ನಾನು ಯಾರ ಇಲಾಖೆಯಲ್ಲೂ ಮೂಗು ತೂರಿಸಿಲ್ಲ, ಶಾಸಕರ ಆರೋಪ ಸುಳ್ಳು: ರೇವಣ್ಣ ಸ್ಪಷ್ಟನೆ

ಬೆಂಗಳೂರು, ಜುಲೈ 17: 'ಅತೃಪ್ತ ಶಾಸಕರು ಆರೋಪ ಮಾಡಿರುವಂತೆ ನಾನು ಯಾವುದೇ ಶಾಸಕರು ಮತ್ತು ಸಚಿವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ' ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ನನ್ನ ಇಲಾಖೆಯಲ್ಲಿನ ವರ್ಗಾವಣೆ ಬಿಟ್ಟು ಬೇರೆ ಸಚಿವರ ವರ್ಗಾವಣೆಗೆ ಕೈ ಹಾಕಿಲ್ಲ. ಈ ಬಗ್ಗೆ ಯಾವ ಶಾಸಕರೂ ನನ್ನ ಬಳಿ ಬಂದು ಮಾತಾಡಿಲ್ಲ' ಎಂದು ಹೇಳಿದರು.

'ಇಂದು ಅತೃಪ್ತ ಶಾಸಕರ ಬಗ್ಗೆ ಮಾತನಾಡುವುದಿಲ್ಲ. ಇದೆಲ್ಲವೂ ಮುಗಿದುಹೋಗಲಿ. ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ. ಜನರು ನನ್ನನ್ನು ಒಳ್ಳೆಯವನೆಂದರೆ ಸ್ವೀರಲಕಿಸಲಿ, ಕೆಟ್ಟವನೆಂದರೆ ಬಿಸಾಕಲಿ. ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆ ವರ್ಗಾವಣೆಗೆ ಕೈ ಹಾಕಿಲ್ಲ. ಬೇರೆ ಇಲಾಖೆಯಲ್ಲಿ ಮೂಗು ತೂರಿಸಿಲ್ಲ' ಎಂದರು.

'ನನಗೆ ದೈವಾನುಗ್ರಹ ಇರುವುದರಿಂದ ಯಾವ ನಿಂಬೆಹಣ್ಣು ಬೇಕಿಲ್ಲ. ದೇವರ ಆಶೀರ್ವಾದ ಇರುವವರೆಗೂ ಸರ್ಕಾರ ಇರಲಿದೆ. ಇಂದು ನಾನು ಬೆಳೆಯಲು ತಂದೆ ತಾಯಿ, ಕುಲದೇವರು ರಂಗನಾಥ, ಮಹಾಲಕ್ಷ್ಮಿ ತಾಯಿ, ಶೃಂಗೇರಿ ಗುರುಗಳು ಮತ್ತು ಶಾರದಾಂಬೆಯ ಅನುಗ್ರಹ ಕಾರಣ ಎಂದರು.

'ನನ್ನ ಜೀವನದಲ್ಲಿ ಒಂದು ಆಸೆ ಇತ್ತು. ನನ್ನ ತಂದೆ ಎಚ್ ಡಿ ದೇವೇಗೌಡ ಅವರಿಗೆ 1982ರಿಂದಲೂ ಆಪ್ತ ಕಾರ್ಯದರ್ಶಿಯಾಗಿದ್ದ ತಿಪ್ಪೇಸ್ವಾಮಿ ಅವರನ್ನು ಶಾಸಕರನ್ನಾಗಿ ಮಾಡಬೇಕು ಎಂದು. ಅವರು ನಮ್ಮ ಪಕ್ಷ, ಕುಟುಂಬಕ್ಕೆ ತ್ಯಾಗ ಮಾಡಿದ ವ್ಯಕ್ತಿ. ಆ ಆಸೆಯೂ ಮುಗಿದು ಹೋಯಿತು. ಅವರ 47 ವರ್ಷದ ಋಣ ತೀರಿಸುವುದಿತ್ತು' ಎಂದು ತಿಳಿಸಿದರು.

