ಬನಶಂಕರಿ: ಸರತಿ ಸಾಲು ಬಿಟ್ಟ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಮತ್ತು ಮತದಾರರ ನಡುವೆ ಗಲಾಟೆ
ಬೆಂಗಳೂರು , ಮೇ. 10: ರಾಜ್ಯದಲ್ಲಿ ಚುನಾವಣೆಗೆ ಮತದಾನ ಆರಂಭವಾಗಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಜಕೀಯ ನಾಯಕರು, ಚಲನಚಿತ್ರ ನಟ ನಟಿಯರು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಲು ಸರತಿಯಲ್ಲಿ ನಿಂತು ಮತದಾನ ಮಾಡಿದ್ದಾರೆ. ಅದರೆ, ಕೆಲವೆಡೆ ಅಭ್ಯರ್ಥಿಗಳು ಮತ್ತು ಮತದಾರರ ನಡುವೆ ಸಣ್ಣ ಘರ್ಷಣೆ ನಡೆದಿವೆ.
ಬನಶಂಕರಿ ಎರಡನೇ ಹಂತ ಬೂತ್ ನಂ.145ರ ಬಿಎನ್ಎಮ್ ಶಾಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಮತ್ತು ತಮ್ಮ ಹಕ್ಕು ಚಲಾಯಿಸಲು ಬಂದಿದ್ದ ಮತದಾರರ ನಡುವೆ ಗಲಾಟೆ ನಡೆದಿದೆ. ಮತ ಚಲಾಯಿಸಲು ಬೂತ್ಗೆ ಬಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಸರತಿ ಸಾಲು ಬಿಟ್ಟು ಮುಂದೆ ಹೋಗಿದ್ದಾರೆ.

ಈ ವೇಳೆ ಮತದಾರರು ಮತ್ತು ಎಂ.ಕೃಷ್ಣಪ್ಪ ನಡುವೆ ವಾಗ್ವಾದ ನಡೆದಿದೆ. ತಾವು ಜನಪ್ರತಿನಿಧಿಯಾಗಿ ಜನರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ಹೀಗೆ ತಾವು ಮೊದಲು ಮತದಾನ ಮಾಡಲು ನಿಯಮ ಮೀರಿ ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸರತಿ ಸಾಲಿನಲ್ಲಿ ಕಾಯುತ್ತಿರುವ ನಾವು ಏನು ಮಾಡಬೇಕು ಅಂತ ಜನರು ಅಭ್ಯರ್ಥಿಯ ಮೇಲೆ ಕೆಂಡಕಾರಿದ್ದಾರೆ.
2018ರ ಕಳೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಕೃಷ್ಣಪ್ಪ ಜಯಗಳಿಸಿದ್ದರು. ಇನ್ನು ಇವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಆರ್.ಕೆ. ರಮೇಶ್ 30,417 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿಯು ಮರು ಆಯ್ಕೆ ಬಯಸಿರುವ ಎಂ.ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ನಾಲ್ಕನೇ ಬಾರಿಗೆ ಅವರು ಶಾಸಕರಾಗಲಿದ್ದಾರೆ.












Click it and Unblock the Notifications