ಕೆಇಎ ವಿರುದ್ಧ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪ್ರತಿಭಟನೆ
ಬೆಂಗಳೂರು ಆಗಸ್ಟ್ 30: ಪ್ರಸಕ್ತ ವರ್ಷದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶದಲ್ಲಿ ಕೇವಲ ಕೆಸಿಇಟಿ ಪರೀಕ್ಷೆಯ ಅಂಕವನ್ನು ಮಾತ್ರ ಪರಿಗಣಿಸುವ ಮೂಲಕ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಕೆಸಿಇಟಿ ರಿಪೀಟರ್ ವಿದ್ಯಾರ್ಥಿಗಳು ಸೋಮವಾರವು ಪ್ರತಿಭಟನೆ ನಡೆಸಿದರು.
ಈ ಕುರಿತು ಶನಿವಾರವು ರಿಪಿಟರ್ಸ್ ವಿದ್ಯಾರ್ಥಿಗಳು ಮತ್ತವರ ಪೋಷಕರು ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿ ಮುಂದೆ ಪ್ರತಿಭಟಿಸಿ ಅಳಲು ತೋಡಿಕೊಂಡಿದ್ದರು. ಅವರ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದಿದೆ.
ಪ್ರತಿ ವರ್ಷ ಸಿಇಟಿ ಅಂಕಗಳಗಳ ಜತೆಗೆ ಪಿ.ಯು.ಸಿ ಅಂಕಗಳನ್ನು ಸೇರಿದಂತೆ ಫಲಿತಾಂಶ ಪ್ರಕಟ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್ ಹಿನ್ನೆಲೆ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ. ಆಗ ಅನಿವಾರ್ಯ ಕಾರಣಗಳಿಂದ ಕೆಸಿಇಟಿ ಪರೀಕ್ಷೆ ಗಳ ಅಂಕವನ್ನು ಮಾತ್ರ ಪರಿಗಣಿಸಲಾಗಿತ್ತು. ಆಗ ಪರೀಕ್ಷೆ ಬರೆದು ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ವರ್ಷ ರಿಪಿಟರ್ಸ್ ಆಗಿದ್ದಾರೆ.
ಈಗ ಆ ರಿಪಿಟರ್ಸ್ ವಿದ್ಯಾರ್ಥಿಗಳು ಈ ವರ್ಷ ಕೆಸಿಇಟಿ ಪರೀಕ್ಷೆ ಬರೆದು ಪಾಸಾದರೂ ಸಹ ಅವರ ಪಿಯುಸಿ ಅಂಕ ಪರಿಗಣಿಸದೇ ಕೇವಲ ಸಿಇಟಿ ಅಂಕ ಪರಿಗಣಿಸಿ (ಕಳೆದ ವರ್ಷದ ನಿಯಮದಂತೆ) ಫಲಿತಾಂಶ ಪ್ರಕಟಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅನ್ಯಾಯ ಮಾಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಇಎ ನಿರ್ಧಾರದಿಂದ ರ್ಯಾಂಕಿಂಗ್ ಸಮಸ್ಯೆ
ರಿಪಿಟರ್ಸ್ ವಿದ್ಯಾರ್ಥಿಗಳ ಹೊರತು ಉಳಿದ ವಿದ್ಯಾರ್ಥಿಗಳಿಗೆ ಪಿಯುಸಿ ಜತೆಗೆ ಕೆಸಿಇಟಿ ಅಂಕಗಳನ್ನು ಸೇರಿಸಿ ಕೆಸಿಇಟಿ ಫಲಿತಾಂಶ ನೀಡಿದ ಕೆಇಎ. ರಿಪಿಟರ್ಸ್ಗಳಿಗೆ ಅನ್ಯಾಯ ಮಾಡುತ್ತಿದೆ. ಕೆಇಎ ನಿರ್ಧಾರದಿಂದಾಗಿ ಕಳೆದ ವರ್ಷ 90 ಅಂಕ ಪಡೆದವರಿಗೆ 15,000 ಒಳಗೆ ರ್ಯಾಂಕಿಂಗ್ ಬಂದಿದ್ದರೆ ಈ ವರ್ಷ 98 ಅಂಕ ಪಡೆದಿದ್ರೂ ಸಹ ಒಂದುಲ ಕ್ಷದ ಮೇಲೆ ರ್ಯಾಂಕಿಂಗ್ ದೊರೆಯುವ ಮೂಲಕ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ವಿವರಿಸಿದರು.

ರಾಜ್ಯ ಪರೀಕ್ಷಾ ಪ್ರಾಧಿಕಾರ ಹೇಳಿದ್ದೇನು?
ಕಳೆದ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳ ರ್ಯಾಂಕಿಂಗ್ ಅನ್ನು ಕೇವಲ ಸಿಇಟಿ ಪರೀಕ್ಷೆಯ ಅಂಕಗಳನ್ನು ಆಧಾರಿಸಿಯೇ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಶನಿವಾರ ಹೇಳಿದ್ದರು.

ಕಳೆದ ವರ್ಷದ ನಿಯಮ ಈಗಲೂ ಅನ್ವಯ
ಸಾಮಾನ್ಯವಾಗಿ ಕೆಇಎನಲ್ಲಿ ಸಿಇಟಿ ಮತ್ತು ದ್ವಿತೀಯ ಪಿಯುಸಿ- ಎರಡೂ ಪರೀಕ್ಷೆಗಳ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡೇ ರ್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಅದೇ ರೀತಿ ಮಾಡಲಾಗಿದೆ. ಆದರೆ, ಕಳೆದ ಬಾರಿ ಕೋವಿಡ್ ಇದ್ದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೇವಲ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧಾರಿಸಿಯೇ ರ್ಯಾಂಕಿಂಗ್ ನೀಡಲಾಗಿತ್ತು. ಆ ವರ್ಷದ ವಿದ್ಯಾರ್ಥಿಗಳಿಗೆ ಅದೇ ನಿಯಮ ಈ ವರ್ಷವು ಅನ್ವಯ ಆಗಲಿದೆ ಎಂದು ರಮ್ಯಾ ತಿಳಿಸಿದ್ದಾರೆ.

ಕೆಸಿಇಟಿ ರ್ಯಾಂಕ್ ಪಡೆದವರಿಗೆ ಅನ್ಯಾಯ ಆಗಲಿದೆ
ಕಳೆದ ವರ್ಷದವರೇ ಸುಮಾರು 24 ಸಾವಿರ ಮಂದಿ ಈ ಬಾರಿ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅವರು ಪಿಯುಸಿ ಅಂಕ ಪರಿಗಣಿಸಿ ಸಿಇಟಿ ರ್ಯಾಂಕ್ಕಿಂಗ್ ನೀಡಿ ಎಂದು ಕೋರಿದ್ದಾರೆ. ಆದರೆ ಅವರ ಮನವಿ ಸ್ವೀಕರಿಸಿದರೆ ಕಳೆದ ಬಾರಿ ಕೇವಲ ಸಿಇಟಿ ಪರೀಕ್ಷೆ ಮೇಲೆ ರ್ಯಾಂಕಿಂಗ್ ಪಡೆದು ಈಗ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಮನವಿ ಪರಿಗಣಿಸಿಲ್ಲ ಎಂದು ರಮ್ಯಾ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications