Prpoerty Registration: ಕಾವೇರಿ 2.0 ತಂತ್ರಾಂಶ ಸಮಸ್ಯೆಗೆ ಮುಕ್ತಿ, ಆಸ್ತಿ ನೋಂದಣಿ ಪುನಾರಂಭ
ಬೆಂಗಳೂರು, ಫೆಬ್ರವರಿ 07: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂದಾಯ ಇಲಾಖೆ ನೋಂದಣಿ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿ ದಸ್ತಾವೇಜುಗಳು, ನೋಂದಣಿ ಆಗುತ್ತಿರಲಿಲ್ಲ. ತಂತ್ರಾಂಶದಲ್ಲಿ ಸಮಸ್ಯೆ ಆಗಿತ್ತು. ಈ ಸಮಸ್ಯೆ ಮೂರು ತಿಂಗಳಿಂದ ಆಗಿತ್ತು, ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪ ಬೆನ್ನಲ್ಲೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕಾವೇರಿ 2.0 ತಂತ್ರಾಂಶ ಎಂದಿನಂತೆ ಗುರುವಾರದಿಂದ (ಫೆಬ್ರವರಿ 06) ಕಾರ್ಯಾರಂಭಗೊಂಡಿದೆ ಎಂದು ತಿಳಿಸಿದೆ.
ಕರ್ನಾಟಕ ಸರ್ಕಾರವು ನೀಡಿದ ಮಾಹಿತಿ ಪ್ರಕಾರ, ಗುರುವಾರ ತಂತ್ರಾಂಶವು ಎಂದಿನಂತೆ ವರ್ಕ್ ಆಗುತ್ತಿದೆ. ಮೊದಲ ದಿನವೇ ಸುಮಾರು 9525 ನೋಂದಣಿ ಮಾಡಿಕೊಳ್ಳಲಾಗಿದೆ. ಇದರಿಂದ ಇಲಾಖೆಗೆ ಕೋಟಿ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

ಸಾರ್ವಜನಿಕರು ಆಸ್ತಿ ದಸ್ತಾವೇಜುಗಳನ್ನು ದಾಖಲಾತಿ, ಹೊಸ ನೋಂದಣಿ, ಇಸಿ-ಸಿಸಿ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಕೆಲವು ವಾರಗಳ ಕಾಲ ತಂತ್ರಾಂಶದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಜನರಿಗೆ ನಿರಾಸೆಯಾಗಿತ್ತು. ನೆನ್ನೆ ದಿಢೀರ್ ಸೇವೆ ಆರಂಭವಾಗುತ್ತಿದ್ದಂತೆ ನೋಂದಣಿ ಕಚೇರಿಗಳಲ್ಲಿ ಜನದಟ್ಟಣೆ ಕಂಡು ಬಂತು. ಆದರೂ ಯಾವುದೇ ಸಮಸ್ಯೆ ಆಗದೇ ಸಮರ್ಪಕ ಸೇವೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಕಂದಾಯ ಇಲಾಖೆಗೆ ಹೆಚ್ಚಿನ ಸಂಖ್ಯೆ ಜನರು ಆಗಮಿಸಿದ್ದರಿಂದ ದಟ್ಟಣೆ ಕಂಡು ಬಂತಾದರೂ 9525 ನೋಂದಣಿ ಮೂಲಕ ಇಲಾಖೆಗೆ 66 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನೂ 17000ಕ್ಕೂ ಹೆಚ್ಚು ಋಣಭಾರ ಪತ್ರ ನೀಡಲಾಗಿದೆ. ಕಳೆದ ಒಂದು ವಾರದಿಂದ ಡಿಡಿಒಎಸ್ ದಾಳಿಯ ಸಮಸ್ಯೆಯಿಂದ ತೊಂದರೆ ಆಗಿತ್ತು.
