ವಿಶ್ವಾಸಮತ ಯಾಚನೆ: ಇನ್ನೂ ಎರಡು ದಿನ ಸಮಯ ಕೊಡಿ ಎಂದ ಮುಖ್ಯಮಂತ್ರಿ
Recommended Video
ಬೆಂಗಳೂರು, ಜುಲೈ 22: ವಿಶ್ವಾಸಮತ ಯಾಚನೆಯನ್ನು ಮುಂದೂಡುತ್ತಲೇ ಬಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇನ್ನೂ ಎರಡು ದಿನಗಳ ಸಮಯಾವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೋರಿದ್ದಾರೆ.
ಸೋಮವಾರ ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಕೃಷ್ಣ ಬೈರೇಗೌಡ, ಎಚ್ ಡಿ ರೇವಣ್ಣ, ಪ್ರಿಯಾಂಕ್ ಖರ್ಗೆ ಅವರು ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದರು.
ಈ ವೇಳೆ ಕುಮಾರಸ್ವಾಮಿ ಅವರು ಬುಧವಾರದವರೆಗೂ ವಿಶ್ವಾಸ ಮತ ಯಾಚನೆಗೆ ಸಮಯ ನೀಡುವಂತೆ ಕೋರಿದರು ಎನ್ನಲಾಗಿದೆ. ವಿಪ್ ಜಾರಿ ಹಾಗೂ ಅತೃಪ್ತ ಶಾಸಕರ ಅರ್ಜಿಗಳ ಕುರಿತು ಇಂದು ಸುಪ್ರೀಂಕೋರ್ಟ್ ಯಾವುದೇ ತೀರ್ಪು ನೀಡಿಲ್ಲ. ನಾಳೆಯೂ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಕಡಿಮೆ. ಹಾಗಾಗಿ ಬುಧವಾರಕ್ಕೆ ವಿಶ್ವಾಸಮತ ಯಾಚನೆಗೆ ದಿನ ನಿಗದಿಪಡಿಸುವಂತೆ ಅವರು ಕೋರಿದರು ಎನ್ನಲಾಗಿದೆ.

ವಿಶ್ವಾಸಮತ ಯಾಚನೆ ಬಗ್ಗೆ ಮಧ್ಯಾಹ್ನದ ಬಳಿಕ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಮನವಿ ಮಾಡಿದರು.
ಆದರೆ, ಅದಕ್ಕೆ ಸ್ಪೀಕರ್ ಅವರು ಸಹಮತ ವ್ಯಕ್ತಪಡಿಸಿಲ್ಲ. ನಿಯೋಗದ ಮನವಿಯಿಂದ ಅವರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸೋಮವಾರ ವಿಶ್ವಾಸಮತ ಯಾಚನೆ ನಡೆಸುವುದಾಗಿ ಶುಕ್ರವಾರ ಸದನದಲ್ಲಿಯೇ ಹೇಳಿದ್ದೇನೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಇದು ನನ್ನ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆಯಾಗಲಿದ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.
ಕನಿಷ್ಠ ಒಂದು ದಿನವಾದರೂ ವಿಶ್ವಾಸಮತ ಯಾಚನೆ ಮುಂದೂಡಿ ಎಂಬ ಮನವಿಗೂ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. 'ನನ್ನನ್ನು ಧರ್ಮ ಸಂಕಟದಲ್ಲಿ ಸಿಲುಕಿಸುತ್ತಿದ್ದೀರಿ' ಎಂದು ರಮೇಶ್ ಕುಮಾರ್ ಹೇಳಿದ್ದಾಗಿ ವರದಿಯಾಗಿದೆ.












Click it and Unblock the Notifications