ಗುತ್ತಿಗೆದಾರರಿಗೆ ಹಣ ನೀಡದ್ದಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು, ಏ.19: ಗುತ್ತಿಗೆ ಹಣ ಪಾವತಿಯಾಗಿದಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಬಿಎಂಪಿ ವಿರುದ್ಧ ಕಿಡಿ ಕಾರಿದೆ. ಅಲ್ಲದೆ, ಇನ್ನೂ ಎಷ್ಟು ಜನ ಸಾಯಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಗುತ್ತಿಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣವನ್ನು ಉಲ್ಲೇಖಿಸದೆ ಪರೋಕ್ಷವಾಗಿ ನ್ಯಾಯಪೀಠ, ನಾನು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಏಕೆ ಹೀಗೆ ಹಣ ಪಾವತಿ ವಿಳಂಬವಾಗುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಾಗಿರುವ ಸಿವಿಲ್ ಕಾಮಗಾರಿಗಳ ಗುತ್ತಿಗೆ ಹಣ ಪಾವತಿಗೆ ಸಂಬಂಧ ಗುತ್ತಿಗೆದಾರ ಬಿ.ಬಿ. ಉಮೇಶ್ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದ್ದರೂ. ಬಿಬಿಎಂಪಿ ಹಣ ಪಾವತಿ ಮಾಡುತ್ತಿಲ್ಲ, ಸಾಲ ಮಾಡಿ ಹಣ ಹೂಡಿ ಕಾಮಗಾರಿ ಮಾಡಿಸಲಾಗಿದೆ. ಆದರೆ ಹಣ ಬಿಡುಗಡೆ ಮಾಡದೇ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.
ಆಗ ನ್ಯಾಯಪೀಠ, 'ಇನ್ನೂ ಎಷ್ಟು ಜನ ಗುತ್ತಿಗೆದಾರರು ಸಾಯಬೇಕು ಎಂದುಕೊಂಡಿದ್ದೀರಿ, ಕೆಲಸ ಮಾಡಿದರೂ ಹಣ ಪಾವತಿಗೆ ಯಾಕೆ ಮೀನಮೇಷ ಎಣಿಸುತ್ತಿದ್ದೀರಿ. ನಾನು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಿದ್ದೇನೆ. ಒಂದು ವೇಳೆ ಗುತ್ತಿಗೆದಾರರು ಮಾಡಿರುವ ಕೆಲಸದಲ್ಲಿ ಲೋಪವಿದೆ ಅಥವಾ ಸರಿಯಾಗಿಲ್ಲವೆಂದರೆ ಹಣ ತಡೆಹಿಡಿಯಬಹುದು, ಆದರೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ ಇದ್ದರೂ ಏಕೆ ಹಣ ಪಾವತಿಸುತ್ತಿಲ್ಲ' ಎಂದು ಕೇಳಿದರು.
ಅಲ್ಲದೆ, 'ಈ ಪ್ರಕರಣವನ್ನು ಸುಮ್ಮನೆ ಬಿಡಲಾಗುವುದಿಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲೇಬೇಕು. ಹಣ ಯಾಕೆ ಪಾವತಿ ಮಾಡಿಲ್ಲ ಎಂಬ ಬಗ್ಗೆ ನಾಳಿದ್ದು ಸೂಕ್ತ ವಿವರಣೆ ನೀಡಬೇಕು. ಇಲ್ಲದೇ ಹೋದಲ್ಲಿ ಆಯುಕ್ತರನ್ನೇ ಖುದ್ದು ಕೋರ್ಟ್ಗೆ ಹಾಜರಾಗುವಂತೆ ಆದೇಶಿಸಲಾಗುವುದು' ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ಜೊತೆಗೆ ''ಸಂವಿಧಾನ ಇರುವುದು ತತ್ವಾಚಾರಣೆಗೆ ಅಲ್ಲ. ಅದರಲ್ಲಿ ಅಡಕವಾಗಿರುವ ತತ್ವಗಳನ್ನು ನ್ಯಾಯದಾನಕ್ಕೆ ಉಪಯೋಗಿಸಬೇಕು ಎಂಬುದು ಸಂವಿಧಾನ ನಿರ್ಮಾತೃಗಳ ಆಶಯವಾಗಿತ್ತು. ನೀವು ತತ್ವ ಹೇಳಿದರೆ ಅದನ್ನು ಕೇಳುತ್ತಾ ಕೂರಲು ಆಗುವುದಿಲ್ಲ'' ಎಂದು ನ್ಯಾಯಪೀಠ ಹೇಳಿತು.












Click it and Unblock the Notifications