೆ ಕಳುಹಿಸಿದರೆ ಮುಂದಿನ ವಿವರವನ್ನು ಪಡೆಯಬಹುದು.
ಆನ್ಲೈನಲ್ಲಿ ಖರೀದಿಸಬಹುದಾ?
ಹೌದು. ಆಗಸ್ಟ್ ಕೊನೆಯ ವಾರದಿಂದ ಇದನ್ನು ಫ್ಲಿಪ್ಕಾರ್ಟ್,ಅಮೆಜಾನ್, ಸಪ್ನಾ ಆನ್ಲೈನಲ್ಲಿ ಖರೀದಿಸಬಹುದು.

'ಕೇಳಿ ಕಥೆಯ' ತಂಡ:
ಮುಕುಂದ್ ಸೆಟ್ಲೂರ್, ಕಿರಣ್ ಮಂಜುನಾಥ್, ನಿತೇಶ್ ಕುಂತಾಡಿ, ಸತೀಶ್ ಗೌಡ, ರೂಪ ಲಕ್ಷ್ಮೀ, ಹರೀಶ್ ಮಲ್ಯ, ಪ್ರಮೋದ್ ಪಟಗಾರ್, ಮಾನಸ ಭಾರದ್ವಾಜ್ ನೇತೃತ್ವದ ಸಮಾನ ಮನಸ್ಕ ಉದ್ಯೋಗಿಗಳ ತಂಡ ಈ ಆಡಿಯೋ ಪುಸ್ತಕವನ್ನು ನಿರ್ಮಾಣಮಾಡಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:kelikatheya.com












Click it and Unblock the Notifications