ಮಹದಾಯಿ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಮನವಿ ತಿರಸ್ಕರಿಸಿದ ಕರ್ನಾಟಕ
ಬೆಂಗಳೂರು, ಫೆಬ್ರವರಿ 09: ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರವು ತನ್ನ ಕಠಿಣ ನಿಲುವನ್ನು ಮುಂದುವರೆಸಿದೆ. ಮಹದಾಯಿ ನ್ಯಾಯಾಧಿಕರಣದ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಗೋವಾ ಸರ್ಕಾರ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ತಜ್ಞರು ಮತ್ತು ಕಾನೂನು ಪರಿಣತರ ಉನ್ನತ ಸಭೆಯಲ್ಲಿ ಗೋವಾ ಮನವಿಯನ್ನು ಪರಿಶೀಲಿಸಿ ತಿರಸ್ಕರಿಸಲಾಗಿದೆ.
ನ್ಯಾಯಾಧಿಕರಣದ ಅಧಿಕಾರಾವಧಿ ಆಗಸ್ಟ್ 2018 ಕ್ಕೆ ಮುಗಿಯುತ್ತಿದ್ದು ಅದರ ಅವಧಿ ವಿಸ್ತರಿಸಲು ಗೋವಾ ಸರ್ಕಾರ ಮನವಿ ಮಾಡಿತ್ತು. ಆದರೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮಹದಾಯಿ ವಿವಾದ ತ್ವರಿತವಾಗಿ ಇತ್ಯರ್ಥವಾಗಲೆಂದು ಕರ್ನಾಟಕವು ನ್ಯಾಯಾಧಿಕಾರದ ಅವಧಿ ವಿಸ್ತರಣೆ ಮನವಿಯನ್ನು ತಿರಸ್ಕರಿಸಿದೆ.
ಮಹದಾಯಿ ನ್ಯಾಯಾಧಿಕರಣವು 2010ರಲ್ಲಿ ಅಸ್ಥಿತ್ವಕ್ಕೆ ಬಂತು. ನ್ಯಾಯಾಧಿಕರಣದ ಅಧಿಕಾರವಧಿಯನ್ನು ಎರಡು ಬಾರಿ ಮಾತ್ರ ಏರಿಸಲು ಅವಕಾಶವಿದ್ದು, ಈಗಾಗಲೇ ಎರಡು ಬಾರಿ ಅಧಿಕಾರಾವಧಿ ವಿಸ್ತರಣೆ ಆಗಿದೆ. ಮತ್ತೊಮ್ಮೆ ಅಧಿಕಾರಾವಧಿ ವಿಸ್ತರಣೆ ಮಾಡಲು ಕಾನೂನು ತಿದ್ದುಪಡಿಯ ಅವಶ್ಯಕತೆ ಇದೆ.
ವಿವಾದ ಬಗೆಹರಿಸುವಲ್ಲಿ ವಿಳಂಬವಾದರೆ ಅದು ಕುಡಿಯುವ ನೀರು ಯೋಜನೆಗಳಿಗೆ ಹಿನ್ನಡೆಯಾಗುತ್ತದೆ ಎಂಬ ವಾದ ಮಂಡಿಸಿರುವ ಕರ್ನಾಟಕವು ಮತ್ತೊಮ್ಮೆ ನ್ಯಾಯಾಧಿಕರಣದ ಅಧಿಕಾರವಧಿ ವಿಸ್ತರಣೆಗೆ ನಕಾರ ಹೇಳಿದೆ.