ಬೆಂಗಳೂರಿನ ಮತ ಎಣಿಕೆ ಕೇಂದ್ರಗಳ ರಸ್ತೆಗಳಲ್ಲಿ ವಾಹನ ಓಡಾಟ ನಿಷೇಧ: ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಸಲಹೆ
ನಾಳೆ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಂಗಳೂರಿನ ಐದು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಯಾವುದೇ ಗೊಂದಲವಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರಗಳ ರಸ್ತೆಗಳಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ ಮತ ಎಣಿಕೆ ಮುಗಿಯುವವರೆಗೂ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ನಗರದ ಬಸವನಗುಡಿ ಬಿಎಂಎಸ್ ಕಾಲೇಜು, ಜಯನಗರದ ಎಸ್ಎಸ್ಆರ್ ವಿ ಕಾಲೇಜು, ವಿಠಲ್ ಮಲ್ಯ ರಸ್ತೆ ಬಳಿ ಇರುವ ಸೇಂಟ್ ಜೋಸೆಫ್ ಕಾಲೇಜು, ದೇವನಹಳ್ಳಿಯ ಆಕಾಶ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ, ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜು ಕೇಂದ್ರದಲ್ಲಿ ಮತಎಣಿಕೆ ನಡೆಯಲಿದೆ. ಅಲ್ಲದೆ ಮತ ಎಣಿಕೆ ಕೇಂದ್ರದ ಸುತ್ತಮುತ್ತ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ ಎಣಿಕೆ ಕೇಂದ್ರ
ವಿಠಲ್ ಮಲ್ಯ ರಸ್ತೆಯಲ್ಲಿ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ, ಸಿದ್ದಲಿಂಗಯ್ಯ ರಸ್ತೆಯಿಂದ ಆರ್ ಆರ್ ಎಂ ಆರ್ ಕಡೆಗೆ, ಕಸ್ತೂರ್ ಬಾ ರಸ್ತೆಯ ಕ್ವೀನ್ಸ್ ರಸ್ತೆಯಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ವಾಹನ ಓಡಾಟಗಳನ್ನು ನಿಷೇಧಿಸಲಾಗಿದೆ. ಇದರ ಬದಲಾಗಿ ಲ್ಯಾವೆಲ್ಲೆ ರಸ್ತೆ, ಎಂಜಿ ರಸ್ತೆ ಮುಖಾಂತರ ಸಿದ್ದಲಿಂಗಯ್ಯ ರಸ್ತೆಯಿಂದ ಕ್ವೀನ್ಸ್ ರಸ್ತೆಗೆ ಚಲಿಸಲು ಕೋರಲಾಗಿದೆ.
ಆರ್ ಆರ್ ಎಂ ಆರ್ ರಸ್ತೆಯಿಂದ ಕಸ್ತೂರ ಬಾ ರಸ್ತೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ.
ವಸಂತನಗರ ಮೌಂಟ್ ಕಾರ್ಮಲ್ ಕಾಲೇಜು
ಪ್ಯಾಲೆಸ್ ರಸ್ತೆಯ ಕಲ್ಪನಾ ಜಂಕ್ಷನ್ನಿಂದ ವಸಂತನಗರ ಅಂಡರ್ ಪಾಸ್ವರೆಗೆ ಹಾಗೂ ವಸಂತನಗರ ರೈಲ್ವೆ ಕೆಳಸೇತುವೆ ಕಡೆಯಿಂದ ಮೌಂಟ್ ಕಾರ್ಮಲ್ ಕಾಲೇಜುವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಎಂವಿ ಜಯರಾಮ್ ರಸ್ತೆಯನ್ನು ಬಳಸಲು ಕೋರಲಾಗಿದೆ.
ಪ್ಯಾಲೆಸ್ ರಸ್ತೆ ಮತ್ತು ಹಳೇ ಹೈಗ್ರೌಂಡ್ಸ್ ಜಂಕ್ಷನ್ನಿಂದ ಕಲ್ಪನಾ ಜಂಕ್ಷನ್ವರೆಗೆ ಹಾಗೂ ಕಲ್ಪನಾ ಜಂಕ್ಷನ್ನಿಂದ ಚಂದ್ರಿಕಾ ಹೋಟೆಲ್ವರೆಗೆ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಅರಮನೆ ಮೈದಾನದಲ್ಲಿ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ.
ಎಸ್ಎಸ್ಎಂಆರ್ ವಿ ಪಿಯು ಕಾಲೇಜ್, ಜಯನಗರ
ಎಸ್ಎಸ್ಎಂಆರ್ ವಿ ಕಾಲೇಜಿನ ಸಮೀಪದ ರಸ್ತೆಗಳಾದ 36ನೇ ಕ್ರಾಸ್ ರಸ್ತೆ, 22ನೇ ಮುಖ್ಯರಸ್ತೆ, 26ನೇ ಮುಖ್ಯ ರಸ್ತೆ ಮತ್ತು 28ನೇ ಮುಖ್ಯರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಬದಲಾಗಿ ಈಸ್ಟ್ ಎಂಡ್ ಮುಖ್ಯರಸ್ತೆ, 32ನೇ ಇ ಕ್ರಾಸ್ ರಸ್ತೆ, 39ನೇ ಕ್ರಾಸ್ ರಸ್ತೆ, 28ನೇ ಮುಖ್ಯರಸ್ತೆಗಳನ್ನು ಬಳಸಬಹುದಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತಮುತ್ತ ವಾಹನ ಸಂಚಾರ ನಿಷೇಧಿಸಲಾಗಿದ್ದು, ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಆರ್.ವಿ. ಕಾಲೇಜು ಮೈದಾನಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಬಿಎಂಎಸ್ ಮಹಿಳಾ ಕಾಲೇಜು ಬಸವನಗುಡಿ
ಹಯವದನ ಕ್ರಾಸ್ನಿಂದ ಕಾಮತ್ ಹೋಟೆಲ್ವರೆಗೆ, ಬುಲ್ ಟೆಂಪಲ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಮಕೃಷ್ಣ ಆಶ್ರಮ ಜಂಕ್ಷನ್ನಿಂದ ಹಳ್ಳಿತಿಂಡಿ ಕಡೆ ಸಂಚರಿಸುವ ವಾಹನಗಳು ಹಯವದನರಾವ್ ರಸ್ತೆಯ ಮುಖಾಂತರ ಹನುಮಂತನಗರದ ಕಡೆಗೆ ಸಂಚರಿಸಲು ಕೋರಲಾಗಿದೆ.
ಬಸವನಗುಡಿ ರಸ್ತೆ, ಡಿವಿಜಿ ರಸ್ತೆ, ಬ್ಯೂಗಲ್ ರಾಕ್ ರಸ್ತೆ, ರಾಮಕೃಷ್ಣ ಆಶ್ರಮ ಜಂಕ್ಷನ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಬದಲಾಗಿ, ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಹಾಗು ಉದಯಭಾನು ಆಟದ ಮೈದಾನ, ಕೊಹಿನೂರು ಆಟದ ಮೈದಾನದಲ್ಲಿ ಹಯವದನ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿರುತ್ತದೆ.
ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ
ದೇವನಹಳ್ಳಿ ಬೈಪಾಸ್ನಿಂದ ದೇವನಹಳ್ಳಿ ಹೊಸ ಬಸ್ ನಿಲ್ದಾಣದ ನಡುವೆ, ಹೊಸ ಬಸ್ ನಿಲ್ದಾಣದ ಬೈಪಾಸ್ವರೆಗೆ ಹಾಗೂ ದೇವನಹಳ್ಳಿ ಗಿರಿಯಮ್ಮ ಸರ್ಕಲ್ನಿಂದ ಬೈಚಾಪುರ ಗ್ರಾಮದವರೆಗೆ ಸಂಚಾರ ನಿಷೇಧಿಸಲಾಗಿದೆ.
ಮತೆಣಿಕೆ ಕೇಂದ್ರದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಟಿಪ್ಪು ಸರ್ಕಲ್ನಿಂದ ಆಸ್ಪತ್ರೆವರೆಗೆ ರಸ್ತೆಯ ಎಡಭಾಗ ಲೇ ಔಟ್, ಬೈಚಾಪುರ ರಸ್ತೆ ಎಡಭಾಗದ ಲೇಔಟ್, ಬೈಪಾಸ್ ಜಂಕ್ಷನ್, ದೇವನಹಳ್ಳಿ ಕೋಟೆ ಕ್ರಾಸ್ ಜಂಕ್ಷನ್ಗಳಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ.












Click it and Unblock the Notifications