ಅತೃಪ್ತ ಶಾಸಕರು ಮೊದಲೇ ಏಕೆ ಆರೋಪ ಮಾಡಿಲ್ಲ?

ಅತೃಪ್ತ ಶಾಸಕರು ಮೊದಲೇ ಏಕೆ ಆರೋಪ ಮಾಡಿಲ್ಲ?

'ವಸತಿ ಇಲಾಖೆ ಕಾರ್ಯದರ್ಶಿಯನ್ನಾಗಿ ಯಾರನ್ನು ಹಾಕಿದ್ದಾರೋ ಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗೊಲ್ಲ. ಕಾರ್ಯದರ್ಶಿ ನೇಮಕ ಮಾಡೋದು ಯಾರು? ನಾನು ಮಾಡ್ತೀನಾ? ಸಿಎಂ ಕಚೇರಿ ಮಾಡುತ್ತೇನೆ. ಅವರು ಸುಪರಿಂಟೆಂಡ್ ಹಾಕಿಕೊಡಿ ಎಂದರು, ಕೊಟ್ಟೆ' ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

'ಅತೃಪ್ತ ಶಾಸಕರ ಆರೋಪಗಳು ಇದುವರೆಗೆ ಇತ್ತೇ? ಮುಂಬೈಗೆ ಹೋದಮೇಲೆ ಇದನ್ನೆಲ್ಲ ಹೇಳುತ್ತಿದ್ದಾರೆ. ಮೊದಲೇ ಏಕೆ ಈ ಬಗ್ಗೆ ಹೇಳಿರಲಿಲ್ಲ?' ಎಂದು ಪ್ರಶ್ನಿಸಿದರು. 'ಮಾಧ್ಯಮದವರು ನನ್ನನ್ನು ಸೂಪರ್ ಸಿಎಂ ಎನ್ನುತ್ತಾರೆ. ನಿಮ್ಮ ಹಾರೈಕೆಯಂತೆ ಆಗಲಿ ಎಂದಿದ್ದೇನೆ ಅಷ್ಟೆ' ಎಂದರು.

'ಜೀವನದಲ್ಲಿ ಒಂದು ತಪ್ಪು ಮಾಡಿದ್ದರೆ ಆ ತಾಯಿ ನೋಡಿಕೊಂಡು ಶಿಕ್ಷೆ ನೀಡಲಿ. ಅಪಕೃತ ಮಹಾನುಭಾವನೊಬ್ಬನನ್ನು ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದೆ. ಆತನನ್ನು ಆ ಮಹಾಲಕ್ಷ್ಮಿ ತಾಯಿಯೇ ನೋಡಿಕೊಳ್ಳಲಿ' ಎಂದರು. ಅವರು ಯಾರು ಎಂಬುದನ್ನು ಬಹಿರಂಗವಾಗಿ ಹೇಳಲು ನಿರಾಕರಿಸಿದರು. ಅವರ ಬಗ್ಗೆ ಕುಮಾರಸ್ಬಾಮಿ ಇದುವರೆಗೂ ಒಂದೂ ಮಾತಾಡಿಲ್ಲ, ಅದು ಕುಮಾರಸ್ವಾಮಿ ದೊಡ್ಡತನ ಎಂದರು.

ಆರೋಪ ಸಾಬೀತಾದರೆ ನಿವೃತ್ತಿ

ಆರೋಪ ಸಾಬೀತಾದರೆ ನಿವೃತ್ತಿ

ಬೆಂಗಳೂರು ನಗರದಲ್ಲಿ ಕೆಆರ್‌ಡಿಎಲ್‌ಗೆ 4,000 ಕೋಟಿಯ ಕೆಲಸ ಕೊಟ್ಟಿದ್ದೇನೆ ಎಂದು ಆರೋಪಿಸಿದ್ದಾರೆ. ಅದು ನಿಜವೆಂದು ಸಾಬೀತಾದರೆ ರಾಜಕೀಯ ನಿವೃತ್ತಿ ಆಗುತ್ತೇನೆ. ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದು ಆರೋಪ ಮಾಡುತ್ತಿದ್ದಾರೆ. ಏನು ನಡೆದಿದೆ ಎಂದು ಮಹಾಲಕ್ಷ್ಮಿ ತಾಯಿಗೆ ಗೊತ್ತು. ಸಮಯ ಬಂದಾಗ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದರು.

