ಏಕ ಬಳಕೆಯ ಪ್ಲಾಸ್ಟಿಕ್ಗೆ ಮತ್ತೆ ನಿಷೇಧ: ಉಲ್ಲಂಘಿಸಿದರೆ ವ್ಯಾಪಾರಿಗಳಿಗೆ ಬೀಳಲಿದೆ ಭಾರಿ ದಂಡ
ಬೆಂಗಳೂರು, ಜುಲೈ 1: ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಆದೇಶಕ್ಕೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ಜುಲೈ1ರಿಂದ ನಿಷೇಧ ಜಾರಿಗೊಳಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
Recommended Video
ಕೆಎಸ್ಪಿಸಿಬಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಗರಿಕ ಸಂಸ್ಥೆಗಳು ನಿಷೇಧವನ್ನು ಜಾರಿಗೊಳಿಸುತ್ತವೆ. ನಾವು ಮೇಲ್ವಿಚಾರಣೆ ಮಾಡುತ್ತೇವೆ. ಜುಲೈ1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದೆ.
ಮಂಡಳಿ ಅಧ್ಯಕ್ಷ ಡಾ.ಶಾಂತ್ ಎ. ತಿಮ್ಮಯ್ಯ ಮಾತನಾಡಿ, "ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಪ್ಲಾಸ್ಟಿಕ್ನಿಂದಾಗಿ ಪ್ರವಾಹ ಮತ್ತು ಇತರ ಪರಿಸರ ತೊಡಕುಗಳು ಸಂಭವಿಸುತ್ತವೆ. ಈಗಾಗಲೇ ಉತ್ಪಾದನಾ ಘಟಕಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾರ್ಗಸೂಚಿಗಳನ್ನು ರೂಪಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರ್ಷಲ್ಗಳೊಂದಿಗೆ ಸಭೆ ನಡೆಸಿದ್ದೇವೆ. ಅವರು ದಿಢೀರ್ ದಾಳಿ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಮೈಸೂರು ರಾಜಮನೆತನದವರಾದ ಯದುವೀರ್ ಒಡೆಯರ್ ಮಂಡಳಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರಿಂದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನಕ್ಕೆ ಬೆಂಬಲ ಸಿಗುವ ಭರಸವೆ ಇದೆ ಎಂದು ಶಾಂತ್ ತಿಮ್ಮಯ್ಯ ತಿಳಿಸಿದ್ದಾರೆ.

ಪ್ಲಾಸ್ಟಿಕ್ ನಿಷೇಧ ಮಾಡಿದ ಮೊದಲ ರಾಜ್ಯ
ಮಾರ್ಚ್ 2016 ರಲ್ಲಿ ಕರ್ನಾಟಕವು ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿತು. ಪ್ಲಾಸ್ಟಿಕ್ ನಿಷೇಧಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ.
ಜುಲೈ 1, 2022 ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುವುದು ಎಂದು ಆಗಸ್ಟ್ 12, 2021 ರಂದು ಪರಿಸರ ಸಚಿವಾಲಯ ಹೇಳಿತ್ತು. ಫೆಬ್ರವರಿಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಎಲ್ಲಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಚಿವಾಲಯದ ನಿಲುವನ್ನು ತಿಳಿಸಿತು. ಜೂನ್ 22 ರಂದು, ಹಣಕಾಸು ಸಚಿವಾಲಯವು ಕಸ್ಟಮ್ಸ್ ಇಲಾಖೆಯ ಎಲ್ಲಾ ಮುಖ್ಯ ಕಮಿಷನರ್ಗಳಿಗೆ ತಮ್ಮ ಅಧಿಕಾರಿಗಳಿಗೆ ನಿಷೇಧದ ಬಗ್ಗೆ ಅರಿವು ಮೂಡಿಸಲು ಸೂಚಿಸಿತು.

2016 ರಿಂದಲೇ ನಿಷೇಧ, ಈಗ ಕಟ್ಟುನಿಟ್ಟಾಗಿ ಜಾರಿ
ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, "ಮಾರ್ಷಲ್ಗಳು ಈಗಾಗಲೇ 2016 ರ ರಾಜ್ಯ ಸರ್ಕಾರದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧವನ್ನು ಜಾರಿಗೊಳಿಸುತ್ತಿದ್ದಾರೆ. ಇದು ಮುಂದುವರಿಯುತ್ತದೆ. ನಾವು ಮುಖ್ಯವಾಗಿ ಉತ್ಪಾದನಾ ಘಟಕಗಳ ಮೇಲೆ ನಿಕಟ ನಿಗಾ ಇಡುತ್ತೇವೆ" ಎಂದು ತಿಳಿಸಿದ್ದಾರೆ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯೊಬ್ಬರು ಮಾತನಾಡಿ, "ಕರ್ನಾಟಕದಲ್ಲಿ 2016 ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧವು ಜಾರಿಯಲ್ಲಿದೆ. ಇದು ದಿಢೀರ್ ನಿಷೇಧ ಅಲ್ಲ. ಇದೀಗ ಕೇಂದ್ರ ಸಚಿವಾಲಯವು ಎಲ್ಲಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿಷೇಧವನ್ನು ಜಾರಿಗೊಳಿಸುವಂತೆ ಸೂಚಿಸಿದೆ. ಹಾಗಾಗಿ ಉತ್ಪಾದನಾ ಘಟಕಗಳ ಮೇಲೆ ತೀವ್ರ ನಿಗಾ ಇಡಲಾಗುವುದು. ಹಂತ ಹಂತವಾಗಿ ನಿಷೇಧ ಹೇರಲಾಗುವುದು" ಎಂದು ಹೇಳಿದರು.

