ಬೆಂಗಳೂರಲ್ಲಿ ಕೊರೊನಾ ಆತಂಕ; ಲಸಿಕೆ ವಿತರಣೆ ಚುರುಕುಗೊಳಿಸಲು ಚಿಂತನೆ
ಬೆಂಗಳೂರು, ಮಾರ್ಚ್ 23: ಕರ್ನಾಟಕದ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1400 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 14,000ಕ್ಕೆ ಏರಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ಬೆಂಗಳೂರು ನಗರವೊಂದರಿಂದಲೇ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ 886 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಪ್ರಕರಣಗಳಲ್ಲಿ ಅರ್ಧ ಪಾಲು ಬೆಂಗಳೂರಿನದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂದೆ ಓದಿ...
Breaking News: 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ
ಮೂರು ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆ?
ಏಕಾಏಕಿ ಕೊರೊನಾ ಪ್ರಕರಣಗಳು ಏರಿಕೆಯಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೊರೊನಾ ಲಸಿಕೆ ವಿತರಣೆ ವೇಗವನ್ನೂ ಹೆಚ್ಚಿಸುವ ಕುರಿತು ಚಿಂತನೆ ನಡೆಸಿದೆ. ಕೊರೊನಾ ವಿರುದ್ಧ ಹೋರಾಡಲು ಬೆಂಗಳೂರಿನಲ್ಲಿ ಹೊಸ ಮೂರು ಕೋವಿಡ್ ಕೇಂದ್ರಗಳನ್ನು ತೆರೆಯುವ ಕುರಿತು ಆಲೋಚಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ 6% ಲಸಿಕೆಗಳು ವ್ಯರ್ಥ
ಈಚೆಗಷ್ಟೆ ಅಪಾರ್ಟ್ಮೆಂಟ್ ಹಾಗೂ ವೃದ್ಧಾಶ್ರಮಗಳಲ್ಲಿ ಲಸಿಕಾ ಪ್ರಕ್ರಿಯೆ ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಕೇಳಿತ್ತು. ಆದರೆ ಲಸಿಕಾ ಮಾರ್ಗಸೂಚಿ ಕಾರಣ ಕೇಂದ್ರ ಅನುಮತಿಯನ್ನು ನಿರಾಕರಿಸಿತ್ತು. ಕೊರೊನಾ ಲಸಿಕೆಗಳು ವ್ಯರ್ಥವಾಗಿರುವುದು ಗಮನಕ್ಕೆ ಬಂದ ಕಾರಣ ಕೇವಲ ಅರ್ಹ ಅಭ್ಯರ್ಥಿಗಳಿಗೆ ಲಸಿಕೆ ನೀಡುವಂತೆ ರಾಜ್ಯ ಸರ್ಕಾರ ಖಾಸಗಿ ಕೇಂದ್ರಗಳಿಗೆ ಸೂಚಿಸಿದೆ. ಇದುವರೆಗೂ ರಾಜ್ಯದಲ್ಲಿ 6% ಲಸಿಕೆಗಳು ವ್ಯರ್ಥವಾಗಿವೆ.
"1% ಲಸಿಕೆ ಕೂಡ ವ್ಯರ್ಥವಾಗಬಾರದು"
ಲಸಿಕೆ ವ್ಯರ್ಥವಾಗಿರುವ ಪ್ರಮಾಣ ತುಂಬಾ ಕಡಿಮೆಯಿದೆ. ಹೀಗಿದ್ದೂ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಲಸಿಕೆ ನೀಡುವಂತೆ ನಾವು ಖಾಸಗಿ ಕೇಂದ್ರಗಳಿಗೆ ಕೇಳಿಕೊಂಡಿದ್ದೆವು ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಈ ಅಭಿಯಾನದಡಿ ಅನರ್ಹ ಅಭ್ಯರ್ಥಿಗಳು ಕೂಡ ಲಸಿಕೆ ಪಡೆಯುತ್ತಿರುವುದು ತಿಳಿದುಬಂದಿದೆ. ಹೀಗಾಗಿಯೇ ಲಸಿಕೆ ವ್ಯರ್ಥವಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಾವು ಲಸಿಕೆ ವ್ಯರ್ಥ ಮಾಡಿರುವ ಪ್ರಮಾಣ ಕಡಿಮೆಯಿದೆ. ಆದರೆ ನಮ್ಮ ಪ್ರಧಾನಿಯವರು ಹೇಳಿದಂತೆ 1% ಲಸಿಕೆ ಕೂಡ ವ್ಯರ್ಥ ಮಾಡಲು ನಾವು ಬಿಡಬಾರದು ಎಂದಿದ್ದಾರೆ.
"ಲಸಿಕೆ ವಿತರಣೆಯಲ್ಲಿ ತೊಂದರೆಯಿಲ್ಲ"
ಕರ್ನಾಟಕದಲ್ಲಿ ಸದ್ಯಕ್ಕೆ ಕೊರೊನಾ ವೈರಸ್ ಲಸಿಕೆಯು ನಾಲ್ಕು ದಿನಗಳ ಮಟ್ಟಿಗೆ ಸಾಕಾಗುತ್ತದೆ. ಆದರೆ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ನಾವು ಕೊರೊನಾವೈರಸ್ ಲಸಿಕೆ ಕಳುಹಿಸುವಂತೆ ಕೇಂದ್ರ ಸರ್ಕಾರದ ಬಳಿ ಮಾತನಾಡಿದ್ದೇವೆ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದಿಂದ ಲಸಿಕೆ ಸರಬರಾಜು ಮಾಡುವ ನಿರೀಕ್ಷೆಯಿದೆ. ಸಾರ್ವಜನಿಕರು ಯಾವುದೇ ರೀತಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
Recommended Video