ವಿಶೇಷ ವಿಮಾನ ಯಾಕೆ?

ವಿಶೇಷ ವಿಮಾನ ಯಾಕೆ?

'ಇಂದು ದೇವಸ್ಥಾನಕ್ಕೆ ಬಂದು ಹೇಳುತ್ತಿದ್ದೇನೆ, ನಾನು ಯಾವ ಶಾಸಕರ ಮನಸಿಗೂ ನೋವುಂಟು ಮಾಡಿಲ್ಲ. ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಶಾಸಕ ನಾರಾಯಣ ಗೌಡರ ಬಗ್ಗೆ ಏನೂ ಮಾತಾಡೊಲ್ಲ. ನಮ್ಮ ಕುಟುಂಬದಿಂದ ಅವರಿಗೆ ಅನ್ಯಾಯವಾಗಿದ್ದರೆ, ಅವರಿಗೆ ದೇವರು ನ್ಯಾಯ ನೀಡಲಿ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅನುಕೂಲಗಳನ್ನು ಕೊಡಲಿ' ಎಂದು ವ್ಯಂಗ್ಯವಾಗಿ ಹೇಳಿದರು.

'ಅತೃಪ್ತ ಶಾಸಕರು ವಿಮಾನಗಳನ್ನು ಓಡಾಡುವುದನ್ನು ನೋಡಿದ್ದೀರಿ. ಅವರು ಯಾಕೆ ವಿಶೇಷ ವಿಮಾನದಲ್ಲಿ ಉಚಿತವಾಗಿ ಹೋಗಬೇಕು? ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿ ದುಡ್ಡು ಕೊಟ್ಟು ಟಿಕೆಟ್ ತಗೊಂಡು ಹೋಗಲಿ. ಇದರ ಹಿಂದೆ ಯಾರಿದ್ದಾರೆ ಎಂದು ನಾವು ಹೇಳಬೇಕೆ? ರಾಷ್ಟ್ರಕ್ಕೆ ತತ್ವ ಹೇಳುತ್ತಿದ್ದಾರಲ್ಲ ಅವರು' ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ವರ್ಗಾವಣೆ ಆರೋಪ ಸುಳ್ಳು

ವರ್ಗಾವಣೆ ಆರೋಪ ಸುಳ್ಳು

'ವರ್ಗಾವಣೆ ಮಾಡಿ 500 ಕೋಟಿ ಪಡೆದುಕೊಂಡಿದ್ದೇನೆ ಎನ್ನುವುದು ಸುಳ್ಳು. ನಾನು ಇಂತಹ ಕೆಲಸಗಳಿಗೆ ಕೈಹಾಕಿಲ್ಲ. ನನಗೆ ಈ ವ್ಯಾಮೋಹ ಇಲ್ಲ. ಇಂದಿಗೂ 5 ಸ್ಟಾರ್ ಹೋಟೆಲ್‌ನಲ್ಲಿ ಮಲಗಿಲ್ಲ. ಐಬಿಯಲ್ಲಿಯೂ ಮಲಗುವುದಿಲ್ಲ. ನಾನು ಕೂಡ ಹತ್ತು ವರ್ಷ ಅಧಿಕಾರ ಇಲ್ಲದೆ ಇದ್ದೆನಲ್ಲ. ದೇವೇಗೌಡರು 18 ವರ್ಷ ಅಧಿಕಾರ ಇಲ್ಲದೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿದ್ದರು' ಎಂದು ಹೇಳಿದರು.