ಯಾವ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ
ಪ್ಲಾಸ್ಟಿಕ್ ಕಡ್ಡಿಗಳೊಂದಿಗೆ ಇಯರ್ಬಡ್ಗಳು, ಬಲೂನ್ಗಳಿಗೆ ಪ್ಲಾಸ್ಟಿಕ್ ಸ್ಟಿಕ್ಗಳು, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್ಗಳು, ಐಸ್ಕ್ರೀಮ್ ಸ್ಟಿಕ್ಗಳು, ಅಲಂಕಾರಕ್ಕಾಗಿ ಥರ್ಮಾಕೋಲ್, ಪ್ಲೇಟ್ಗಳು, ಪ್ಲಾಸ್ಟಿಕ್ ಕಪ್ಗಳು, ಗ್ಲಾಸ್ಗಳು, ಫೋರ್ಕ್, ಚಮಚ, ಚಾಕು, ಟ್ರೇಗಳು, ಪ್ಯಾಕೇಜಿಂಗ್ ಫಿಲ್ಮ್, ಬಾಕ್ಸ್, ಆಮಂತ್ರಣ ಪತ್ರ, ಸಿಗರೇಟ್ ಪ್ಯಾಕೆಟ್, 100 ಮೈಕ್ರಾನ್ಗಿಂತ ತೆಳುವಾದ ಪ್ಲಾಸ್ಟಿಕ್ ಅಥವಾ ಪಿವಿಎಸ್ ಬ್ಯಾನರ್ಗಳ ಬಳಕೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸದ್ಯಕ್ಕೆ ಕಾಂಪೋಸ್ಟೇಬಲ್ ಕಸ ವಿಲೇವಾರಿ ಚೀಲಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
"ಥರ್ಮಾಕೋಲ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ ಏಕ-ಬಳಕೆಯ ಪ್ಲಾಸ್ಟಿಕ್ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 1 ನೇ ಜುಲೈ, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ" ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಲ್ಲಿ ತಿಳಿಸಲಾಗಿದೆ.

ನಿಯಮ ಉಲ್ಲಂಘನೆ ಮಾಡಿದರೆ ಬೀಳುತ್ತೆ ದಂಡ
ಘಟಕಗಳಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡಿದವರಿಗೆ ಘಟಕವನ್ನು ಮುಚ್ಚುವ ಜೊತೆಗೆ, ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಅಧಿಕಾರವಿದೆ.
ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ ಬಳಸಿದರೆ, ಮೊದಲ ಬಾರಿ ಉಲ್ಲಂಘನೆಗೆ 5,000 ಎರಡನೇ ಬಾರಿ ಉಲ್ಲಂಘನೆಗೆ 10,000 ಮತ್ತು ಮೂರನೇ ಬಾರಿ ಉಲ್ಲಂಘನೆ ಮಾಡಿದರೆ 20,000 ದಂಡ ಬೀಳಲಿದೆ.
ಚಿಲ್ಲರೆ ವ್ಯಾಪಾರಿಗಳಿಗೂ ಭಾರಿ ದಂಡ ಬೀಳಲಿದೆ. ಮೊದಲ ಬಾರಿ ಉಲ್ಲಂಘನೆಗೆ 2,000 ಎರಡನೇ ಬಾರಿ ಉಲ್ಲಂಘನೆಗೆ 5,000 ಮತ್ತು ಮೂರನೇ ಬಾರಿ ಉಲ್ಲಂಘನೆ ಮಾಡಿದರೆ 10,000 ದಂಡ ಬೀಳಲಿದೆ.
ಬೀದಿ ಬದಿ ವ್ಯಾಪಾರಿಗಳಿ, ಮೊದಲ ಬಾರಿ ಉಲ್ಲಂಘಿಸಿದರೆ 200 ರು., ಎರಡನೇ ಬಾರಿ 500 ರು., ಮೂರನೇ ಬಾರಿ 1,000 ರು,. ದಂಡ ಬೀಳಲಿದೆ. ದಂಡದ ಜೊತೆ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಿಕೊಳ್ಳಲಾಗುತ್ತದೆ.












Click it and Unblock the Notifications