ವಿಧಾನಮಂಡಲ ಕಲಾಪ ಶುಕ್ರವಾರಕ್ಕೆ ವಿಸ್ತರಣೆ
ಬೆಂಗಳೂರು, ಜು.12: ಬಿಎಸ್ ಯಡಿಯೂರಪ್ಪ ಸಲಹೆ ಮತ್ತು ಬೇಡಿಕೆಯಂತೆ ವಿಧಾನ ಮಂಡಲದ ಕಲಾಪವನ್ನು ಒಂದು ದಿನ ವಿಸ್ತರಣೆ ಮಾಡಲಾಗಿದೆ.
ಸಾಲಮನ್ನಾ ಸ್ವರೂಪ ಬದಲಾವಣೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ವಾಪಸ್ ಹಾಗೂ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಯೋಜನೆಯ ಅನುಷ್ಠಾನದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವುದು ಒಂದು ದಿನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಕಲಾಪವನ್ನು ಶುಕ್ರವಾರದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಕುಮಾರಸ್ವಾಮಿ ಬಜೆಟ್ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ಕಾವೇರಿದ ಚರ್ಚೆ
ಗುರುವಾರ ಬೆಳಗ್ಗೆ ವಿಧಾನಸಭೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಈ ವಿಷಯ ಪ್ರಸ್ತಾಪಿಸಿ ಬಜೆಟ್ ಮೇಲಿನ ಚರ್ಚೆಗೆ ಶಾಸಕರು ಮಾತನಾಡಬೇಕಿದೆ. ಬಿಜೆಪಿಯ 15 ಕ್ಕೂ ಹೆಚ್ಚು ಶಾಸಕರು ಮಾತನಾಡುವುದು ಬಾಕಿ ಇದೆ. ಹಾಗೂ ಆಡಳಿತ ಪಕ್ಷದ ಶಾಸಕರೂ ಕೂಡ ಮಾತನಾಡಿಲ್ಲ ಹೀಗಾಗಿ ಕಲಾಪವನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್ ಸದ್ಯಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ, ಕಲಾಪ ಸಲಹಾ ಸಮಿತಿ ಸಭೆಯನ್ನು ಸೇರಿ ಈ ಬಗ್ಗೆ ಚರ್ಚಿಸೋಣ ಎಂದು ಸಮಾಧಾನ ಪಡಿಸಿದರು. ನಂತರ 10 ನಿಮಿಷಗಳ ಬಳಿಕ ಕಲಾಪ ಸಲಹಾ ಸಮಿತಿ ಸಭೆ ಸೇರಿ ಒಂದು ದಿನದ ಮಟ್ಟಿಗೆ ಶುಕ್ರವಾರದವರೆಗೆ ಅಧಿವೇಶನವನ್ನು ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಲ್ಲದೆ ಬಜೆಟ್ ಮೇಲಿನ ಚರ್ಚೆಯ ಮೇಲೂ ಎಚ್ಡಿ ಕುಮಾರಸ್ವಾಮಿ ಅವರು ಗುರುವಾರ ಮಧ್ಯಾಹ್ನದ ನಂತರ ಉತ್ತರ ನೀಡುವ ಬೆಗೆಗೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಹೀಗಾಗಿ ಒಂಭತ್ತು ದಿನಗಳ ಕಾಲ ನಿಗದಿಯಾಗಿದ್ದ ಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನ ಒಂಭತ್ತು ದಿನದಿಂದ ಹತ್ತು ದಿನಕ್ಕೆ ವಿಸ್ತರಣೆಯಾದಂತಾಗಿದೆ.