ಅತೃಪ್ತರ ವಿಚಾರ ನನಗೆ ಸಂಬಂಧಿಸಿಲ್ಲ

ಅತೃಪ್ತರ ವಿಚಾರ ನನಗೆ ಸಂಬಂಧಿಸಿಲ್ಲ

'ಅತೃಪ್ತ ಶಾಸಕರ ರಾಜೀನಾಮೆ, ಸುಪ್ರೀಂಕೋರ್ಟ್ ತೀರ್ಪು ಮುಂತಾದವುಗಳ ವಿಚಾರ ನನಗೆ ಸಂಬಂಧವಿಲ್ಲ. ಅದು ಸ್ಪೀಕರ್‌ಗೆ ಬಿಟ್ಟ ವಿಚಾರ. ಹಾಗೆಯೇ ಅವರನ್ನು ಸಂಪರ್ಕಿಸಿ ಮನವೊಲಿಸುವ ಹೊಣೆ ಕೂಡ ಮುಖ್ಯಮಂತ್ರಿಗೆ ಬಿಟ್ಟಿದ್ದು. ನನಗೆ ಮಂತ್ರಿ ಕೆಲಸವೇ ಸಾಕಾಗಿದೆ. ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಿಎಂಗೆ ಕೊಟ್ಟಾಗಿದೆ. ಅವರು ಅಂದೇ ರಾಜೀನಾಮೆ ಕೇಳಿದ್ದರು. ಕೊಟ್ಟಿದ್ದೇವೆ. ಅಂಗೀಕಾರ ಮಾಡುವುದು ಅವರಿಗೆ ಬಿಟ್ಟ ವಿಷಯ' ಎಂದರು.

ಸರ್ಕಾರ ಉರುಳಿದರೆ ಹೊಣೆ ಮಾಡೊಲ್ಲ

ಸರ್ಕಾರ ಉರುಳಿದರೆ ಹೊಣೆ ಮಾಡೊಲ್ಲ

'ನಮ್ಮ ಕುಟುಂಬದಲ್ಲಿ ಮನಸ್ತಾಪ ಬರುತ್ತದೆ, ಕುಮಾರಸ್ವಾಮಿ, ರೇವಣ್ಣ ಹೊಡೆದಾಡಿಕೊಳ್ಳುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ಕನಸು. ಅದು ನಾವು ಇರುವವರೆಗೂ ಸಾಧ್ಯವಿಲ್ಲ. ನಮ್ಮ ತಂದೆ ದೇವೇಗೌಡರು, ಸಹೋದರ ಕುಮಾರಸ್ವಾಮಿ ಏನು ಹೇಳುತ್ತಾರೋ ಅದಕ್ಕೆ ನಾನು 'ಎಸ್' ಎನ್ನುತ್ತೇನೆ. ಕುಮಾರಸ್ವಾಮಿ ಅವರನ್ನು ನೋಡಿದಾಗ ಹೊಟ್ಟೆ ಉರಿಯುತ್ತದೆ. ನನ್ನ ತಮ್ಮ ಎಂದು ಹೇಳುತ್ತಿಲ್ಲ. ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಈ ಅಧಿಕಾರವನ್ನು ದೇವರು ಕೊಟ್ಟಿದ್ದಾರೆ. ಬೇಡ ಎನ್ನಲು ಆಗೊಲ್ಲ. ದೇವರ ಆಶೀರ್ವಾದ ಇರುವವರೆಗೂ ನಡೆಯುತ್ತದೆ. ಸರ್ಕಾರ ಇದ್ದರೆ ಬಡವರಿಗೆ ಅನುಕೂಲ ಆಗುತ್ತದೆ. ಸರ್ಕಾರ ಉರುಳಿದರೆ ಯಾರನ್ನೂ ಹೊಣೆ ಮಾಡುವುದಿಲ್ಲ. ದೇವರ ಪ್ರಸಾದ ಇದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+