ಕಾಂಗ್ರೆಸ್ಸಿಗೆ ನಿರೀಕ್ಷಿತ ಶಾಕ್, ಪಕ್ಷ ತೊರೆದ ಷರೀಫ್
ಬೆಂಗಳೂರು, ಏ.16: ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಸಿ.ಕೆ ಜಾಫರ್ ಷರೀಫ್ ಅವರು ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊರೆದಿದ್ದಾರೆ. ಇತ್ತೀಚೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಜಾಫರ್ ಅವರು ಉತ್ತರದ ನಿರೀಕ್ಷೆಯಲ್ಲಿದ್ದರು. ಆದರೆ, ಉತ್ತರ ಸಿಗದ ಕಾರಣ, ಕಾಂಗ್ರೆಸ್ ತೊರೆದಿದ್ದು, ಕಾಂಗ್ರೆಸ್ ಬಿಡಲು ಸೋನಿಯಾ ಗಾಂಧಿ ಕಾರಣ ಎಂದಿದ್ದಾರೆ.
ತಮಿಳುನಾಡಿನ ಊಟಿಯಲ್ಲಿ ಕುಳಿತುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 83 ವರ್ಷ ವಯಸ್ಸಿನ ಜಾಫರ್ ಷರೀಫ್ ಅವರು ಸುದೀರ್ಘ ಪತ್ರ ಬರೆದಿದ್ದರು. ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಿಎಂ ಇಬ್ರಾಹಿಂಗೆ ಮನ್ನಣೆ ನೀಡುತ್ತಿದ್ದಾರೆ. ಇಬ್ರಾಹಿಂ ಅಸಲಿಗೆ ಮುಸ್ಲಿಂ ನಾಯಕ ಎಂದು ಕರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮತ ಬ್ಯಾಂಕ್ ಮೇಲೆ ಹೆಚ್ಚಿನ ಅವಲಂಬನೆ ಮಾಡಿಕೊಂಡಿರುವುದು ಮುಂದೆ ದೊಡ್ದಪಾಠ ಕಲಿಸಲಿದೆ. ಅಮಾನತ್ ಬ್ಯಾಂಕ್ ಅವ್ಯವಹಾರ ಬೆಳಕಿಗೆ ಬಂದಿದ್ದರೂ ಯಾರಿಗೂ ಶಿಕ್ಷೆಯಾಗಿಲ್ಲ. ಪಕ್ಷ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಬೇಸರ ತರೆಸಿದೆ. ಸಿಎಂ ಸಿದ್ದರಾಮಯ್ಯ ನನ್ನನ್ನು ಕಡೆಗಣಿಸಿದ್ದಾರೆ ಎಂದು ಜಾಫರ್ ಷರೀಫ್ ಅವರು ಪತ್ರದಲ್ಲಿ ವಿವರಿಸಿದ್ದರು.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಜಾಫರ್ ಷರೀಫ್ ಮೆಕ್ಕಾ ಯಾತ್ರೆ ತೆರಳಿದ್ದರು. ಜಾಫರ್ ಷರೀಫ್ ಅವರು ಮಾ.25ರಂದು ಅಲ್ಲಿಂದಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಷರೀಫ್ ಅವರ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ. ಮೆಕ್ಕಾ ಯಾತ್ರೆ ನಂತರ ತಮಿಳುನಾಡಿನ ಊಟಿಗೆ ಬಂದಿರುವ ಷರೀಫ್ ಅವರು ಅಲ್ಲಿಂದಲೇ ಸೋನಿಯಾ ಅವರಿಗೆ ಪತ್ರ ಬರೆದಿದ್ದರು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಜಾಫರ್ ಷರೀಫ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಮೈಸೂರಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಯಾವುದೇ ಪಕ್ಷ ಸೇರದ ತಟಸ್ಥರಾಗಿ ಉಳಿದಿದ್ದರು.
ಕಾಂಗ್ರೆಸ್ ಪಕ್ಷದೊಂದಿಗೆ ಜಾಫರ್ ಷರೀಫ್ ಅವರದ್ದು ದಶಕಗಳ ಸಂಬಂಧ ಹೊಂದಿದ್ದರು. ಇಂದಿರಾಗಾಂಧಿ ನಿಕಟವರ್ತಿಯಾಗಿದ್ದ ಷರೀಫ್, ಬೆಂಗಳೂರು ಉತ್ತರದಿಂದ 7 ಬಾರಿ ಹಾಗೂ ಕನಕಪುರ ಕ್ಷೇತ್ರದಿಂದ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 1991-95ರ ವರೆಗೆ ಕೇಂದ್ರ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications