ಕೇಂದ್ರದ ನೂತನ ನಾಲ್ವರು ಸಚಿವರು ಇಂದು ಬೆಂಗಳೂರಿಗೆ
ಬೆಂಗಳೂರು, ಮೇ 30: ನರೇಂದ್ರ ಮೋದಿ ಅವರ ನೂತನ ಸಂಪಟುದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ರಾಜ್ಯ ಮೂವರು ಸಚಿವರು ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತಕುಮಾರ್, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಮತ್ತು ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ವರ್ ಅವರುಗಳು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜತೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭೆ ಸದಸ್ಯ, ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವ ವೆಂಕಯ್ಯ ನಾಯ್ಡು ಸಹ ಈ ಮೂವರೊಂದಿಗೆ ಆಗಮಿಸಲಿದ್ದಾರೆ.
ಮೋದಿ ಡ್ರೀಂ ಟೀಂನಲ್ಲಿ ಸ್ಥಾನ ಪಡೆದಿರುವ ಈ ಮೂರೂ ಸಚಿವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ರಾಜ್ಯ ಬಿಜೆಪಿಯು ನಿರ್ಧರಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತಕುಮಾರ್, ರೈಲ್ವೆ ಸಚಿವ ಸದಾನಂದ ಗೌಡ, ನಾಗರಿಕ ವಿಮಾನಯಾನ ಖಾತೆ ಸಚಿವ ಸಿದ್ದೇಶ್ವರ್ ಮತ್ತು ನಗರಾಭಿವೃದ್ಧಿ, ವಸತಿ ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ವಿಮಾನ ನಿಲ್ದಾಣದಿಂದ ಅರಮನೆ ಮೈದಾದನ ಗಾಯತ್ರಿ ವಿಹಾರದವರೆಗೂ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.

ನೂತನ ಕೇಂದ್ರ ಸಚಿವ ಜತೆಗೆ ಹೊಸದಾಗಿ ಆಯ್ಕೆಯಾಗಿರುವ ಲೋಕಸಭಾ ಸದಸ್ಯರಿಗೂ ಸಹ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರ್ಗಮಿತ ರಾಜ್ಯಸಭಾ ಸದಸ್ಯರು ಮತ್ತು ರಾಜ್ಯ ಮೇಲ್ಮನೆ ಸದಸ್ಯರಿಗೂ ಇದೇ ಸಂದರ್ಭದಲ್ಲಿ ಅಭಿವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಕ್ಷದ ಸಭೆ ಮುಗಿದ ನಂತರ ನೂತನ ಕೇಂದ್ರ ಸಚಿವ ಅನಂತಕುಮಾರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿ ಕೆಲಸ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ. (ಮೋದಿ ಸಂಪುಟ: ಹೊಸ ರೂಪದಲ್ಲಿ ಸಚಿವರ ಪಟ್ಟಿ)













Click it and Unblock the Notifications