ಕಂದಾಯ ಇಲಾಖೆಗಳ ವಿತರಣೆ ಅಧಿಕಾರಿ, ಸಿಬ್ಬಂದಿಗೆ ಈ ಕಾವೇರಿ 2.0 ತಂತ್ರಾಂಶದಲ್ಲಿ ಲಾಗಿನ್ ಆಗಲು ಅಸಾಧ್ಯವಾಗಿತ್ತು. ಇದರಿಂದ ಆನ್ಲೈನ್ ಸೇವೆಯಲ್ಲಿ ಕೆಲವು ವಾರಗಳ ವ್ಯತ್ಯಯವಾಗಿತ್ತು. ಇದರಿಂದ ಜನರು ತೊಂದರೆ ಅನುಭವಿಸಿದ್ದಾರೆ. ಇದೀಗ ಸೈಬರ್ ದಾಳಿ ನಿವಾರಿಸಲಾಗಿದೆ. ಯಾವುದೇ ಸಮಸ್ಯೆಯಿಲ್ಲ. ಮೊದಲಿನಂತೇ ಸಾರ್ವಜನಿಕರು ಕಂದಾಯ ಇಲಾಖೆಯ ಸೇವೆ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 5,000 ಕೋಟಿ ರೂ.ನಷ್ಟ: ಬಿಜೆಪಿ ನಾಯಕ
ಕಾವೇರಿ 2.0ತಂತ್ರಾಂಶದಲ್ಲಿ ಮೂರು ತಿಂಗಳಿನಿಂದ ಸಮಸ್ಯೆಯಾಗಿತ್ತು ಎಂದು ವಿಪಕ್ಷ ನಾಯಕರ ದೂರಿದರು. ಈ ಸಮಸ್ಯೆಯಿಂದಾಗಿ ರಾಜ್ಯ ಕಂದಾಯ ಇಲಾಖೆಗೆ ಅಂದಾಜು 4000 ರಿಂದ 5000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಸರ್ಕಾರಕ್ಕೆ ಸರಿಪಡಿಸಲು ಆಗಿಲ್ಲ ಎಂದು ಬಿಜೆಪಿ ಮುಖ್ಯ ವಕ್ತಾರ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ವಾಗ್ದಾಳಿ ನಡೆಸಿದ್ದರು.
ಸರ್ಕಾರ 'ಇ ಖಾತೆ ಇಲ್ಲದೇ ನೋಂದಣಿ ಇಲ್ಲ' ಎಂಬ ಷರತ್ತು ಹಾಕಿದ್ದರಿಂದ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಆಗಿದೆ. ನಿರೀಕ್ಷಿತ ನೋಂದಣಿ ಆಗಿಲ್ಲ. ಆಸ್ತಿ ನೋಂದಣಿ, ದಸ್ತಾವೇಜು ದಾಖಲಾತಿ ಪಡೆಯಲು ಸಾಕಷ್ಟು ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು.
ಈ ತಂತ್ರಾಂಶ ಸಮಸ್ಯೆಯಿಂದಾಗಿ ಬಿಡಿಎ, ಗೃಹ ನಿರ್ಮಾಣ ಸಹಕಾರ ಸಂಘಗಳು, ಸರ್ಕಾರಿ ಅನುಮೋದಿತ ನಿವೇಶನಗಳ ಸಾವಿರಾರು ನಿವೇಶನದಾರರಿಗೆ ಇ-ಖಾತಾ ಸಿಗದೇ ಅಡಚಣೆ ಉಂಟಾಗಿದೆ. ಸರ್ಕಾರ ನಿರ್ಲಕ್ಷಿಸದೇ ಸಮಸ್ಯೆ ಬಗಹರಿಸುವಂತೆ ಒತ್ತಾಯಿಸಿದ್ದರು. ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರ ಮೇಲೂ ಚಾಟಿ ಬೀಸಿದ್ದರು.
ವಿಪಕ್ಷಗಳ ದೂರು, ಒತ್ತಾಯದ ಇದೀಗ ಸರ್ಕಾರವೇ ತಾಂತ್ರಾಂಶ ಸಮಸ್ಯೆ ನಿವಾರಣೆ ಆಗಿದೆ. ಎಂದಿನಂತೆ ಯಾವುದೇ ತೊಂದರೆ ಆಗದೇ ಇಲಾಖಾ ಕೆಲಸಗಳೂ ನಡೆಯುತ್ತಿವೆ ಎಂಬ ಅಧಿಕೃತ ಮಾಹಿತಿ ನೀಡಿದೆ.












Click it and Unblock the Notifications