ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ : ಅಖಾಡಕ್ಕಿಳಿದ ಡಿಕೆಶಿ!
Recommended Video

ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತಂತೆ ಖಡಕ್ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್, 'ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ' ಎಂದಿದ್ದಾರೆ.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಕನಕಪುರ ಶಾಸಕ ಡಿಕೆಶಿ, 'ರಾಜಕೀಯ ಅಂದ್ರೆ ಹಾಗೇನೆ. ಒಂದು ಸ್ಥಾನ ಖಾಲಿಯಾದರೂ ಆ ಸ್ಥಾನಕ್ಕೆ ಬಂದು ಕೂರಲು ಮತ್ತೊಬ್ಬರು ರೆಡಿಯಾಗಿರುತ್ತಾರೆ. ಸರ್ಕಾರ ಬೀಳುವ ಯಾವ ಭಯವೂ ಇಲ್ಲ' ಎಂದಿದ್ದಾರೆ.
'ಇದು ಚೆಸ್ ಆಟವಿದ್ದಂತೆ. ಬಿಜೆಪಿಯವರು ಒಂದೇ ಒಂದು ಪಾನ್ ಜರುಗಿಸಲಿ ನೋಡೋಣ. ಆಮೇಲೆ ಎಂಥ ನಡೆ ನಡೆಸಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ಸಿನ ಆಪದ್ಬಾಂಧವ ಎಂದೇ ಹೆಸರಾದ ಡಿಕೆ ಶಿವಕುಮಾರ್ ಈ ಮೂಲಕ ಅಖಾಡಕ್ಕಿಳಿದಿದ್ದು, ರಾಜ್ಯ ರಾಜಕಾರಣಕ್ಕೆ ಹೊಸ ಹುರುಪು ಬಂದಂತಾಗಿದೆ.

ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುವ ಬಗ್ಗೆ
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಹೇಳಿಕೆಗೆ ಅತ್ಯಂತ ಸಹಜವಾಗಿಯೇ ಪ್ರತಿಕ್ರಿಯೆ ನೀಡಿದ ಡಿಕೆಶಿ, 'ಮುಖ್ಯಮಂತ್ರಿ ಸ್ಥಾನ ಅಪೇಕ್ಷಿಸುವುದರಲ್ಲಿ ತಪ್ಪೇನಿದೆ? ರಾಜಕಾರಣಿ ಆದವರಿಗೆ ಆಸೆಗಳು ಇರಲೇಬೇಕು. ಅದಿದ್ದರೆ ಮಾತ್ರ ಬೆಳೆಯಲು ಸಾಧ್ಯ. ಆಸೆಯೊಂದಿಗೆ ಗುರಿಯೂ ಇರಬೇಕು. ಅದೇ ನಿಜವಾದ ರಾಜಕಾರಣ' ಎಂದರು.

ಆನಂದ್ ಸಿಂಗ್ ಡಿಕೆಶಿ ಮಧ್ಯೆ ವಾರ್?
ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಮುಂತಾದವರು ಡಿ ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರಿಬ್ಬರೂ ನನಗೆ ಆತ್ಮೀಯ ಸ್ನೇಹಿತರು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರನ್ನು ಕಾಂಗ್ರೆಸ್ಸಿಗೆ ತಂದಿದ್ದೇ ನಾನು. ನನ್ನನ್ನು ನಂಬಿ ಪಕ್ಷಕ್ಕೆ ಬಂದವರನ್ನು ನಾನು ಕೈಬಿಡುವುದಿಲ್ಲ. ಅವರ್ಯಾಕೆ ಪಕ್ಷ ತ್ಯಜಿಸುತ್ತಾರೆ? ಇವೆಲ್ಲ ಊಹಾಪೋಹವಷ್ಟೇ ಎಂದಿದ್ದಾರೆ.

ಬೆಳಗಾವಿ ರಾಜಕಾರಣದಲ್ಲಿ ಕೈಯಾಡಿಸಿಲ್ಲ!
ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಾಗಲೀ, ಇನ್ಯಾವುದೇ ಸಂದರ್ಭದಲ್ಲಾಗಲೀ ನಾನು ಹಸ್ತಕ್ಷೇಪ ಮಾಡಿಲ್ಲ. ಆದರೂ ಬೆಳಗಾವಿ ರಾಜಕಾರಣದಲ್ಲಿ ನಾನು ಕೈಯಾಡಿಸಿದ್ದೇನೆ ಎನ್ನಲಾಗುತ್ತಿದೆ. ಸತೀಶ್ ಜಾರಕಿಹೊಳಿ ಹಿರಿಯ ನಾಯಕರು. ಅವರೊಂದಿಗೆ ನಾನು ಆತ್ಮೀಯನಾಗಿದ್ದೇನೆ. ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳಿಗೆಲ್ಲ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನಾನೂ ಅವಕ್ಕೆಲ್ಲ ತೆರಳಿದ್ದೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ' ಎಂದು ಡಿಕೆಶಿ ಹೇಳಿದ್ದಾರೆ.

ಅಖಾಡಕ್ಕಿಳಿದರಾ ಡಿಕೆಶಿ?
ಕಾಂಗ್ರೆಸ್ಸಿನ ಆಪದ್ಬಾಂಧವ ಎಂದೇ ಕರೆಸಿಕೊಂದಿರುವ ಡಿಕೆ ಶಿವಕುಮಾರ್ ಅವರು ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನೆಲ್ಲ ಆಪರೇಷನ್ ಕಮಲದ ಬಲೆಗೆ ಬೀಳದಂತೆ ರಕ್ಷಿಸಿದವರು. ಎಲ್ಲರನ್ನೂ ರೆಸಾರ್ಟ್ ನಲ್ಲಿ ಮುಚ್ಚಟೆಯಿಂದ ಕಾದವರು. ರಾಜ್ಯ ರಾಜಕಾರಣದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಅತ್ಯಂತ ನಾಜೂಕಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಇರುವವರು.' ಕರ್ನಾಟಕ ಸಮ್ಮಿಶ್ರ ಸರ್ಕಾರ ಬೀಳುತ್ತದೆ. ಕಾಂಗ್ರೆಸ್ ನ 14 ಶಾಸಕರು ರಾಜೀನಾಮೆ ನೀಡುತ್ತಾರೆ' ಎಂಬೆಲ್ಲ ವದಂತಿ ಹಬ್ಬಿರುವ ಸಮಯದಲ್ಲಿ ಡಿಕೆಶಿಯವರು ಅಖಾಡಕ್ಕಿಳಿದಿರುವ ಸೂಚನೆ ಕಂಡುಬರುತ್ತಿದ್ದು, ಇನ್ನು ಮುಂದೆ ಕರ್ನಾಟಕ ರಾಜಕೀಯ ಮತ್ತಷ್ಟು ರೋಚಕ ಎನ್ನಿಸಿದರೆ ಅಚ್ಚರಿಯಿಲ್ಲ.












Click it and Unblock the Notifications